×
Ad

ಪುತ್ತೂರು ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ನಡೆದಿಲ್ಲ: ಉಪನಿರ್ದೇಶಕರ ಸ್ಪಷ್ಟನೆ

Update: 2016-07-26 20:31 IST

ಮಂಗಳೂರು, ಜು.26: ಪುತ್ತೂರು ತಾಲೂಕಿನ ನರಿಮೊಗರು ಪುರುಷರ ಕಟ್ಟೆ, ಮುಕ್ವೆ ಪರಿಸರದಲ್ಲಿ ಯಾವುದೇ ಬಾಲ್ಯ ವಿವಾಹ ಪ್ರಕರಣ ನಡೆದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಪುರುಷರಕಟ್ಟೆಯಲ್ಲಿ ಸೋಮವಾರ ನಡೆದಿದ್ದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಆಶಾ ಕಾರ್ಯಕರ್ತೆ ಮಾತನಾಡುತ್ತಿದ್ದಾಗ, ಈ ಭಾಗದಲ್ಲಿ 4 ಬಾಲ್ಯ ವಿವಾಹ ಪ್ರಕರಣ ನಡೆದಿದೆ ಎಂದು ತಿಳಿಸಿರುವುದಾಗಿ ವರದಿಯಾಗಿತ್ತು. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಮಂಗಳವಾರ ಈ ಸ್ಥಳಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ಈ ಭಾಗದಲ್ಲಿ ಬಾಲ್ಯ ವಿವಾಹ ನಡೆಯಬಹುದಾದ ನಾಲ್ಕು ಪ್ರಕರಣಗಳಲ್ಲಿ ಎರಡು ಪ್ರಕರಣಗಳಲ್ಲಿ ಮದುವೆಗೆ ಮುಂಚೆಯೇ ಮಾಹಿತಿ ದೊರೆತು ಮದುವೆ ಪ್ರಕ್ರಿಯೆ ನಿಲ್ಲಿಸಲಾಗಿದೆ. ಇನ್ನೆರಡು ಕುಟುಂಬಗಳು ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಇಲ್ಲಿನ ಸ್ಥಳೀಯರು, ಸರಕಾರಿ ಸಿಬ್ಬಂದಿಯನ್ನು ವಿಚಾರಿಸಿದಾಗ, ಯಾವುದೇ ಬಾಲ್ಯ ವಿವಾಹದ ಪ್ರಕರಣ ನಡೆದಿರುವುದು ಕಂಡುಬಂದಿಲ್ಲ. ಪೊಲೀಸ್ ಅಧಿಕಾರಿಗಳೂ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಪುತ್ತೂರು ತಾ. ಮಟ್ಟದ ಬಾಲ್ಯ ವಿವಾಹ ನಿಷೇಧ ಸಮಿತಿ ಸಭೆ ನಡೆಸಲಾಗಿದ್ದು, ಬಾಲ್ಯ ವಿವಾಹ ನಡೆದಿರುವ ವರದಿಯ ಬಗ್ಗೆ ಪರಿಶೀಲಿಸಲಾಗಿದ್ದು, ನರಿಮೊಗರು, ಪುರುಷರಕಟ್ಟೆ ಪರಿಸರದಲ್ಲಿ ಯಾವುದೇ ಬಾಲ್ಯ ವಿವಾಹಗಳು ನಡೆದಿರುವುವುದು ಕಂಡುಬಂದಿಲ್ಲ.

ಬಾಲ್ಯ ವಿವಾಹ ನಡೆಯಬಹುದಾದ ಪ್ರಕರಣಗಳ ಮೇಲೆ ಇಲಾಖೆಯು ನಿಗಾ ಇಡಲಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಬಾಲ್ಯ ವಿವಾಹ ನಡೆಯುವ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ಸಮೀಪದ ಅಂಗನವಾಡಿ ಕಾರ್ಯಕರ್ತೆಯರಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News