×
Ad

ಅಚ್ಛೇ ದಿನ್ ಹೆಸರಿನಲ್ಲಿ ಜನತೆಗೆ ಪಂಗನಾಮ ಹಾಕಿದ ಮೋದಿ ಸರಕಾರ: ಸಿಪಿಎಂ ಆಕ್ರೋಶ

Update: 2016-07-30 23:32 IST

ಮಂಗಳೂರು, ಜು.30: ಎರಡು ವರ್ಷಗಳ ಹಿಂದೆ ದೇಶಾದ್ಯಂತ ಮೋದಿ ಹವಾ ಸೃಷ್ಟಿಸಿ, ಕೋಟ್ಯಾಂತರ ಹಣ ಸರಿದು ಅಬ್ಬರದ ಪ್ರಚಾರ ಗಿಟ್ಟಿಸಿ, ಎಲ್ಲಾ ಸಮಸ್ಯೆಗಳಿಗೆ ನರೇಂದ್ರ ಮೋದಿಯೇ ಉತ್ತರ ಎಂದು ಬಿಂಬಿಸಿ, ಜನಸಾಮಾನ್ಯರ ಮಧ್ಯೆ ಒಳ್ಳೆಯ ದಿನಗಳು ಬರಲಿದೆ ಎಂಬ ಭ್ರಮೆಯನ್ನು ಸೃಷ್ಟಿಸಿಅಧಿಕಾರಕ್ಕೇರಿದ ನರೇಂದ್ರ ಮೋದಿ ಸರ್ಕಾರವು ಜನತೆಯ ಹಿತ ಕಾಯುವ ಬದಲು ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುವ ಮೂಲಕ ಸರಕಾರವು ಯಾವ ಪಥದಲ್ಲಿ ಮುನ್ನಡೆಯುತ್ತಿದೆ ಎಂಬ ಸ್ಪಷ್ಟ ಸಂದೇಶ ನೀಡಿದೆ. ಕಳೆದ 2 ವರ್ಷಗಳಲ್ಲಿ ಕಠಿಣ ದಿನಗಳನ್ನು ಜನತೆ ಎದುರಿಸತ್ತಿತಿದ್ದಾರೆ. ಈ ಮೂಲಕ ದೇಶದ ಕೋಟ್ಯಾಂತರ ಜನತೆಗೆ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರವು ಪಂಗನಾಮ ಹಾಕಿದೆ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಇಂದು ನಗರದ ಸೆಂಟ್ರಲ್ ಮಾರ್ಕೆಟ್ ಬಳಿಯಲ್ಲಿ ಸಿಪಿಎಂ ಪ್ರಚಾರಾಂದೋಲನದ ಅಂಗವಾಗಿ ಜರುಗಿದ ಪ್ರತಿಭಟನಾ ಸಭೆಯನ್ನುದ್ಧೇಶಿಸಿ ಮಾತನಾಡಿದರು.

