ಕಾಲೇಜುಗಳಲ್ಲಿ ರ್ಯಾಗಿಂಗ್ ಪಿಡುಗು ತಡೆಗೆ ಕಠಿಣ ಕ್ರಮ ಕೈಗೊಳ್ಳಿ: ಲೋಕಸಭೆಯಲ್ಲಿ ಶೋಭಾ ಆಗ್ರಹ

Update: 2016-07-29 17:37 GMT

ಉಡುಪಿ, ಜು.29: ಕಾಲೇಜುಗಳಲ್ಲಿ ರ್ಯಾಗಿಂಗ್ ಹಾವಳಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾರಕವಾಗಿದ್ದು, ಅನೇಕ ವಿದ್ಯಾರ್ಥಿಗಳ ಭವಿಷ್ಯ ಇದರಿಂದ ಕಮರಿ ಹೋಗುತ್ತಿದೆ. ಆದುದರಿಂದ ದೇಶದಾದ್ಯಂತ ಕಾಲೇಜುಗಳಲ್ಲಿ ರ್ಯಾಗಿಂಗ್ ಹಾವಳಿಯನ್ನು ತಡೆಗಟ್ಟಲು ಕೇಂದ್ರ ಸರಕಾರ ಏಕರೂಪದ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ರ್ಯಾಗಿಂಗ್ ಪಿಡುಗು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಅಸಂಖ್ಯಾತ ವರದಿಗಳು ಬರುತ್ತಿವೆ. ಇದನ್ನು ಕಟ್ಟುನಿಟ್ಟಾಗಿ ನಿರ್ಮೂಲನ ಮಾಡಬೇಕಾಗಿದೆ. ಇದಕ್ಕಾಗಿ ರಾಜ್ಯವಾರು ನಡೆದಿರುವ ರ್ಯಾಗಿಂಗ್ ಪ್ರಕರಣಗಳ ಕಾಲೇಜುವಾರು ವಿಶ್ಲೇಷಣೆ ನಡೆಸಿ ತಡೆಗಟ್ಟುವಿಕೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಶೋಭಾ ಕರಂದ್ಲಾಜೆ ಪ್ರತಿಪಾದಿಸಿದರು.

ಶೋಭಾ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆಯ ಸಹಾಯಕ ಸಚಿವ ಡಾ.ಮಹೇಂದ್ರನಾಥ್ ಪಾಂಡೆ, ಪ್ರತಿಯೊಂದು ಕಾಲೇಜು/ವಿದ್ಯಾಸಂಸ್ಥೆಗಳಲ್ಲಿ ರ್ಯಾಗಿಂಗ್ ಕುರಿತಾದ ದೂರುಗಳನ್ನು ಸ್ವೀಕರಿಸಲು ಸೂಚಿಸಲಾಗಿದೆ.ರ್ಯಾಗಿಂಗ್ ಪಿಡುಗಿನ ವಿರುದ್ದ ಕಠಿಣ ಕ್ರಮಗಳು ಜಾರಿಯಲ್ಲಿ ರುವುದರಿಂದ ಇತ್ತೀಚಿನ ದಿನಗಳಲ್ಲಿ ರ್ಯಾಗಿಂಗ್ ಪ್ರಕರಣಗಳು ಕಡಿಮೆಯಾಗಿವೆ. ಅಲ್ಲದೆ ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ರ್ಯಾಗಿಂಗ್ ತಡೆಗಟ್ಟಲು ಇರುವ ಕ್ರಮಗಳ ಬಗ್ಗೆ ಶಿಕ್ಷಣ ಸಂಸ್ಥೆಗಳು, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವ ಅಭಿಯಾನವನ್ನು ಕೈಗೊಂಡಿದೆ ಎಂದರು.

ರ್ಯಾಗಿಂಗ್ ಪಿಡುಗನ್ನೇ ಸಂಪೂರ್ಣ ನಿರ್ಮೂಲನ ಮಾಡಲು ಬೇಕಾಗಿರುವ ಕ್ರಮಗಳನ್ನು ಕೈಗೊಳ್ಳಲು ಯುಜಿಸಿಯು ವಿದ್ಯಾಸಂಸ್ಥೆಗಳ ಆಡಳಿತಕ್ಕೆ ಹೆಚ್ಚಿನ ಅಧಿಕಾರ ನೀಡಿದೆ. ರ್ಯಾಗಿಂಗ್ ದೂರು ನೀಡಲು ಟೋಲ್ ಫ್ರೀ ನಂಬರ್, ರ್ಯಾಗಿಂಗ್ ತಡೆಗಟ್ಟುವ ಸಮಿತಿಗಳ ರಚನೆ ಮೊದಲಾದ ಕ್ರಮಗಳನ್ನು ಅದು ಕೈಗೊಂಡಿದೆ. ಸಿಬಿಎಸ್‌ಇ ಕೂಡಾ ತನ್ನ ಅಧೀನ ವಿದ್ಯಾಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ರ್ಯಾಗಿಂಗ್ ತಡೆಗಟ್ಟುವಿಕೆಯನ್ನು ಪ್ರಮುಖ ಅಂಶವನ್ನಾಗಿ ಪರಿಗಣಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ರ್ಯಾಗಿಂಗ್ ಮುಂದಿನ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ನಿರ್ಮೂಲನವಾಗಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News