ತುಳು ಭಾಷೆಯನ್ನು 8ನೆ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಪ್ರಧಾನಿಗೆ ಮನವಿ: ಡಾ. ಡಿ. ವೀರೇಂದ್ರ ಹೆಗ್ಗಡೆ

Update: 2016-08-13 15:24 GMT

ಮುಲ್ಕಿ, ಆ.13: ತುಳು ಭಾಷೆಯನ್ನು 8ನೆ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ನೇತೃತ್ವದಲ್ಲಿ ಪ್ರಧಾನ ಮಂತ್ರಿಯವರನ್ನು ಭೇಟಿಯಾಗಿ ಒತ್ತಾಯಿಸುವುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ತುಳು ಸಮ್ಮೇಳನ ಸಮಿತಿ ಮುಲ್ಕಿಯ ಆಶ್ರಯದಲ್ಲಿ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ನಾಲ್ಕನೆ ವರ್ಷದ ನೆನಸಿಗಾಗಿ ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಆವರಣದಲ್ಲಿ ಎರಡು ದಿನಗಳ ಕಾಲ ಜರಗಲಿರುವ ‘ತುಳುವ ಐಸಿರಿದ ಐಸ್ರ’ ತುಳು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

1994 ರಲ್ಲಿ ಮಂಗಳೂರಿನಲ್ಲಿ ನಡೆದ ಪ್ರಥಮ ತುಳು ಸಮ್ಮೇಳನದ ಬಳಿಕ ಜಿಲ್ಲೆಯಲ್ಲಿ ತುಳು ಭಾಷೆಯ ಬಗ್ಗೆ ಜಾಗೃತಿ ಮೂಡಿದ್ದು ಇತ್ತೀಚೆಗೆ ಉಜಿರೆಯಲ್ಲಿ ಜರಗಿದ ತುಳು ಸಮ್ಮೇಳನದಲ್ಲಿ. ಇತ್ತೀಚೆಗೆ ಹೆಚ್ಚಿನವರು ತುಳು ಭಾಷೆಗೆ ಆಕರ್ಷಿತರಾಗಿ ಅದನ್ನು ಕಲಿತು ಮಾತನಾಡುತ್ತಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಜಿಲ್ಲೆಯಲ್ಲಿ ದೊರೆಯುತ್ತಿವೆಯಾದರೂ ಯುವ ಸಮೂಹ ಕೃಷಿಯತ್ತ ವಾಲುತ್ತಿದೆ. ತುಳು ನಾಡಿನ ಮಣ್ಣಿನ ಮೇಲಿನ ಪ್ರೀತಿಯಿಂದ ಜನರಲ್ಲಿ ಬದಲಾವಣೆಯಾಗುತ್ತಿದೆ. ಜನರಲ್ಲಿ ಶೃದ್ಧೆಯ ಜೊತೆಗೆ ಭಕ್ತಿ ಭಾವ ಮೂಡುತ್ತಿದೆ ಎಂದರು

 ಎತ್ತಿನ ಹೊಳೆ ಯೋಜನೆಯ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಯಾರ ವಿರುದ್ಧ ಪ್ರತಿಭಟನೆ ನಡೆಸಬೇಕೆನ್ನುವ ಬಗ್ಗೆ ಹೆಚ್ಚಿನವರಲ್ಲಿ ಗೊಂದಲ ಮೂಡಿದೆ. ರಾಜಕಾರಣಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದರು.

ತುಳು ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಾದರೆ ಪ್ರತಿ 2 ವರ್ಷಕ್ಕೊಮ್ಮೆ ಜಿಲ್ಲಾ ಮಟ್ಟದಲ್ಲಿ ತುಳು ಸಮ್ಮೇಳ ಆಯೋಜಿಸಬೇಕು ಎಂದ ಹೆಗ್ಗಡೆ ಅಭಿಪ್ರಾಯಿಸಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಮಾತನಾಡಿ, ತುಳು ನಾಡಿನ ಮಣ್ಣಿನಲ್ಲಿ ದೈವಿಕ ಶಕ್ತಿಯಿದೆ. ತುಳು ಭಾಷೆಗೆ ಸಾಕಷ್ಟು ಪ್ರಾತಿನಿಧ್ಯ ದೊರೆಯುತ್ತಿಲ್ಲ. ತುಳು ಭಾಷೆಗೆ ಸ್ಥಾನ ಮಾನ ದೊರೆಯುವ ವರೆಗೆ ನಿರಂತರ ಹೋರಾಟದ ಅಗತ್ಯವಿದೆ ಎಂದು ಹೇಳಿದರು.

