ಬೀಫ್ ಬಿರಿಯಾನಿ ತಿಂದದ್ದಕ್ಕೆ ಪ್ರವೇಶ ನಿರಾಕರಿಸಲಾಗಿದ್ದ ವಿದ್ಯಾರ್ಥಿಗೆ ದಿಲ್ಲಿ ಜೆಎನ್ಯುನಲ್ಲಿ ಅವಕಾಶ
ಮಲಪ್ಪುರಂ,ಆ.13: ಬೀಫ್ ಬಿರಿಯಾನಿ ತಿಂದಿದ್ದಾರೆಂದು ಆರೋಪಿಸಿ ಹೈದರಾಬಾದ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲಾಂಗ್ವೇಜಸ್ ಯುನಿವರ್ಸಿಟಿ(ಇಫ್ಲು) ಆಡಳಿತಮಂಡಳಿ ಹೊರಹಾಕಿದ್ದ ವಿದ್ಯಾರ್ಥಿಗೆ ಇದೇ ವಿಷಯದಲ್ಲಿ ಕಲಿಯಲು ದಿಲ್ಲಿ ಜವಾಹರಲಾಲ್ ಯೂನಿವರ್ಸಿಟಿ ಅವಕಾಶ ಕಲ್ಪಿಸಿದೆ ಎಂದು ವರದಿಯಾಗಿದೆ. ಮಲಪುರಂ ನ ಮುಹಮ್ಮದ್ ಜಲೀಸ್, ತನ್ನ ಕಲಿಕೆ ಸಾಮರ್ಥ್ಯದಿಂದ ಇಫ್ಲು ಆಡಳಿತ ಮಂಡಳಿಯ ಬೀಫ್ ರಾಜಕೀಯಕ್ಕೆ ಉತ್ತರ ನೀಡಿದ ವಿದ್ಯಾರ್ಥಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಗೋವಧೆ ನಿಷೇಧ ಕುರಿತು ವಿವಾದಗಳು ಮತ್ತು ಅದರ ಹೆಸರಲ್ಲಿ ಸಂಘಪರಿವಾರದ ದಾಳಿಗಳು ತಾರಕಕ್ಕೇರಿದ್ದಾಗ ಹೈದರಾಬಾದ್ ಉಸ್ಮಾನಿಯ ಯುನಿವರ್ಸಿಟಿಯ ವಿದ್ಯಾರ್ಥಿಗಳು ಬೀಫ್ಫೆಸ್ಟ್ ಆಚರಿಸಿದ್ದರು. ಅಂದು ಇಫ್ಲುವಿನಲ್ಲಿ ಜಲೀಸ್ ಎಂ.ಎ.ಅರಬಿಕ್ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ.
ಉಸ್ಮಾನಿಯದ ಹೋರಾಟಗಾರರಿಗೆ ಬೆಂಬಲ ಸೂಚಿಸಿ 2015 ಡಿಸೆಂಬರ್ನಲ್ಲಿ ಜಲೀಸ್ ಮತ್ತು ಗೆಳೆಯರು ಇಫ್ಲು ಕ್ಯಾಂಪಸ್ನಲ್ಲಿ ಬೀಫ್ ಬಿರಿಯಾನಿ ತಿಂದಿದ್ದರು. ಕ್ಯಾಂಪಸ್ನಲ್ಲಿ ಬೀಫ್ ಬಿರಿಯಾನಿ ತಿಂದದ್ದು ನಿಯಮೋಲ್ಲಂಘನೆ ಎಂದು ವಿಶ್ವವಿದ್ಯಾನಿಲಯದ ಆಡಳಿತ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲಾಗಿತ್ತು. ನಂತರ ಜಲೀಸ್ ಪಿಎಚ್ಡಿಗೆ ಅವಕಾಶ ಕೋರಿ ಇಫ್ಲುನಲ್ಲಿ ಅರ್ಜಿಹಾಕಿದ್ದ.ಆದರೆ ಐದು ತಿಂಗಳ ಹಿಂದೆ ಕ್ಯಾಂಪಸ್ನಲ್ಲಿ ಬೀಫ್ ತಿಂದದ್ದರಿಂದ ಪಿಎಚ್ಡಿಗೆ ಪ್ರವೇಶ ನೀಡಲಾಗದು ಎಂದು ಕಾಲೇಜುಆಡಳಿತ ಜಲೀಸ್ಗೆ ತಿಳಿಸಿತ್ತು ಎನ್ನಲಾಗಿದೆ. ಆ ನಂತರ ಜಲೀಸ್ ಜೆಎನ್ಯುಗೆ ಪಿಎಚ್ಡಿ ವ್ಯಾಸಂಗಕ್ಕಾಗಿ ಅರ್ಜಿಸಲ್ಲಿಸಿ, ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾಗಿದ್ದಲ್ಲದೆ, ಆಗಸ್ಟ್ ಒಂದರಿಂದ ದಿಲ್ಲಿ ಜೆಎನ್ಯುಗೆ ವ್ಯಾಸಂಗಕ್ಕೆ ಸೇರಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.