ಭಾರತದಲ್ಲಿ ಪ್ರತಿ ವರ್ಷ ಕ್ಯಾನ್ಸರ್ ಗೆ ಎಷ್ಟು ಲಕ್ಷ ಮಂದಿ ಬಲಿಯಾಗುತ್ತಾರೆ ಗೊತ್ತೇ ? ಕ್ಯಾನ್ಸರ್ ಗೆ ಕಾರಣಗಳು ಏನು?
ನವದೆಹಲಿ, ಜು.28 : ದೇಶದಲ್ಲಿ ಪ್ರತಿ ವರ್ಷ 6.8 ಲಕ್ಷ ಮಂದಿ ಕ್ಯಾನ್ಸರ್ ಗೆ ಬಲಿಯಾಗುತ್ತಾರೆ ಹಾಗೂ 10 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತವೆ, ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ರಾಜ್ಯಸಭೆಗೆ ನೀಡಿದ ಲಿಖಿತ ಮಾಹಿತಿ ತಿಳಿಸುತ್ತದೆ. ವಾಯು ಮಾಲಿನ್ಯ ಹಾಗೂ ಅನಾರೋಗ್ಯಕರ ಜೀವನ ಪದ್ಧತಿಯೇ ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವೆಂದು ಸರಕಾರ ತಿಳಿಸಿದೆ.
ರಾಜ್ಯಸಭೆಗೆ ಸಚಿವರು ನೀಡಿದ ಮಾಹಿತಿಯ ಪ್ರಕಾರ ದೇಶದಲ್ಲಿ ಸಂಭವಿಸುವ ಒಟ್ಟು ಸಾವುಗಳಲ್ಲಿ 7 ಶೇ. ಸಾವುಗಳು ವಿವಿಧ ರೀತಿಯ ಕ್ಯಾನ್ಸರ್ ರೋಗದಿಂದುಂಟಾಗುತ್ತವೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಸಂಖ್ಯೆಗಳ ಆಧಾರದಲ್ಲಿ ಸರಕಾರ ಮಾಹಿತಿ ನೀಡಿದ್ದು ಈ ವರದಿಯಲ್ಲಿ ತಿಳಿಸಿದಂತೆ ವಿಶ್ವದ 20 ಅತ್ಯಂತ ಮಲಿನ ನಗರಗಳಲ್ಲಿ 14 ಭಾರತದಲ್ಲಿವೆ.
``ವಯೋ ಸಂಬಂಧಿ ಸಮಸ್ಯೆಗಳು, ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆ, ಕಳಪೆ ಆಹಾರ ಹಾಗೂ ವಾಯು ಮಾಲಿನ್ಯವೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗಿದೆ,''ಎಂದು ವರದಿ ತಿಳಿಸಿದೆ.
ಸರಕಾರ ವಾಯು ಮಾಲಿನ್ಯ ಹಾಗೂ ಆರೋಗ್ಯ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸುವುದು, ಎಂದು ಸಚಿವೆ ರಾಜ್ಯ ಸಭೆಗೆ ತಿಳಿಸಿದ್ದಾರೆ. ವಾಯು ಮಾಲಿನ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಧಾನ್ ಮಂತ್ರಿ ಉಜ್ವಲ ಯೋಜನೆಯನ್ವಯ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಎಲ್ ಪಿಜಿ ಸಂಪರ್ಕವೊದಗಿಸುವ ಯೋಜನೆಯನ್ನು ಪೆಟ್ರೋಲಿಯಂ ಸಚಿವಾಲಯ ಈಗಾಗಲೇ ಆರಂಭಿಸಿದೆ, ಎಂದು ಅವರು ಮಾಹಿತಿ ನೀಡಿದರು