ಬೆಂಗರೆ: ಕಾಂಗ್ರೆಸ್ ಸಮಿತಿ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಮಂಗಳೂರು,ಜು.24:ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಬೆಂಗರೆ ವಾರ್ಡ್ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ನಗರದ ಕೆಎಂಸಿ ಆಸ್ಪತ್ರೆ, ರೆಡ್ಕ್ರಾಸ್ ಸಂಸ್ಥೆ, ಎ.ಜೆ. ಆಸ್ಪತ್ರೆ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಕೇಂದ್ರ ಇವರ ಸಹಯೋಗದೊಂದಿಗೆ ತೋಟ ಬೆಂಗರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ, ಜನರ ಆರೋಗ್ಯ ಕ್ಷಮತೆಯನ್ನು ಕಾಪಾಡಿಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ದಕ್ಷಿಣ ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ರೋಗವನ್ನು ತಡೆಗಟ್ಟುವುದು ನಮ್ಮ ಪ್ರಥಮ ಉದ್ದೇಶ. ಪ್ರಾರಂಭಿಕ ಹಂತದಲ್ಲಿ ಇದನ್ನು ತಡೆಗಟ್ಟಿದರೆ, ರೋಗವನ್ನು ದೂರಮಾಡಬಹುದು. ಕುಟುಂಬದ ಮುಖ್ಯಸ್ಥರಿಗೆ ಕಾಯಿಲೆ ಬಂದರೆ ಇಡೀ ಸಂಸಾರವೇ ತೊಂದರೆಗೀಡಾಗುವ ಪರಿಸ್ಥಿತಿ ಎದುರಾಗಿದೆ. ಆದುದರಿಂದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಕೊಳ್ಳಲು ಇದೊಂದು ಸದವಕಾಶವಾಗಿದೆ. ಬೆಂಗರೆ ಬಹಳಷ್ಟು ಬಡವರು ಇರುವಂತಹ ಪ್ರದೇಶವಾದ್ದರಿಂದ ಇಲ್ಲಿನ ಜನರು ಇಂತಹ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.
ಹಿರಿಯ ಕಾಂಗ್ರೆಸ್ ಮುಖಂಡರಾದ ಪ್ರಭಾಕರ ಶ್ರೀಯಾನ್, ಶೇಖರ ಸುವರ್ಣ, ಬೆಂಗರೆ ಮಹಾಜನ ಸಂಘದ ಅಧ್ಯಕ್ಷ ಚೇತನ್ ಬೆಂಗರೆ , ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಟಿ.ಕೆ. ಸುಧೀರ್, ಮೀನುಗಾರಿಕಾ ಫೆಡರೇಶನ್ ನಿರ್ದೇಶಕಿ ಸರಿತಾ, ಡಾ ಮಂಜಯ್ಯ ಶೆಟ್ಟಿ, ರಮಾನಂದ ಪೂಜಾರಿ, ಆಸೀಫ್, ಅಸ್ಲಾಂ, ಅಬ್ದುಲ್ ಸಮದ್, ನವೀನ್ ಕರ್ಕೇರಾ, ಕುಲಶೇಖರ ಪುತ್ರನ್, ಶಾಲೆಯ ಮುಖ್ಯೋಪಾಧ್ಯಾಯಿನಿ ವಿನೋದಾ ಅಮೀನ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ದಂತ ಚಿಕಿತ್ಸೆ, ಕಣ್ಣಿನ ತಪಾಸಣೆಯನ್ನು ಹಾಗೂ ಮಲೇರಿಯಾ ತಪಾಸಣೆ, ಮಳೆಯರಿಗೆ ಥೈರಾಯಿಡ್ ಕಾಯಿಲೆಯ ಪರೀಕ್ಷೆಯನ್ನು ನಡೆಸಲಾಯಿತು. ಕಣ್ಣಿನ ಚಿಕಿತ್ಸೆ ಪಡೆದವರಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.