ಆಸ್ತಿಗಾಗಿ ಭಾಸ್ಕರ್ ಶೆಟ್ಟಿ ಕೊಲೆ: ಪತ್ನಿ, ಪುತ್ರನ ಬಂಧನ

Update: 2016-08-07 18:13 GMT

ಉಡುಪಿ, ಆ.7: ಆಸ್ತಿಗಾಗಿ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ(52) ಅವರನ್ನು ಕೊಲೆಗೈದ ಪತ್ನಿ ರಾಜೇಶ್ವರಿ ಶೆಟ್ಟಿ(48) ಹಾಗೂ ಪುತ್ರ ನವನೀತ್ ಶೆಟ್ಟಿ(25) ಎಂಬವರನ್ನು ಮಣಿಪಾಲ ಪೊಲೀಸರು ಇಂದು ಬಂಧಿಸಿದ್ದಾರೆ. ಭಾಸ್ಕರ್ ಶೆಟ್ಟಿ ನಾಪತ್ತೆ ಪ್ರಕರಣವನ್ನು ಇದೀಗ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವಾಗಿ ಮಾರ್ಪಡಿಸಿ, ಆರೋಪಿಗಳಾದ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್ ಶೆಟ್ಟಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್(25) ಎಂಬಾತನಿಗೆ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪ್ರಭಾರ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ತಿಳಿಸಿದ್ದಾರೆ.

ಕೊಲೆಯ ಪ್ರಮುಖ ಸಾಕ್ಷವಾಗಿರುವ ಭಾಸ್ಕರ್ ಶೆಟ್ಟಿಯವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಬಂಧಿತರು ಹೇಳುವ ಪ್ರಕಾರ ಮೃತದೇಹವನ್ನು ನಿರಂಜನ್ ಭಟ್ ನಾಶಪಡಿಸಿದ್ದಾನೆ. ಇದೀಗ ಆರೋಪಿಗಳಿರಿಬ್ಬರು ನೀಡಿದ ಸುಳಿವುಗಳ ಆಧಾರದಲ್ಲಿ ಮೃತದೇಹದ ಹುಡುಕಾಟವನ್ನು ಮುಂದುವರಿಸಲಾಗಿದೆ. ತಲೆಮರೆಸಿಕೊಂಡಿರುವ ನಿರಂಜನ್ ಭಟ್ ಬಂಧನವಾದರೆ ಮೃತದೇಹವನ್ನು ಶೀಘ್ರವೇ ಪತ್ತೆ ಹಚ್ಚಬಹುದಾಗಿದೆ ಎಂದು ಅವರು ಹೇಳಿದರು.
 

ಆಸ್ತಿಗಾಗಿ ಕೊಲೆ ಸಂಚು: 
ಸೌದಿ ಅರೇಬಿಯಾದಲ್ಲಿ ಆರು ಸೂಪರ್ ಮಾರ್ಕೆಟ್‌ಗಳನ್ನು ಹೊಂದಿರುವ ಭಾಸ್ಕರ್ ಶೆಟ್ಟಿ, ವರ್ಷಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದರು. ಉಡುಪಿಯಲ್ಲೂ ಅವರು ಕೋಟ್ಯಂತರ ಬೆಲೆ ಬಾಳುವ ಆಸ್ತಿಗಳನ್ನು ಹೊಂದಿದ್ದರು. ಒಂದು ವರ್ಷಗಳಿಂದ ರಾಜೇಶ್ವರಿ ಶೆಟ್ಟಿ ಹಾಗೂ ನಂದಳಿಕೆಯ ನಿರಂಜನ್ ಭಟ್ ತೀರಾ ಅನ್ಯೋನ್ಯತೆಯಿಂದ ಇದ್ದರು. ರಾಜೇಶ್ವರಿ ಶೆಟ್ಟಿಯ ಕಾಯಿಲೆಯನ್ನು ಈತ ಗುಣಪಡಿಸಿದ್ದ. ಇದರಿಂದಾಗಿ ಇವರಿಬ್ಬರ ನಡುವೆ ಸಂಬಂಧ ಬೆಳೆದಿತ್ತು. ಈ ವಿಚಾರ ಭಾಸ್ಕರ ಶೆಟ್ಟಿಗೆ ತಿಳಿದಿತ್ತು. ಆಕೆಯ ಮೊಬೈಲ್‌ನಿಂದ ಅವರಿಬ್ಬರ ನಡುವಿನ ಸಂಬಂಧವನ್ನು ಭಾಸ್ಕರ್ ಶೆಟ್ಟಿ ಅರಿತುಕೊಂಡರು. ಇದರಿಂದಾಗಿ ರಾಜೇಶ್ವರಿ ಶೆಟ್ಟಿ ಮೇಲೆ ಕೋಪಗೊಂಡ ಅವರು ವಿಚ್ಛೇದನ ನೀಡುವಂತೆ ಆಕೆಯನ್ನು ಒತ್ತಾಯಿಸುತ್ತಿದ್ದರು.

ತಮ್ಮ ಆಸ್ತಿಯಲ್ಲಿ ರಾಜೇಶ್ವರಿ ಶೆಟ್ಟಿಗೆ ಯಾವುದೇ ಪಾಲನ್ನು ನೀಡದೆ ಎಲ್ಲ ಆಸ್ತಿಯನ್ನು ತಾಯಿಯ ಮನೆಯವರಿಗೆ ವಿಲ್ ಮೂಲಕ ನೀಡಲು ಭಾಸ್ಕರ ಶೆಟ್ಟಿ ನಿರ್ಧರಿಸಿದ್ದರು. ಭಾಸ್ಕರ್ ಶೆಟ್ಟಿ ಆಸ್ತಿ ತನ್ನ ಹಾಗೂ ಮಗನ ಕೈ ತಪ್ಪಿಹೋಗುವ ಸೂಚನೆಯನ್ನು ಅರಿತ ರಾಜೇಶ್ವರಿ ಶೆಟ್ಟಿ ತನ್ನ ಮಗ ನವನೀತ್ ಶೆಟ್ಟಿ ಮತ್ತು ನಿರಂಜನ ಭಟ್ ಜೊತೆ ಸೇರಿ ಅವರನ್ನು ಕೊಲೆ ಮಾಡುವ ಸಂಚು ರೂಪಿಸಿದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಕೊಲೆಗೈದು ಸಾಕ್ಷ ನಾಶ: ಜು.28ರಂದು ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ತನ್ನ ಹೊಟೇಲಿನಿಂದ ಮನೆಗೆ ಬಂದ ಭಾಸ್ಕರ್ ಶೆಟ್ಟಿ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ ಮನೆಯಲ್ಲಿದ್ದ ಪತ್ನಿ ಹಾಗೂ ಪುತ್ರ ಕೊಲೆಗೆ ತಯಾರಿ ನಡೆಸಿದ್ದರು. ಭಾಸ್ಕರ್ ಶೆಟ್ಟಿ ಸ್ನಾನ ಮಾಡಿ ಹೊರಗೆ ಬರುತ್ತಿದ್ದಂತೆ ಅವರ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದರು. ನಂತರ ಮೃತದೇಹವನ್ನು ನಂದಳಿಕೆಯ ನಿರಂಜನ್ ಭಟ್ ಮನೆಗೆ ಸಾಗಿಸಿದ ಪತ್ನಿ ಹಾಗೂ ಪುತ್ರ ನಿರಂಜನ್ ಭಟ್ ಜೊತೆ ಸೇರಿ ಮೃತದೇಹವನ್ನು ಸುಟ್ಟು ಹಾಕಿ ಸಾಕ್ಷನಾಶ ಪಡಿಸಿದರು. ಬಳಿಕ ಮೃತದೇಹದ ಅವಶೇಷಗಳನ್ನು ಸಮೀಪದ ನದಿಗೆ ಎಸೆಯಲಾಯಿತು. ಈ ಕಾರ್ಯವನ್ನು ನಿರಂಜನ್ ಭಟ್ ನಡೆಸಿದ್ದಾನೆ ಎಂಬುದು ಬಂಧಿತರ ಹೇಳಿಕೆಯಾಗಿದೆ.

ಬಂಧಿತ ರಾಜೇಶ್ವರಿ ಶೆಟ್ಟಿ, ನವನೀತ್ ಬಿ.ಶೆಟ್ಟಿ ಮತ್ತು ತಲೆಮರೆಸಿ ಕೊಂಡಿರುವ ನಿರಂಜನ್ ಭಟ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ:302, 201, 120(ಬಿ), 204 ಸಹಿತ 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಪ್ರಕರಣದ ತನಿಖೆಯನ್ನು ಪ್ರಭಾರ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ನಿರ್ದೇಶನದಲ್ಲಿ, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ನಡೆಸಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ ಎಸ್.ವಿ.ಗಿರೀಶ್, ಮಣಿಪಾಲ ಎಸ್ಸೈ ಗೋಪಾಲಕೃಷ್ಣ, ಕಾರ್ಕಳ ಗ್ರಾಮಾಂತರ ಠಾಣಾ ಎಸ್ಸೈ ಎಂ.ರಫೀಕ್, ಮಣಿಪಾಲ ಠಾಣಾ ಎಎಸ್ಸೈ ಹರೀಶ್, ಮಹಿಳಾ ಎಎಸ್ಸೈ ಫೇಮಿನಾ, ಸಿಬ್ಬಂದಿಯಾದ ಶೈಲೇಶ್, ವೆಂಕಟೇಶ್, ಅನಿಲ್, ಅಶೋಕ್ ದೇವಾಡಿಗ, ಕೃಷ್ಣ ಹಾಗೂ ಕಾರ್ಕಳ ಗ್ರಾಮಾಂತರ ಠಾಣಾ ಸಿಬ್ಬಂದಿ ಉದಯ, ಪ್ರವೀಣ್ ಶೆಟ್ಟಿಗಾರ್, ಪ್ರಶಾಂತ್, ರವಿ ಭಾಗವಹಿಸಿದ್ದರು.


ಜ್ಯೋತಿಷಿ ಪತ್ತೆಗೆ ತಂಡ ರಚನೆ
ಕೊಲೆ ನಡೆಸಿದ ದಿನದಿಂದ ನಾಪತ್ತೆಯಾಗಿರುವ ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್‌ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಅದಕ್ಕಾಗಿ ಒಂದು ಪೊಲೀಸ್ ತಂಡವನ್ನು ರಚಿಸಲಾಗಿದೆ. ಇದೀಗ ಆತನ ಮೊಬೈಲ್ ಫೋನಿನ ಜಾಡು ಹಿಡಿದು ಸಾಗಿರುವ ಪೊಲೀಸ್ ತಂಡ ಶೀಘ್ರವೇ ಬಂಧಿಸುವ ಭರವಸೆ ವ್ಯಕ್ತಪಡಿಸಿದೆ. ಪ್ರಕರಣದ ಪ್ರಮುಖ ಸಾಕ್ಷವಾಗಿರುವ ಈತನ ಬಂಧನಕ್ಕೆ ವ್ಯಾಪಕ ಶೋಧ ಕಾರ್ಯ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News