ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮಕ್ಕೆ ಯು.ಟಿ.ಖಾದರ್ ಆಗ್ರಹ
ಮಂಗಳೂರು, ಆ. 19: ದನ ಸಾಗಾಟದ ವಿಚಾರದಲ್ಲಿ ಬ್ರಹ್ಮಾವರದ ಕೊಕ್ಕರ್ಣೆ ಸಮೀಪ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯನ್ನು ಕೊಲೆಗೈದ ಆರೋಪಿಗಳ ಸಹಿತ ಇದಕ್ಕೆ ಪ್ರೇರಣೆ ನೀಡಿದ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಅವರು ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಆಗ್ರಹಿಸಿದ್ದಾರೆ.
ಇಂದು ಬೆಂಗಳೂರಿನ ಅವರ ಕಚೇರಿಯಲ್ಲಿ ಮಾತುಕತೆ ನಡೆಸಿದ ಸಚಿವರು, ರಾಜ್ಯದಲ್ಲಿ ಗೋ ಸಾಗಾಟ ವಿಷಯಕ್ಕೆ ಸಂಬಂಧಿಸಿ ಅಮಾಯಕರ ಮೇಲೆ ಕೊಲೆ, ಹಲ್ಲೆಗಳು ಮುಂದುವರಿದಿದ್ದು, ಇದಕ್ಕೆ ಪ್ರೇರಣೆ ನೀಡುವ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
ಅಲ್ಪಸಂಖ್ಯಾತರು, ಬಳಿಕ ದಲಿತರು ಇದೀಗ ಬಿಲ್ಲವ ಜನಾಂಗಕ್ಕೆ ಸೇರಿದ ವ್ಯಕ್ತಿಯನ್ನು ಅಮಾನುಷವಾಗಿ ಕೊಲ್ಲುವ ಸಮಾಜ ಕಂಟಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸಬೇಕು. ಈ ಮೂಲಕ ಗೋ ರಕ್ಷಣೆಗಾಗಿ ಮಾನವ ಜೀವವನ್ನು ಬಲಿ ಪಡೆಯುತ್ತಿರುವ ಸಂಘಟನೆಗಳು ಹಾಗೂ ಅದರ ಕಾರ್ಯಕರ್ತರ ಕೃತ್ಯಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಖಾದರ್ ಅವರು ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದಾರೆ.