×
Ad

ಗೋರಕ್ಷಣೆಯ ಹೆಸರಿನಲ್ಲಿ ದುಷ್ಕೃತ್ಯ ಎಸಗುವ ಸಂಘಟನೆಗಳನ್ನು ನಿಷೇಧಿಸಲು ಯುವಕಾಂಗ್ರೆಸ್ ಆಗ್ರಹ

Update: 2016-08-20 15:36 IST

ಮಂಗಳೂರು, ಆ.20: ಗೋರಕ್ಷಣೆಯ ಹೆಸರಿನಲ್ಲಿ ದುಷ್ಕೃತ್ಯ ಎಸಗುವ ಸಂಘಟನೆಗಳನ್ನು ನಿಷೇಧಿಸಲು ಸರಕಾರ ಕ್ರಮಕೈಗೊಳ್ಳಬೇಕು ದ.ಕ. ಜಿಲ್ಲಾ ಯುವಕಾಂಗ್ರೆಸ್ ಆಗ್ರಹಿಸಿದೆ.

ಕಳೆದ ಕೆಲವು ಸಮಯಗಳಿಂದ ನಮ್ಮ ದೇಶದಲ್ಲಿ ಆಹಾರವೆನ್ನುವುದು ಅತಿ ಸೂಕ್ಷ್ಮ ವಿಚಾರವಾಗಿ ಮಾರ್ಪಟ್ಟಿದೆ. ಆಹಾರವಿಲ್ಲದೆ ನರಳುವವರು, ಆಹಾರಕ್ಕಾಗಿ ದಿನಂಪ್ರತಿ ಅಲೆಯುವವರೂ ಯಥೇಚ್ಛವಾಗಿದ್ದರೂ ಇದರ ಮಧ್ಯೆ ಆಹಾರವನ್ನು ಸೇವಿಸುವ ಕಾರಣಕ್ಕಾಗಿ ಅಥವಾ ವ್ಯಾಪಾರ ನಡೆಸಿದ ಕಾರಣಕ್ಕಾಗಿ ಹತ್ಯೆಗೀಡಾದ ಘಟನೆಗಳು ಈಗಾಗಲೆ ದಾದ್ರಿ, ಉನಾ ಮತ್ತು ಸಮೀಪದ ಉಡುಪಿಯ ಕೊಕ್ಕರ್ಣೆಯಲ್ಲೂ ಸಂಭವಿಸಿದೆ. ಆಹಾರವೆನ್ನುವುದು ವ್ಯಕ್ತಿಯ ವೈಯುಕ್ತಿಕ ಆಯ್ಕೆಯಾಗಿದ್ದರೂ ಅದಕ್ಕೆ ಗೋ ರಕ್ಷಣೆಯ ಧಾರ್ಮಿಕ ಲೇಪ ಹಚ್ಚಿ, ಅಮಾಯಕ ಅಲ್ಪಸಂಖ್ಯಾತರು, ದಲಿತರು, ಮತ್ತು ಇದೀಗ ಸ್ವ ಧರ್ಮೀಯರನ್ನೇ ಹತ್ಯೆಗೈದಿರುವುದು ಆತಂಕಕ್ಕೀಡುಮಾಡಿದೆ.

ದಲಿತರು, ಅಲ್ಪಸಂಖ್ಯಾತರಿಗಿಂತಲೂ ಸಂಘಪರಿವಾರದ ಮುಖಂಡರು ಹೆಚ್ಟು ದನದ ವ್ಯಾಪಾರ ನಡೆಸುತ್ತಿರುವುದು ನಗ್ನ ಸತ್ಯವಾಗಿದ್ದರೂ, ಸಂಘ ಪರಿವಾರಕ್ಕೆ ಸಮಯಕ್ಕೆ ಸರಿಯಾಗಿ ವಿವಾದ ಸೃಷ್ಟಿಸಲು ಗೊವು ಅಗತ್ಯವಾಗಿ ಬಿಟ್ಟಿದೆ. ಕಳೆದ 15 ವರ್ಷಗಳಿಂದ ಅಲ್ಪಸಂಖ್ಯಾತರ ಮೇಲಿನ ದಾಳಿಗಳು, ದಲಿತರ ಕಗ್ಗೊಲೆಗಳ ಮೂಲಕ ನಮ್ಮ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿ ಜನರ ಮಾನ ಸಂಪತ್ತುಗಳಿಗೆ ಹಾನಿಯುಂಟು ಮಾಡುವ ಸಂಘ ಪರಿವಾರದ ಹಿಡನ್ ಅಜೆಂಡಾ ಭಾಗವಾಗಿರುವ ಈ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅವಿಭಜಿತ ಕರಾವಳಿಯ ಜಿಲ್ಲೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.

ದೇಶದೊಳಗಿನ ಈ ಎಲ್ಲಾ ಅಹಿತಕರ ವಿದ್ಯಾಮಾನಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಕುಗ್ಗುವಂತೆ ಮಾಡುತ್ತಿದೆ. ಆದ್ದರಿಂದ ಇಂತಹ ನಕಲಿ ಗೋ ರಕ್ಷಕ ಸಂಘಟನೆಗಳನ್ನು ನಿಷೇಧಿಸಿ ಸೂಕ್ತವಾದ ಕಾನೂನು ಕ್ರಮಗಳನ್ನು ಜರುಗಿಸಬೇಕು. ಜೊತೆಗೆ ಇಂತಹ ಸಂಘಟನೆಗಳಿಗೆ ಆರ್ಥಿಕ ಸಹಾಯಗಳನ್ನು ನೀಡಿ ಯುವಕರನ್ನು ಅಮಾಯಕರ ಮೇಲೆ ದಾಳಿ ನಡೆಸುವಂತೆ ಪ್ರಚೋದಿಸುವ ನಾಯಕರುಗಳನ್ನು ಬಂಧಿಸಬೇಕಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ರಾಜ್ಯ ಸರಕಾರಗಳಿಗೆ ಸೂಚನೆಯನ್ನು ಕೊಟ್ಟಿರುವುದು ಸ್ವಾಗತಾರ್ಹ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ತಮ್ಮ ಮೌನವನ್ನು ಮುರಿದು ಈ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News