ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥಕ್ಕೆ ಹಸಿರು ನಿಶಾನೆ
ಕಾಸರಗೋಡು,ಆ.22 : ರಾಷ್ಟ್ರೀಯ ಹೆದ್ದಾರಿ ಚತುಷ್ಪಥಕ್ಕೆ ಕೊನೆಗೂ ಹಸಿರು ನಿಶಾನೆ ಲಭಿಸಿದೆ. ತಲಪಾಡಿಯಿಂದ ಕಾಲಿಕಡವು ತನಕದ ಕಾಮಗಾರಿ ಮುಂದಿನ ಮಾರ್ಚ್ ತಿಂಗಳಲ್ಲಿ ಆರಂಭಗೊಳ್ಳಲಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕುರಿತು ಪ್ರಕ್ರಿಯೆ ಚುರುಕುಗೊಳಿಸುವಂತೆ ರಾಜ್ಯ ಲೋಕೋಪಯೋಗಿ ಇಲಾಖಾ ಮುಖ್ಯ ಕಾರ್ಯದರ್ಶಿ ಸುಬ್ರತೊ ಬಿಸ್ವಾಸ್ ಆದೇಶ ನೀಡಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಅವಲೋಕನಾ ಸಭೆಯಲ್ಲಿ ಈ ಆದೇಶ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 80 ಶೇಕಡಾ ಸ್ಥಳ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. 69 ಹೆಕ್ಟೇರ್ ಸ್ಥಳವನ್ನು ಈಗಾಗಲೇ ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಉಳಿದ 28 ಹೆಕ್ಟೇರ್ ಸ್ಥಳದ ಸರ್ವೇ ಪ್ರಕ್ರಿಯೆಗೆ ಅಧಿಸೂಚನೆ ಸಿದ್ದಪಡಿಸಲಾಗಿದೆ. ಸ್ವಾಧೀನ ಪಡಿಸಿಕೊಳ್ಳುವ ಸ್ಥಳದ ನಷ್ಟ ಪರಿಹಾರ ನೀಡುವ ಮೂಲಕ ಡಿಸೆ೦ಬರ್ 31 ರೊಳಗೆ ಸ್ಥಳ ಸ್ವಾಧೀನ ಕುರಿತ ಗೊಂದಲ ಪರಿಹರಿಸುವ ಗುರಿ ಹೊಂದಲಾಗಿದೆ. 2017 ರ ಮಾರ್ಚ್ ನಲ್ಲಿ ಚತುಷ್ಪಥ ಕಾಮಗಾರಿ ಆರಂಭಿಸಲಾಗವುದು. ಸ್ವಾಧೀನಪಡಿಸಿ ಕೊಂಡಿರುವ ಸ್ಥಳದ ಕಟ್ಟಡ , ಕೃಷಿ ಸ್ಥಳ , ಮರ ಹಾಗೂ ಇತರ ಸೊತ್ತುಗಳ ಮೌಲ್ಯಮಾಪನಕ್ಕೆ ಅರಣ್ಯ, ಕಂದಾಯ , ಕೃಷಿ ಇಲಾಖೆಗಳು ಕೂಡಲೇ ಪೂರ್ಣಗೊಳಿಸುವಂತೆ ಸಭೆಯಲ್ಲಿ ಆದೇಶ ನೀಡಲಾಯಿತು .
ಪುನರ್ವಸತಿ ಕುರಿತು ರಾಜ್ಯ ಸರಕಾರ ಕ್ರಮ ತೆಗೆದುಕೊಳ್ಳಲಿದೆ. ಜಿಲ್ಲೆಯಲ್ಲಿ ತೀವ್ರಗೊಂಡಿರುವ ಸಂಚಾರ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅತೀ ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಕೆ . ಜೀವನ್ ಬಾಬು ಹೇಳಿದರು.
ಉತ್ತರ ಕೇರಳದ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅನಿವಾರ್ಯವಾಗಿದೆ. ಯೋಜನೆ ಅಂತಿಮ ವರದಿಯನ್ನು ಸೆಪ್ಟ೦ಬರ್ ೩೦ ರೊಳಗೆ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ಯವರು ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರಿಗೆ ಆದೇಶ ನೀಡಿದರು.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಕೆ . ಅಂಬುಜಾಕ್ಷನ್ , ಉಪಜಿಲ್ಲಾಧಿಕಾರಿ ಎಂ . ಸಿ ಸುಕುಮಾರನ್ , ಹೆದ್ದಾರಿ ಸಹಾಯಕ ಇಂಜಿನೀಯರ್ ಪಿ . ಕೆ ಮಿನಿ ಅಧಿಕಾರಿಗಳಾದ ವಿ . ರವಿ , ಎಂ . ಪ್ರದೀಪನ್ , ಪ್ರಿನ್ಸ್ ಪ್ರಭಾಕರನ್ , ಕೆ . ಮನೋರಂಜನ್ , ಎ. ಪಿ ಇಮ್ತಿಯಾಜ್ , ಸಿ . ಸುರೇಶ್, ಕೆ .ಸೇತುಮಾಧವನ್ ನಾಯರ್ , ಬಿನು ಮ್ಯಾಥ್ಯೂ ಪಣಿಕ್ಕರ್ , ಬಿ . ಎಂ ಜೋರ್ಜ್, ಬಿ . ಸುಧಾಕರನ್ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು