1.60 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಪ್ರೀಮಿಯರ್ ಲೀಗ್
ಮಂಗಳೂರು, ಆ.9: ಕರ್ನಾಟಕ ರಿಜನಲ್ ಕ್ರಿಕೆಟ್ ಅಕಾಡೆಮಿಯು ಮಂಗಳೂರು ಅಕೇಶನಲ್ಸ್ ಸಂಸ್ಥೆಯ ಸಹಯೋಗದೊಂದಿಗೆ ಡಿಸೆಂಬರ್ 17ರಿಂದ 31ರವರೆಗೆ ಪಣಂಬೂರು ಬಿ.ಆರ್.ಅಂಬೇಡ್ಕರ್ಕ್ರೀಡಾಂಗಣದಲ್ಲಿ ಆಯೋಜಿಸಿದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು 1.60 ವೆಚ್ಚ ದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಕಳೆದ ಬಾರಿ ಎಂಪಿಎಲ್ನಲ್ಲಿ ಆಟವನ್ನಾಡಿದ ಮಂಗಳೂರು ವಲಯದ 24 ಮಂದಿ ಆಟಗಾರರು ಈ ಬಾರಿಯ ಕೆ.ಪಿ.ಎಲ್ನ ಹರಾಜು ಪಟ್ಟಿಯಲ್ಲಿ ಸೇರಿದ್ದಾರೆ.
ಪಂದ್ಯಕೂಟವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅನುಮೋದನೆ ಮತ್ತು ಸಲಹೆ- ಸೂಚನೆ ನಿಯಮಗಳನ್ನನುಸರಿಸಿ ಜರಗಲಿದ್ದು, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡಿರುವ ಮಂಗಳೂರು ವಲಯದ ವ್ಯಾಪ್ತಿಗೆ ಸೀಮಿತವಾಗಿರುತ್ತದೆ. ಈ ಬಾರಿ ಕ್ರಿಕೆಟ್ಗೆ ಸೂಕ್ತವೆನಿಸುವ ಅಸ್ಟ್ರೋಟರ್ಫ್ ಪಿಚ್ನ್ನು ಸಿದ್ಧ ಪಡಿಸಲು ಯೋಜಿಸಲಾಗಿದೆಯಲ್ಲದೆ, ಮೈದಾನದ 30 ಯಾರ್ಡ್ ಪ್ರದೇಶಕ್ಕೆ ಹಸಿರು ಹುಲ್ಲನ್ನು ಹೊದಿಸಲು ಯೋಜಿಸಲಾಗಿದೆ.
ಎಂಪಿಎಲ್ ನ ಪಂದ್ಯಗಳು ಸ್ಥಳೀಯ ಟಿ.ವಿ.ಚಾನಲ್ ಮೂಲಕ ನೇರ ಪ್ರಸಾರಗೊಳ್ಳಲಿದ್ದು, ಕೊನೆಯ ಮೂರು ದಿನಗಳ ಪಂದ್ಯಗಳನ್ನು ದೂರದರ್ಶನ ಕ್ರೀಡಾ ವಾಹಿನಿಯ ಮೂಲಕ ಬಿತ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ರಾತ್ರಿ - ಹಗಲು ಪಂದ್ಯಗಳು ಜರಗಲಿದ್ದು, ಕಳೆದ ಬಾರಿಗಿಂತ ಈ ಬಾರಿ ಎತ್ತರದಲ್ಲಿ ನಿರ್ಮಿಸಲಾಗುವ ಬೆಳಕಿನ ಟವರ್ಗಳ ಮೂಲಕ ಬಿಳಿ ವರ್ಣದ ಬೆಳಕು ಮೈದಾನದಲ್ಲಿ ಪಸರಿಸಲಿದೆ ಎಂದು ಪ್ರಕಟನೆ ತಿಳಿಸಿದೆ. ಕ್ರಿಕೆಟ್ ಪ್ರೇಮಿಗಳೊಂದಿಗೆ ಮೈದಾನಕ್ಕೆ ಬರುವ ಎಳೆಯ ಮಕ್ಕಳಿಗಾಗಿ ಮೈದಾನದ ಪಕ್ಕದಲ್ಲಿ ಮನೋರಂಜನಾ ಪಾರ್ಕ್ನ್ನು ನಿರ್ಮಿಸಲು ಯೋಜಿಸಲಾಗಿದೆ.
ಮಂಗಳೂರು ವಲಯದ ವಿವಿಧ ಪ್ರದೇಶಗಳ ಹನ್ನೆರಡು ತಂಡಗಳಿಗೆ ಪಂದ್ಯಕೂಟದಲ್ಲಿ ಭಾಗವಹಿಸುವ ಅವಕಾಶವಿದ್ದು, 20-20 ಓವರುಗಳ ಲೀಗ್ಕಮ್ ನಾಕೌಟ್ಆಧಾರದಲ್ಲಿ ಒಟ್ಟು 34 ಪಂದ್ಯಗಳು ಜರಗಲಿವೆ. ಈ ಬಾರಿ ಕಾರ್ಕಳ, ಕುಂದಾಪುರ, ಬೈಕಂಪಾಡಿ ಮುಂತಾದ ಪ್ರದೇಶಗಳ ಹೊಸ ತಂಡಗಳು ಕಣಕ್ಕಿಳಿಯಲಿವೆ.
