ಪಡುಬಿದ್ರೆ: ಗದ್ದೆಯಲ್ಲಿ ನೇಜಿ ನೆಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು
ಪಡುಬಿದ್ರೆ, ಆ.2: ರೋಟರಿ ಕ್ಲಬ್ ಪಡುಬಿದ್ರೆ ಉಚ್ಚಿಲ ಸರಸ್ವತಿ ವಿದ್ಯಾಮಂದಿರದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ನೇಜಿ ನೆಡುವ ಪ್ರಾತ್ಯಕ್ಷಿಕೆಯಲ್ಲಿ ವಿದ್ಯಾರ್ಥಿಗಳು ನೇಜಿ ನೆಟ್ಟು ಸಂಭ್ರಮಿಸಿದರು.
ಸೋಮವಾರ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೃಷಿಕ ರಾಮಚಂದ್ರ ಆಚಾರ್ಯರ ಗದ್ದೆಯಲ್ಲಿ ನೇಜಿ ನೆಟ್ಟರು. ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಮಂದಿರ ಶಾಲೆಯ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ ನೇಜಿ ನೆಡುವ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇದೇ ರೀತಿ ಅನ್ನ ಯಾವುದರಲ್ಲಿ ಬೆಳೆಯುತ್ತದೆ ಎಂಬ ಪ್ರಶ್ನೆಯನ್ನು ಮುಂದಿನ ಪೀಳಿಗೆ ಕೇಳುವುದರಲ್ಲಿ ಸಂಶಯ ಇಲ್ಲ. ಆದ್ದರಿಂದ ನಾವು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಸಮಗ್ರ ಮಾಹಿತಿ ನೀಡುವ ಪ್ರಯುಕ್ತ ಇಂದು ಪಡುಬಿದ್ರೆ ರೊಟರಿ ಕ್ಲಬ್ ಸಹಯೋಗದಲ್ಲಿ ಭತ್ತದ ನಾಟಿಯ ಪ್ರಾತಕ್ಷಿಕೆ ಆಯೋಜಿಸಿದ್ದೇವೆ. ಇದರಿಂದ ಕೃಷಿಯ ಬಗ್ಗೆ ವಿದ್ಯಾರ್ಥಿಗಳಗೆ ಸ್ವಲ್ಪವಾದರೂ ಗೊತ್ತಾಗಲಿದೆ ಎಂದರು.
ಪಡುಬಿದ್ರೆ ರೋಟರಿ ಅಧ್ಯಕ್ಷ ಹಮೀದ್ ಪಡುಬಿದ್ರೆ, ಕಾರ್ಯದರ್ಶಿ ಕರುಣಾಕರ ನಾಯಕ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಇಂದಿರಾ ಶೆಟ್ಟಿ ಉಪಸ್ಥಿತರಿದ್ದರು.