2015-16ನೇ ಸಾಲಿನಲ್ಲಿ 59.77 ಲಕ್ಷ ರೂ. ಲಾಭ ಗಳಿಸಿದ ಬೆಳ್ತಂಗಡಿ ಸಹಕಾರಿ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್
ಬೆಳ್ತಂಗಡಿ : 55ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಬೆಳ್ತಂಗಡಿ ಸಹಕಾರಿ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2015-16ನೇ ಸಾಲಿನಲ್ಲಿ ಶೇ. 15 ಡಿವಿಡೆಂಟ್ ಘೋಷಿಸಿ 59.77 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಈಶ್ವರ ಭಟ್ ಮಾಯಿಲೋಡಿ ತಿಳಿಸಿದರು.
ಅವರು ಬುಧವಾರ ಬ್ಯಾಂಕಿನ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದು ಸಂಸ್ಥೆಯ ಸಾಧನೆಯನ್ನು ವಿವರಿಸಿದರು.
ಬ್ಯಾಂಕ್ 14,548 ಸದಸ್ಯರನ್ನು ಒಳಗೊಂಡಿದೆ. ಇವರಲ್ಲಿ 2732 ಸದಸ್ಯರು ವ್ಯವಹಾರಿಕವಾಗಿ ಬ್ಯಾಂಕ್ನಲ್ಲಿ ತೊಡಗಿಸಿಕೊಂಡಿದ್ದಾರೆ. ವರ್ಷಾಂತ್ಯಕ್ಕೆ ನಬಾರ್ಡ್ ಸಾಲ ರೂ. 1461.01 ಲಕ್ಷ ಹಾಗು ಸ್ವಂತ ಬಂಡವಾಳ ಸಾಲ ರೂ.822.53 ಲಕ್ಷ ಆಗಿದ್ದು ರೂ. 2283.54 ಲಕ್ಷ ಒಟ್ಟು ಹೊರಬಾಕಿ ಸಾಲ ಆಗಿರುತ್ತದೆ. 2016-17ನೇ ಸಾಲಿನ ಬಡ್ಡಿ ಮನ್ನಾ ಹಾಗೂ ಬಡ್ಡಿ ರಿಯಾಯಿತಿಯಿಂದ ಬ್ಯಾಂಕ್ ನಬಾರ್ಡ್ ಯೋಜನಾ ಸಾಲಗಳಲ್ಲಿ 87.65 ಶೇ. ಸ್ವಂತ ಬಂಡವಾಳ ಯೋಜನಾ ಸಾಲಗಳಲ್ಲಿ 73.93 ಶೇ. ಸಾಲ ವಸೂಲಾಗಿದೆ ಎಂದರು.
ರೈತರು ಸಾಲಗಳ ಕಂತುಗಳನ್ನು ಸಕಾಲದಲ್ಲಿ ಮರುಪಾವತಿಸಿದರೆ ನಬಾರ್ಡ್ ಸಂಸ್ಥೆ ಸಾಲವನ್ನು ರೈತರಿಗೆ ನೀಡಲು ಮುಂದಾಗುತ್ತದೆ. 2016-17ನೇ ಸಾಲಿಗೆ ರಾಜ್ಯ ಬ್ಯಾಂಕಿನಿಂದ ನಬಾರ್ಡ್ ಸಾಲ ಯೋಜನೆಯಲ್ಲಿ 284.07 ಲಕ್ಷ ರೂ. ಮಂಜೂರಾತಿಗೆ ಬೇಡಿಕೆಯನ್ನು ಇಡಲಾಗಿದೆ. ಒಟ್ಟು 8 ಕೋಟಿ ರೂ. ಸಾಲ ವಿತರಿಸುವ ಯೋಜನೆಯನ್ನು ಹೊಂದಿದ್ದು ನಬಾರ್ಡ್ ಸಂಸ್ಥೆಗೆ ನೇರ ಸಾಲಕ್ಕಾಗಿ 5 ಕೋಟಿ ರೂ. ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ ರೂ. 2 ಕೋಟಿ ಮಂಜೂರಾಗಿ ರೂ. 1 ಕೋಟಿ ಬಿಡುಗಡೆಯಾಗಿರುತ್ತದೆ ಎಂದರು.
