ಅಪರಿಚಿತನ ಪ್ರಾಣ ಉಳಿಸಿ ಕೊನೆಯುಸಿರೆಳೆದ ಆಪದ್ಬಾಂಧವ ಫಯಾಝ್ ಉಳ್ಳಾಲ್
ಉಳ್ಳಾಲ, ಆ.6: ಉಳ್ಳಾಲ ಅಳಿವೆಬಾಗಿಲಿನಲ್ಲಿ ಮೀನುಗಾರಿಕಾ ದೋಣಿ ಮುಳುಗಿ, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೀನುಗಾರ ಪೈಕಿ ಓರ್ವನನ್ನು ರಕ್ಷಿಸಿ, ಮತ್ತೊಬ್ಬರ ರಕ್ಷಣೆಗೆ ಯತ್ನಿಸುತ್ತಿದ್ದ ವೇಳೆ ಕೋಟೆಪುರದ ಆಪದ್ಭಾಂಧವ ಎಂದೇ ಪ್ರಸಿದ್ಧರಾಗಿದ್ದ ಜೀವರಕ್ಷಕ ಪಡೆಯ ಫಯಾಝ್ (38) ಮೃತಪಟ್ಟಿದ್ದಾರೆ. ಪರೋಪಕಾರಗೈಯುತ್ತಲೇ ತನ್ನ ಪ್ರಾಣತೆತ್ತ ಫಯಾಝ್ ಅವರ ಮೃತ್ಯು ಕೋಟೆಪುರವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಇಂದು ಮಧ್ಯಾಹ್ನ ವೇಳೆ ಉಳ್ಳಾಲ ಕೋಟೆಪುರದ ಅಳಿವೆಬಾಗಿಲಿನ ಬಳಿ ಮೀನುಗಾರಿಕೆ ನಡೆಸುತ್ತಿದ್ದ ನಾಡದೋಣಿಯೊಂದು ಕಡಲ ಅಲೆಗೆ ಸಿಲುಕಿ ಮಗುಚಿತ್ತು. ದೋಣಿಯಲ್ಲಿದ್ದ ಮೂವರು ಮೀನುಗಾರರು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದರು. ಇದನ್ನು ಸಮುದ್ರತೀರದಲ್ಲೇ ಇದ್ದ ಫಯಾಝ್ ಗಮನಿಸಿದ್ದು, ಕೂಡಲೇ ಕಡಲಿಗೆ ಧುಮುಕಿ, ಮುಳುಗುತ್ತಿದ್ದ ಮೀನುಗಾರರ ಪೈಕಿ ಓರ್ವನನ್ನು ದಡಕ್ಕೆ ಎಳೆದು ತಂದಿದ್ದರು. ಮತ್ತೊಬ್ಬನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ವೇಳೆ ಸಮುದ್ರದ ಅಲೆಯ ರಭಸಕ್ಕೆ ತಲೆ ಬಂಡೆಕಲ್ಲೊಂದಕ್ಕೆ ತಾಗಿ ಗಾಯಗೊಂಡು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉಳ್ಳಾಲ ವ್ಯಾಪ್ತಿಯಲ್ಲಿ ಯಾವುದೇ ಅವಘಡಗಳು ಸಂಭವಿಸಿದರೂ, ಫಯಾಝ್ ಅವರು ತಕ್ಷಣ ಕಾರ್ಯಪ್ರವೃತ್ತರಾಗುತ್ತಿದ್ದರು. ಸೋಮೇಶ್ವರ ಕಡಲತೀರದಲ್ಲಿ ನೀರುಪಾಲಾಗುತ್ತಿದ್ದ ಮೂವರು ಹೊರ ಜಿಲ್ಲೆಗಳ ಪ್ರವಾಸಿಗರನ್ನು ರಕ್ಷಿಸಿದ್ದರು. ಉಳ್ಳಾಲ ಕಡಲತೀರದಲ್ಲೂ ನೀರುಪಾಲಾಗುತ್ತಿದ್ದವರನ್ನು ರಕ್ಷಿಸಿದ್ದರು. ಸಮಾಜಸೇವಕರಾಗಿ ಗುರುತಿಸಿಕೊಂಡು, ಆಪದ್ಭಾಂಧವರಾಗಿದ್ದ ಫಯಾಝ್ ಅವರು ಓರ್ವನನ್ನು ರಕ್ಷಿಸುತ್ತಲೇ ಪ್ರಾಣತೆತ್ತಿರುವುದು ಬೇಸರದ ಸಂಗತಿ ಎಂದು ಫಯಾಝ್ ಅವರ ನಿಕಟವರ್ತಿಗಳು ತಿಳಿಸಿದ್ದಾರೆ.
ಮೃತ ಫಯಾಝ್ ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.