ಮೂಡುಬಿದಿರೆ: ಸಿಎಂ ಪುತ್ರನ ಶೀಘ್ರ ಚೇತರಿಕೆಗೆ ಶಾಸಕ ಜೈನ್ ನೇತೃತ್ವದಲ್ಲಿ ಪ್ರಾರ್ಥನೆ

Update: 2016-07-29 13:36 GMT

ಮೂಡುಬಿದಿರೆ, ಜು.29: ರಾಜ್ಯದಲ್ಲಿ ಪ್ರಸ್ತುತ ಸಂಕಷ್ಟಮಯ ವಾತಾವರಣ ಸೃಷ್ಟಿಯಾಗಿದೆ. ರಾಜ್ಯದ ಹಿತ ಕಾಯುವ ಹೊಣೆಗಾರಿಕೆಯಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯರ ಪುತ್ರನ ಆರೋಗ್ಯವೂ ಸುಧಾರಣೆಯಾಗಿ ಮುಖ್ಯಮಂತ್ರಿಗಳು ಶೀಘ್ರ ರಾಜ್ಯಕ್ಕೆ ಹಿಂತಿರುಗುವಂತಾಗಲಿ ಎಂದು ಮೂಡುಬಿದಿರೆ ಶಾಸಕ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಅವರು ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೂಡುಬಿದಿರೆ ಕಾರಣಿಕ ಹನುಮಂತ ದೇವಾಲಯದಲ್ಲಿ 108 ಸೀಯಾಳಾಭಿಷೇಕ, ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಮೂಡುಬಿದಿರೆ ಜೈನ ಬಸದಿಗಳಲ್ಲಿ ವಿಶೇಷ ಪೂಜೆ, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ರಂಗಪೂಜೆ, ತೋಡಾರು ಬದ್ರಿಯಾ ಜುಮ್ಮಾ ಮಸೀದಿ ಹಾಗೂ ಅಲಂಗಾರು ಬಾಲಯೇಸು ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಚೌಟರ ಅರಮನೆಯ ಕುಲದೀಪ್ ಎಂ., ಹನುಮಂತ ಮತ್ತು ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಉಮೇಶ್ ಜಿ. ಪೈ, ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕೊರಗಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಪ್ರಭು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News