×
Ad

ಬೋಲ ಚಿತ್ತರಂಜನ್ ಶೆಟ್ಟಿ ವಿಧಿವಶ

Update: 2016-08-07 20:11 IST

ಮಂಗಳೂರು, ಆ. 7: ಖ್ಯಾತ ತುಳು ಕನ್ನಡ ಸಾಹಿತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೋಲ ಚಿತ್ತರಂಜನ್ ಶೆಟ್ಟಿ (72) ಇಂದು ಸಂಜೆ ಹೃದಯಾಘಾತದಿಂದ ನಿಧನರಾದರು.

ಪರ್ತಿಮಾರ್ ಗುತ್ತು ಮಂಜಯ್ಯ ಶೆಟ್ಟಿ ಮತ್ತು ಬೋಲ ಮತ್ರೆಂಗಿ ಪರಾರಿ ರುಕ್ಮುಣಿ ಶೆಟ್ಟಿಯವರ ಹಿರಿಯ ಪುತ್ರ ಬೋಲ ಚಿತ್ತರಂಜನ್ ಶೆಟ್ಟಿ 1944 ಆಗಸ್ಟ್ 30ರಂದು ಉಡುಪಿ ಜಿಲ್ಲೆಯ ಕಾರ್ಕಳದ ಬೋಳ ಗ್ರಾಮದಲ್ಲಿ ಜನಿಸಿದ್ದರು.

1973ರಲ್ಲಿ ಪೊಣ್ಣು ಮಣ್ಣ್‌ದ ಬೊಂಬೆ ಎಂಬ ತುಳು ನಾಟಕವನ್ನು ರಚಿಸಿದ ಇವರು 1983ರಲ್ಲಿ ಕಂಬುಲ ಎಂಬ ಪ್ರಬಂಧ ಬರೆದಿದ್ದರು. ಇದು ತುಳುನಾಡಿನ ಕ್ರೀಡೆಯಾದ ಕಂಬುಲದ ಬಗೆಗಿನ ಪ್ರಥಮ ದಾಖಲೆ ಬರಹವಾಗಿದೆ. 1990ರಲ್ಲಿ ಅಳಿಯ ಸಂತಾನ ಕಟ್ಟಿಗೆ ಸಂಬಂಧಿಸಿದಂತೆ ಅಳಿದುಳಿದವರು ಎಂಬ ಕನ್ನಡ ಕಾದಂಬರಿಯನ್ನು ಬರೆದಿದ್ದರು. ಇದು ಇವರಿಗೆ ಹೆಸರನ್ನು ತಂದು ಕೊಟ್ಟಿತ್ತು. 2005ರಲ್ಲಿ ಕುಡಿ ಕನ್ನಡ ಕಾದಂಬರಿ, 2006 ರಲ್ಲಿ ನೀರ್ ಎಂಬ ತುಳು ನಾಟಕವನ್ನು ಮಕ್ಕಳಿಗಾಗಿ ಬರೆದರು. ಬಿನ್ನೆದಿ ಎಂಬ ಕೋಟಿಚೆನ್ನ ಯರ ಪಾಡ್ದನವನ್ನು ಆಧರಿಸಿದ ಪುಸ್ತಕವನ್ನು 2006ರಲ್ಲಿ ಪ್ರಕಟಿಸಿದ್ದರು.

ಬಿನ್ನೆದಿ ತುಳು ಪಾಡ್ದನ, ಅಮರ ಬೀರೆರ ಮಾಮಣ್ಣೆ, ಒಂಟಿ ಒಬ್ಬಂಟಿ, ತಮ್ಮಲೆ ಅರುವತ್ತ ಕಟ್ಟ್, ಶ್ರೀ ಮಧ್ವ ಪ್ರಾಣ ಕಕ್ರ ಶೆಟ್ಟಿ ಬೆನ್ನಿದ ಬೇಲೆ ಎಂಬ ಕವನ ಸಂಕಲನ, ಶ್ರೀ ಮದ್ವ ಭಾರತ ತುಳು ಪಾಡ್ದನ, ಅನ್ನಾರ್ಥಿ ಎಂಬ ಕನ್ನಡ ಕವನ ಸಂಕಲನವನ್ನು ಇವರು ರಚಿಸಿದ್ದಾರೆ. ಇತ್ತೀಚೆಗೆ ಅತಿಶಯ ಎಂಬ ಕನ್ನಡ ಕಾದಂಬರಿಯನ್ನೂ ಬರೆದಿದ್ದರು.

  ತನ್ನ ಎಲ್ಲಾ ಸಾಹಿತ್ಯ ಕೃತಿಗಳನ್ನು ಒಂದೇ ಗ್ರಂಥದ ಅಡಿಯಲ್ಲಿ ಪ್ರಕಟಿಸಬೇಕೆಂಬ ಹಂಬಲ ಚಿತ್ತರಂಜನ್ ಶೆಟ್ಟಿಯವರಿಗಿತ್ತು. 2012 ರಲ್ಲಿ ತುಳು ಗೌರವ ಪ್ರಶಸ್ತಿ, ಶ್ರೀ ಕೃಷ್ಣ ವಾದಿರಾಜ ಪ್ರಶಸ್ತಿ ಮತ್ತು 2013 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಇವರು ಪಡೆದಿದ್ದರು. ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಬೋಲ ಚಿತ್ತರಂಜನ್ ದಾಸ್ ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ. ಅವರ ಹಠಾತ್ ನಿಧನದಿಂದ ತುಳು, ಕನ್ನಡ ಸಾಹಿತ್ಯ ಕ್ಷೇತ್ರ ಮತ್ತು ಅವರ ಆತ್ಮೀಯರಲ್ಲಿ ಆಘಾತ ಉಂಟು ಮಾಡಿದೆ. ಇವರ ಅಂತಿಮ ಕ್ರಿಯೆಯು ನಾಳೆ ಮಧ್ಯಾಹ್ನ ತೊಕ್ಕೊಟ್ಟಿನ ಕುತ್ತಾರು ಗುತಿತಿನಲ್ಲಿ ನಡೆಯಲಿದೆ ಎಂಬ ಮಾಹಿತಿಯನ್ನು ಅವರ ಕುಟುಂಬ ವರ್ಗದವರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News