ಕರ್ಣಾಟಕ ಬ್ಯಾಂಕ್‌ನಿಂದ ಕದ್ರಿ ಪಾರ್ಕ್‌ಗೆ ನೈಸರ್ಗಿಕ ಬೆಳಕು!

Update: 2016-08-16 09:48 GMT

ಮಂಗಳೂರು,ಆ. 16: ನಗರದ ಅತೀ ದೊಡ್ಡ ಹಾಗೂ ಸುಂದರ ಪಾರ್ಕ್‌ಗಳಲ್ಲಿ ಒಂದಾಗಿರುವ ಕದ್ರಿ ಪಾರ್ಕ್ ಕೊನೆಗೂ ಬೆಳಗುವಂತಾಗಿದೆ. ನಗರದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ವತಿಯಿಂದ ಪಾರ್ಕ್‌ನ ಕಾಲುದಾರಿಯ ಉದ್ದಕ್ಕೂ ಇದೀಗ 18 ಲಕ್ಷ ರೂ. ವೆಚ್ಚದಲ್ಲಿ 60 ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ಆ ಮೂಲಕ ಪಾರ್ಕ್‌ಗೆ ನೈಸರ್ಗಿಕ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸೋಲಾರ್ (ಸೌರ) ದೀಪಗಳ ಉದ್ಘಾಟನೆಯನ್ನು ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಜಯರಾಂ ಭಟ್ ಇಂದು ನೆರವೇರಿಸಿದರು.

ಕರ್ಣಾಟಕ ಬ್ಯಾಂಕ್ ಈ ಯೋಜನೆಯನ್ನು ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ(ಸಿಎಸ್‌ಆರ್)ಯಲ್ಲಿ ಪ್ರಾಯೋಜಿಸಿದ್ದು, ಪಾರ್ಕ್‌ಗೆ ರೇಡಿಯೋ ಕೂಡಾ ಈ ಹಿಂದೆಯೇ ಒದಗಿಸಲಾಗಿದ್ದು ಅದು ಕೂಡಾ ಬಳಕೆಯಾಗುತ್ತಿದೆ ಎಂದರು. ಮಂಗಳೂರು ನಗರ ಸುಂದರೀಕರಣದ ನಿಟ್ಟಿನಲ್ಲಿ ಬ್ಯಾಂಕ್ ತನ್ನ ಸಿಎಸ್‌ಆರ್‌ನಡಿ ಈಗಾಗಲೇ ಹಲವಾರು ರೀತಿಯ ಕೊಡುಗೆಗಳನ್ನು ನೀಡಿದೆ. ವೆನ್‌ಲಾಕ್ ಆಸ್ಪತ್ರೆಗೆ 16 ಲಕ್ಷ ರೂ. ವೆಚ್ಚದಲ್ಲಿ ಡಯಾಲಿಸಿಸ್ ಯಂತ್ರ, 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ವಿಭಜಕಗಳನ್ನು ಒದಗಿಸಲಾಗಿದೆ ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ಮಾತನಾಡಿ, ರಾಜ್ಯದಲ್ಲಿ ರೂಫ್‌ಟಾಪ್ ಸೋಲಾರ್ ಪ್ಯಾನಲ್ ಅಳವಡಿಕೆಯ ಮೂಲಕ ವಿದ್ಯುತ್ ಉತ್ಪತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎರಡನೆ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸರಕಾರಿ ಕಟ್ಟಡಗಳಿಗೂ ಸೋಲಾರ್ ವಿದ್ಯುತ್ ಬಳಕೆ ಕಡ್ಡಾಯಗೊಳಿಸಲಾಗಿದೆ ಎಂದರು.

ಶಾಸಕ ಜೆ.ಆರ್. ಲೋಬೊ ಮಾತನಾಡಿ, ಕೆಲ ವರ್ಷಗಳ ಹಿಂದೆ ಮರುಭೂಮಿಯಂತಿದ್ದ ಕದ್ರಿ ಪಾರ್ಕ್ ಇದೀಗ ನವಚೈತನ್ಯವನ್ನು ಪಡೆದುಕೊಂಡಿದೆ. ಪಾರ್ಕ್‌ನ ಪ್ರವೇಶ ದ್ವಾರವನ್ನು ಸುಂದರಗೊಳಿಸುವ ಕಾರ್ಯದ ಜತೆ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆದಿತ್ತಾದರೂ ಸಂಜೆ ಹೊತ್ತು ಪಾರ್ಕ್‌ನಲ್ಲಿ ನಡೆದಾಡುವವರು (ವಾಕಿಂಗ್) ಬೆಳಕಿನ ವ್ಯವಸ್ಥೆಯಲ್ಲದೆ ತೊಂದರೆ ಅನುಭವಿಸಬೇಕಾಗಿತ್ತು. ಇದೀಗ ಆ ತೊಂದರೆಯನ್ನು ಕರ್ಣಾಟಕ ಬ್ಯಾಂಕ್ ಮೂಲಕ ನಿವಾರಿಸಲಾಗಿದೆ ಎಂದು ಹೇಳಿದರು.