ರೈತರಿಂದ ಠೇವಣಾತಿ ಹಣದಿಂದ ಸಾಲ ಕೊಡುವ ವ್ಯವಸ್ಥೆಯಿದ್ದ ಅಲ್ಲದೆ ಚಿನ್ನಾಭರಣ ಈಡಿನ ಮೇಲೆ ಮಾರುಕಟ್ಟೆ ಧಾರಣೆಯ 75ಶೇ. ಸಾಲ ನೀಡಲಾಗುತ್ತಿದೆ. ವೇತನ ಆಧಾರದ ಮೇಲೆ ಗರಿಷ್ಠ 2 ಲಕ್ಷ ರೂ. ಸಾಲ ನೀಡಲಾಗುತ್ತದೆ. 1 ವರ್ಷದಿಂದ 5 ವರ್ಷದವರಿಗಿನ ಠೇವಣಾತಿಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. 2015 ಅಂತ್ಯಕ್ಕೆ 627.30 ಲಕ್ಷ ಇದ್ದ ಠೇವಣಿಗೆ 2016ರ ಅಂತ್ಯಕ್ಕೆ 1085.55 ಲಕ್ಷ ಠೇವಣಿ ಸಂಗ್ರಹವಾಗಿದೆ ಇದು ಈ ವರದಿ ಸಾಲಿನಲ್ಲಿ 173.04 ಹೆಚ್ಚುವರಿ ಪ್ರಗತಿ ಸಾಧಿಸಿದೆ. 2016-17ನೇ ಸಾಲಿನಲ್ಲಿ 10 ಕೋಟಿ ರೂ. ಸಂಗ್ರಹಣ ಗುರಿಯಿಟ್ಟುಕೊಂಡಿದ್ದು ಪಿಗ್ಮಿ ಸಂಗ್ರಹಣೆ ಪ್ರಾರಂಭಿಸಿ ವರ್ಷಾಂತ್ಯಕ್ಕೆ 19.05 ಲಕ್ಷ ರೂ. ಪಿಗ್ಮಿ ಸಂಗ್ರಹ, ಪಿಗ್ಮಿ ಭದ್ರತಾ ಠೇವಣಿ 0.17 ಲಕ್ಷ ರೂ. ಆಗಿದೆ ಎಂದರು.
ಬ್ಯಾಂಕಿನ ಕಟ್ಟಡ ಮತ್ತು ಮೇಲ್ಛಾವಣಿ ದುರಸ್ಥಿ ಮತ್ತು ವಿಸ್ತರಣೆ ಮಾಡಲಾಗುತ್ತಿದ್ದು ಕಟ್ಟಡ ನಿಧಿಯಿಂದ 21.50 ಲಕ್ಷ ರೂ. ಭರಿಸಿಕೊಂಡು ಸರಕಾರದಿಂದ 7 ಲಕ್ಷ ರೂ. ಸಹಾಯಧನ ಸೇರಿಸಿ 28.5 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದ್ದು ಆಡಳಿತಾತ್ಮಕ ಹಾಗೂ ಲೋಕೋಪಯೋಗಿ ಇಲಾಖಾ ಮಂಜುರಾತಿಯೊಂದಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿದೆ. ಪ್ರತೀ ತಿಂಗಳು ರೈತರಿಗೆ ಸಾಲ ನೀಡುವ ಯೋಜನೆ ಹಮ್ಮಿಕೊಂಡಿದೆ. ನಮ್ಮ ಬ್ಯಾಂಕಿನ ಜವಾನರೊಬ್ಬರು ಇತ್ತೀಚೆಗೆ ನಿಧನ ಹೊಂದಿದ್ದು 4.80 ಲಕ್ಷ ರೂ. ಉಪಧನ ನೀಡಲಾಗಿದೆಎಂದರು.
ಗೋಷ್ಠಿಯಲ್ಲಿ ಬ್ಯಾಂಕ್ನ ಉಪಾಧ್ಯಕ್ಷ ಬಿ. ಎಸ್. ಮುಕುಂದ ಸುವರ್ಣ, ನಿರ್ದೇಶಕರುಗಳಾದ ಪ್ರವೀಣ್ಚಂದ್ರ, ಪೆಲಪ್ಪಾರು ವೆಂಕಟರಮಣ ಭಟ್, ಶುಭಕರ ಪೂಜಾರಿ, ಪ್ರಭಾರ ವ್ಯವಸ್ಥಾಪಕ ವೆಂಕಪ್ಪಯ್ಯ ಉಪಸ್ಥಿತರಿದ್ದರು.