ಐ ಪಿ ಎಲ್ಆಟಗಾರರಿಂದ ಮೆರುಗು:
ಕಳೆದ ಬಾರಿಯ ಐಪಿಲ್ಕೂಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬನ್ನು ಪ್ರತಿನಿಧಿಸಿದ ಕೆ.ಸಿ.ಕಾರ್ಯಪ್ಪ, ಗುಜರಾತ್ ಲಯನ್ಸ್ನ್ನು ಪ್ರತಿನಿಧಿಸಿದ ಶಿವಿಲ್ ಕೌಶಿಕ್ ಮತ್ತು ಮುಂಬಯಿ ಇಂಡಿಯನ್ ತಂಡಗಳನ್ನು ಪ್ರತಿನಿಧಿಸಿದ ಕಿಶೋರ್ ಕಾಮತ್ ಮುಂತಾದ ರಾಷ್ಟ್ರೀಯ ಮಟ್ಟದ ಆಟಗಾರರು ಈ ಬಾರಿಯ ಎಂ.ಪಿ.ಎಲ್ನಲ್ಲಿ ಭಾಗವಹಿಸಲಿದ್ದು ಎಂ.ಪಿ.ಎಲ್ ತನ್ನ ಗರಿಮೆಯನ್ನು ಹೆಚ್ಚಿಸಿಕೊಳ್ಳಲಿದೆ.
ಕರ್ನಾಟಕ ರಾಜ್ಯದ ಕೆಪಿಎಲ್, ಐಪಿಎಲ್, ರಾಷ್ಟ್ರೀಯ ಪಂದ್ಯಕೂಟಗಳಲ್ಲಿ ಭಾಗವಹಿಸಿರುವ ಶ್ರೇಷ್ಠ 24 ಆಟಗಾರರು ಈ ಬಾರಿ ಎಂಪಿಎಲ್ನಲ್ಲಿ ಭಾಗವಹಿಸಲಿದ್ದು, ಹರಾಜಿನ ಮೂಲಕ ಇಬ್ಬಿಬ್ಬರು ಒಂದೊಂದು ತಂಡವನ್ನು ಸೇರಲಿದ್ದಾರೆ. ಇದು ತಂಡಗಳ ನಡುವಣ ಹೋರಾಟಕ್ಕೆ ಹೊಸ ಕೆಚ್ಚನ್ನು ಒದಗಿಸಲಿದೆ. 24 ಮಂದಿ ಅನಿವಾಸಿ ಭಾರತೀಯ ಆಟಗಾರರು 12 ತಂಡಗಳಲ್ಲಿ ಸೇರ್ಪಡೆಗೊಳ್ಳಲಿದ್ದು, ಗಲ್ಫ್ ರಾಷ್ಟ್ರಗಳ ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸುತ್ತಿರುವ ಹಲವಾರು ಆಟಗಾರರು ತಮ್ಮ ತಾಯ್ನೆಲದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಪಡೆಯುವಂತಾಗಿದೆ.
ಮಂಗಳೂರು ವಲಯದ 48 ಮಂದಿ ಆಟಗಾರರನ್ನು ಎ ಗುಂಪಿನಲ್ಲಿ, 24 ಮಂದಿಯನ್ನು ಬಿ ಗುಂಪಿನಲ್ಲಿ ಮತ್ತು ಉಳಿದವರನ್ನು ಸಿ ಗುಂಪಿನಲ್ಲಿ ವಿಂಗಡಿಸಿ ಹರಾಜು ನಡೆಸಲಾಗುವುದು. ಭಾಗವಹಿಸಲು ಇಚ್ಛಿಸುವ ಅನಿವಾಸಿ ಭಾರತೀಯ ಮತ್ತು ಮಂಗಳೂರು ವಲಯದ (ಮಂಗಳೂರು ವಲಯದಲ್ಲಿ ಜನಿಸಿರುವ, ಮಂಗಳೂರು ವಲಯದ ವಿದ್ಯಾ ಸಂಸ್ಥೆಗಳಲ್ಲಿ ಓದುತ್ತಿರುವ)ಆಟಗಾರರು ಆಗಸ್ಟ್ 31ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ನೋಂದಣಿ ನಮೂನೆಯು www.krcaindia.com, www.facebook.com/mplofficialನಲ್ಲಿ ಮತ್ತು ಮಂಗಳೂರು ಹಂಪನಕಟ್ಟೆಯಲ್ಲಿರುವ ಕೆಆರ್ಸಿಎ ಕಚೇರಿಯಲ್ಲಿ ಲಭ್ಯವಿದೆ. ನೋಂದಣಿ ಶುಲ್ಕ ಇರುವುದಿಲ್ಲ. ಹರಾಜು ಪ್ರಕ್ರಿಯೆಯು ಸೆಪ್ಟಂಬರ್ ತಿಂಗಳಲ್ಲಿ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.