ಅಧಿಕಾರಕ್ಕೆ ಬಂದರೆ ಕೇವಲ 100 ದಿನಗಳಲ್ಲಿ ಕಪ್ಪು ಹಣವನ್ನು ದೇಶಕ್ಕೆ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಣ ಹಾಕುವುದಾಗಿ ಬೊಗಳೆ ಬಿಟ್ಟ ಬಿಜೆಪಿ, ಇಂದು ಕಪ್ಪು ಹಣವನ್ನು ತರಲು ಸಾಧ್ಯವಿಲ್ಲ, ಅದೆಲ್ಲ ಕೇವಲ ಚುನಾವಣಾ ಗಿಮಿಕ್ ಎಂದು ಸ್ವತಃ ಕೇಂದ್ರ ಸಚಿವರಾದ ಅರುಣ್ ಜೇಟ್ಲಿಯವರು ಹೇಳಿರುವುದು ತೀರಾ ಖಂಡನೀಯವಾಗಿದೆ. ಮೇಕ್ ಇನ್ ಇಂಡಿಯಾದ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳನ್ನು ಸ್ವತಃ ನರೇಂದ್ರಮೋದಿಯವರು ಕೈಬೀಸಿ ಕರೆದರೂ ಉದ್ಯೋಗವಂತೂ ಸೃಷ್ಟಿಯಾಗಲಿಲ್ಲ. ಯುವಜನತೆಗೆ ಉದ್ಯೋಗವೆಂಬುದು ಮರೀಚಿಕೆಯಾಗಿದೆ. ಱಬೇಟಿ ಬಚಾವೋ, ಬೇಟಿ ಫಡಾವೋೞ ಘೋಷಣೆ ಮೊಳಗಿಸಿದ ಕೇಂದ್ರ ಸರಕಾರವು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚುವರಿ ಹಣಮೀಸಲಿಡುವ ಬದಲು ಶೇ. 8.3 ಹಣವನ್ನೇ ಕಡಿತಗೊಳಿಸಿದೆ. ಮಾತ್ರವಲ್ಲದೆ ಬಿಸಿಯೂಟಕ್ಕೆ ನೀಡುವ ಹಣಕ್ಕೆ ಕತ್ತರಿ ಹಾಕಿದೆ. ಸ್ವಚ್ಛ ಭಾರತ್ ಹೆಸರಿನಲ್ಲಿ ದೇಶದ ಜನರಲ್ಲಿ ಭ್ರಮೆಯನ್ನು ಸೃಷ್ಟಿಸಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ದೇಶದಾದ್ಯಂತ ಹೆಚ್ಚುತ್ತಿದ್ದು ರೈತರ ಬದುಕಿನಲ್ಲಿ ಕರಾಳ ಛಾಯೆ ಮೂಡಿದೆ. ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸಿ ಮಾಲಕರ ಪರ ಧೋರಣೆಯನ್ನು ಅನುಸರಿಸುವ ಮೋದಿ ಸರಕಾರವು ಕಾರ್ಮಿಕರ ವಿರೋಧಿಯಾಗಿ ವರ್ತಿಸುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಸರಕಾರಗಳಿಗೆ ಜನತೆಯು ತಕ್ಕ ಪಾಠವನ್ನು ಕಲಿಸಬೇಕೆಂದು ಕರೆ ನೀಡಿದರು.

ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಸದಸ್ಯ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ಜನತೆಯ ಸಂಕಷ್ಟಗಳಿಗೆ ಸಬ್ಸಿಡಿ ನೀಡುವ ಮೂಲಕ ಸಹಾಯ ಮಾಡಬೇಕಾದ ಕೇಂದ್ರ ಸರಕಾರವು ಜನರಲ್ಲಿ ಸಬ್ಸಿಡಿ ಹಣವನ್ನು ತ್ಯಾಗ ಮಾಡಿ ಎಂದು ಹೇಳಿರುವುದು ಮೂರ್ಖತನದ ಪರಮಾವಧಿಯಾಗಿದೆ ಎಂದರು. ಕಳೆದ ಎರಡು ವರ್ಷಗಳಲ್ಲಿ ಈ ದೇಶದಲ್ಲಿ ಮಹಿಳೆಯರಿಗೆ, ದಲಿತ, ಆದಿವಾಸಿ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ. ಎಲ್ಲರೂ ಭಯದ ನೆರಳಲ್ಲಿ ಬದುಕುವಂತಾಗಿದೆ. ದಲಿತರ ಮೇಲಿನ ದೌರ್ಜನ್ಯ, ಕೊಲೆ ಅವ್ಯಾಹತವಾಗಿ ನಡೆಯುತ್ತಿದೆ. ಗೋಮಾಂಸ ಗೋಸಾಗಾಟದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವ ಮೂಲಕ ಕೇಂದ್ರ ಸರಕಾರವೇ ಸಂಚು ರೂಪಿಸುತ್ತಿದೆ ಎಂದು ಹೇಳಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವೂ ಕೂಡ ಕಾರ್ಮಿಕರ, ಜನತೆಯ ಹಿತ ಕಾಪಾಡುವ ಬದಲು ಜನವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಸಭೆಯಲ್ಲಿ ಸಿಪಿಎಂ ಮಂಗಳೂರು ನಗರ ಸಮಿತಿ ಸದಸ್ಯೆ ಭಾರತಿ ಬೋಳಾರ್, ನಗರಕೇಂದ್ರ ವಿಭಾಗ ಸಮಿತಿಯ ಮುಖಂಡರಾದ ಸಂತೋಷ್ ಆರ್.ಎಸ್., ಮುಹಮ್ಮದ್ ಮುಸ್ತಫಾ, ಅನ್ಸಾರ್, ನಾಗೇಶ್ ಕೋಟ್ಯಾ, ಸುಂದರ್ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಸಂತೋಷ್ ಆರ್.ಎಸ್. ಸ್ವಾಗತಿಸಿದರು. ಭಾರತಿ ಬೋಳಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News