ಜಲ್ಲಿಕಟ್ಟು ಸ್ಪರ್ಧೆಗೆ ನಿಷೇಧ ಹಿಂಪಡೆಯಲು ಸುಪ್ರೀಂ ನಕಾರ
ಹೊಸದಿಲ್ಲಿ, ಜು.26: ತಮಿಳುನಾಡಿನಲ್ಲಿ ಹಿಂದೆ ನಡೆಯುತ್ತಿದ್ದ ಸಾಂಪ್ರದಾಯಿಕ ಜಲ್ಲಿ ಕಟ್ಟು ಸ್ಪರ್ಧೆಗೆ ವಿಧಿಸಲಾಗಿದ್ದ ನಿಷೇಧವನ್ನು ಹಿಂದಕ್ಕೆ ಪಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಜಾನುವಾರುಗಳ ಜಲ್ಲಿಕಟ್ಟು ಸ್ಪರ್ಧೆಯ ವಿರುದ್ಧ ವಿಧಿಸಲಾಗಿದ್ದ ನಿಷೇಧವನ್ನು ಜನವರಿ 8ರಂದು ತೆರವುಗೊಳಿಸಿ ಕೇಂದ್ರ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಬಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಸ್ಪರ್ಧೆಗೆ ಕೇಂದ್ರ ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.
ನಿಷೇಧವನ್ನು ತೆರವುಗೊಳಿಸುವಂತೆ ಸಲ್ಲಿಸಲಾದ ಮನವಿಗೆ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ತಿರಸ್ಕರಿಸಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದೆ.
ಜಲ್ಲಿ ಕಟ್ಟು ಸ್ಪರ್ಧೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾಯಮೂರ್ತಿ ಮಿಶ್ರಾ ನೇತೃತ್ವದ ನ್ಯಾಯಪೀಠ " ಬಾಲ್ಯ ವಿವಾಹ ಹಳೆಯ ಸಂಪ್ರದಾಯವಾಗಿತ್ತು. ಅದನ್ನು ಕಾನೂನು ಸಮ್ಮತಗೊಳಿಸಲು ಸಾಧ್ಯವಿಲ್ಲ ಹಿಂದಿನ ಕಾಲದಲ್ಲಿ ಅದು ಸಾಮಾನ್ಯವಾಗಿತ್ತು. ಆದರೆ ನಿಷೇಧವಾಗಿರುವ ಈ ಪದ್ಧತಿಯನ್ನು ಮತ್ತೆ ಆಚರಣೆಗೆ ತರುವುದು ಅಸಾಧ್ಯ. ಅದೇ ರೀತಿ ಜಲ್ಲಿ ಕಟ್ಟು ಸ್ಪರ್ಧೆಗೆ ಅವಕಾಶ ನೀಡಲು ಸಾಧ್ಯವಿಲ್ಲ ” ಎಂದು ಹೇಳಿದೆ.