ಮುಲ್ಕಿಯ ಬಸ್ಸು ನಿಲ್ದಾಣದ ಬಳಿಯಿಂದ ಸಮ್ಮೇಳನದ ಸಭಾಂಗಣದವರೆಗೆ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಬಾಳೇಕೋಡಿ ಶೀಲಾಂಜನ ಕ್ಷೇತ್ರದ ಸದ್ಗುರು ಶಶಿಕಾಂತ ಮಣಿಸ್ವಾಮಿ ಮೆರವಣಿಗೆಗೆ ಚಾಲನೆ ನೀಡಿದರು.

 ಶಾಲೆ ಕಾಲೇಜುಗಳ ತುಳು ಸಂಘದ ಉದ್ಘಾಟನೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನೆರವೇರಿಸಿದರು. ಸ್ಟಾಲ್‌ಗಳ ಉದ್ಘಾಟನೆಯನ್ನು ಮುಂಬೈ ಸೇವಾ ಭಾರತಿಯ ಅಧ್ಯಕ್ಷ ಜಯ ಶೆಟ್ಟಿ ನೆರವೆರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಯುಎಇ ತುಳುವೆರ್ ಸಂಘಟನೆಯ ಮುಖ್ಯ ಸಂಚಾಲಕ ಸರ್ವೋತ್ತಮ ಶೆಟ್ಟಿ ನೆರವೇರಿಸಿದರು. ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ನೆರವೇರಿಸಿದರು. ಅಟಿಲ್ ದ ಅರಗಣೆಯನ್ನು ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಡಾ.ಕೆ. ರವೀಂದ್ರನಾಥ ಪೂಂಜ ನೆರವೇರಿಸಿದರು. ಸುದ್ದಿ ಜಾಲವನ್ನು ಮುಂಬೈನ ಉದ್ಯಮಿ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು.

ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮಾವರ, ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್‌ನ ಅಧ್ಯಕ್ಷ ನವೀನ್ ಚಂದ್ರ ಸುವರ್ಣ,ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಎಕ್ಕಾರು, ಮುಲ್ಕಿಯ ಚರ್ಚ್‌ನ ಧರ್ಮಗುರು ವಂದನೀಯ ಫ್ರಾನ್ಸಿಸ್ ಝೇವಿಯರ್ ಗೋಮ್ಸ್, ಮುಲ್ಕಿಯ ಕೇಂದ್ರ ಶಾಫಿ ಜುಮ್ಮಾ ಮಸೀದಿಯ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಬಾರ್ಕೂರು ಕಚ್ಚೂರ್ದ ಮಾಲ್ದಿ ದೇವಸ್ಥಾನದ ಗೌರವಾಧ್ಯಕ್ಷ ಚೆನ್ನಪ್ಪ, ಆಶ್ರಯ ಚಾರಿಟೇಬಲ್ ಟ್ರಸ್ಟ್ ಕುಡ್ಲದ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮುಲ್ಕಿಯ ಬಪ್ಪನಾಡು ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಎನ್. ಎಸ್. ಮನೋಹರ್ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ, ಪದ್ಮರಾಜ್ ಎಕ್ಕಾರು, ಸಮ್ಮೇಳನ ಸಮಿತಿಯ ಮುಂಬೈ ಸಮಿತಿಯ ಪ್ರಭಾಕರ ಎಲ್ ಶೆಟ್ಟಿ, ಜಿ.ಟಿ. ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕ ಎಸ್.ಆರ್. ಬಂಡಿಮಾರ್ ಸ್ವಾಗತಿಸಿದರು. ಅಧ್ಯಕ್ಷ ಡಾ. ವೈ.ಎನ್. ಶೆಟ್ಟಿ ಪ್ರಸ್ತಾವನೆಗೈದರು.ಕಾರ್ಯಾಧ್ಯಕ್ಷ ಚಂದ್ರಶೇಖರ ಸುವರ್ಣ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಮತ್ತು ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News