ಕರ್ಣಾಟಕ ಬ್ಯಾಂಕ್‌ನ ಮುಖ್ಯ ಮಹಾ ಪ್ರಬಂಧಕ ಮಹಾಬಲೇಶ್ವರ ಎಂ.ಎಸ್. ಮಾತನಾಡಿ, ಪಾರ್ಕ್‌ನಲ್ಲಿ ಸೋಲಾರ್ ವಿದ್ಯುತ್‌ನ ಜತೆಗೆ ಎಲ್‌ಇಡಿ ಬಲ್ಪ್‌ಗಳನ್ನು ಉಪಯೋಗಿಸುವ ಮೂಲಕ ವಿದ್ಯುತ್ ಉಳಿತಾಯಕ್ಕೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾತನಾಡಿ, ಕರ್ಣಾಟಕ ಬ್ಯಾಂಕ್‌ನ ಕೊಡುಗೆಯಾದ ಸೌರ ವಿದ್ಯುತ್ ದೀಪಗಳನ್ನು ನಿರಂತರವಾಗಿ ನಿರ್ವಹಣೆ ಮಾಡುವ ಮೂಲಕ ಸುಸ್ಥಿತಿಯಲ್ಲಿಡಬೇಕಾಗಿದೆ ಎಂದರು.

ಸೋಲಾರ್ ಪ್ಯಾನಲ್‌ಗೆ ಬ್ಯಾಟರಿ ಅಳವಡಿಸಲಾಗಿದ್ದು, ಒಂದು ವರ್ಷ ಕಾಲ ದೀಪಗಳನ್ನು ಅಳವಡಿಸಿರುವ ಖಾಸಗಿ ಸಂಸ್ಥೆ ಇದರ ನಿರ್ವಹಣೆಯನ್ನು ವಹಿಸಲಿದೆ. ಬಳಿಕ ದ.ಕ. ಜಿಲ್ಲಾ ಪಂಚಾಯತ್‌ನ ತೋಟಗಾರಿಕಾ ಇಲಾಖೆಯು ಇದರ ನಿರ್ವಹಣೆಯನ್ನು ಮಾಡಲಿದೆ ಎಂದು ಅವರು ಹೇಳಿದರು.

ಕರ್ಣಾಟಕ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ ದೇಶಪಾಂಡೆ, ವಲಯ ಮುಖ್ಯಸ್ಥ ನಾಗರಾಜ್ ಉಪಸ್ಥಿತರಿದ್ದರು.

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ವಂದಿಸಿದರು.

ದೀಪಗಳು ಆಟೋ ಸೆನ್ಸಾರ್ ಅಪರೇಟಿವ್! ಮಾಸಿಕ 9,000 ರೂ. ಉಳಿತಾಯ!

ಕದ್ರಿ ಪಾರ್ಕ್‌ನಲ್ಲಿ ಅಳವಡಿಸಲಾಗಿರುವ ಸೌರ ವಿದ್ಯುತ್ ದೀಪಗಳನ್ನು ಉರಿಸಲು ಹಾಗೂ ನಂದಿಸುವ ಕಾರ್ಯಕ್ಕೆ ನಿರ್ವಾಹಕರ ಅಗತ್ಯವಿಲ್ಲ. ದೀಪಗಳಿಗೆ ಅಟೋ ಸೆನ್ಸಾರ್ ಅಳವಡಿಸಲಾಗಿರುವುದರಿಂದ ಸಂಜೆ ಸೂರ್ಯನ ಬೆಳಕು ಮಂಜಾಗುತ್ತಿರುವಂತೆಯೇ, ದೀಪಗಳು ಬೆಳಗಿ ಬೆಳಗ್ಗೆ ಸೂರ್ಯ ಉದಯಿಸಿ ಬೆಳಕು ಹರಿಯುತ್ತಿರುವಂತೆಯೇ ದೀಪಗಳು ಆರಲಿವೆ ಎಂದು ಕರ್ಣಾಟಕ ಬ್ಯಾಂಕ್‌ನ ಮುಖ್ಯ ಮಹಾ ಪ್ರಬಂಧಕ ಮಹಾಬಲೇಶ್ವರ ಎಂ.ಎಸ್. ತಿಳಿಸಿದರು.

ಈ ಸೋಲಾರ್ ವಿದ್ಯುತ್ ದೀಪಗಳಿಂದಾಗಿ ಸರಕಾರಕ್ಕೆ ಮಾಸಿಕ ಕನಿಷ್ಠ 9,000 ರೂ.ಗಳ ವಿದ್ಯುತ್ ದರ ಉಳಿತಾಯವಾಗಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News