×
Ad

ಪ್ರತಿಭಟನೆಗೆ ಐ ಡೋಂಟ್ ಕೇರ್, ಮಂಗಳೂರು ಸ್ವರ್ಗ : ರಮ್ಯಾ

Update: 2016-08-25 21:41 IST

ಮಂಗಳೂರು, ಆ. 25 : ಪಾಕ್ ಕುರಿತ ತನ್ನ ಹೇಳಿಕೆಗೆ ನಡೆಯುತ್ತಿರುವ ಪ್ರತಿಭಟನೆ , ಹೇಳಿಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿರುವ ಮಾಜಿ ಸಂಸದೆ, ನಟಿ ರಮ್ಯಾ ನನ್ನ ಹೇಳಿಕೆಗೆ ನಾನು ಸಂಪೂರ್ಣ ಬದ್ಧ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿಗೆ ಗುರುವಾರ ಭೇಟಿ ನೀಡಿದ್ದ ರಮ್ಯಾ 'ವಾರ್ತಾ ಭಾರತಿ' ಯೊಂದಿಗೆ ಮಂಗಳೂರಿನ ಗೇಟ್ ವೇ ಹೋಟೆಲಿನಲ್ಲಿ ನಡೆಸಿದ ಎಕ್ಸ್ ಕ್ಲೂಸಿವ್  ಪುಟ್ಟ ಮಾತುಕತೆಯಲ್ಲಿ ಹೇಳಿದ್ದಿಷ್ಟು :

ವಾ. ಭಾ. : ನಿಮ್ಮ  ಪಾಕ್ ಕುರಿತ ಹೇಳಿಕೆಗೆ ವ್ಯಕ್ತವಾಗಿರುವ ಪ್ರತಿಕ್ರಿಯೆ ನೋಡಿ ಇದು  ಬೇಡವಾಗಿತ್ತು ಎಂದು ಅನಿಸುತ್ತಿದೆಯೇ ?

ರಮ್ಯಾ : ನಾಟ್ ಎಟ್ ಆಲ್ .. ನಾನು ಏನೂ ತಪ್ಪು ಮಾಡಿಲ್ಲ. ನಾನು ಹೇಳಿದ್ದು ಸರಿಯಾಗಿಯೇ ಇದೆ. ನಾವು ಯಾವತ್ತೂ ಎಲ್ಲರಲ್ಲೂ ಒಳ್ಳೆಯದನ್ನು ನೋಡಬೇಕು, ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಲು ಪ್ರಯತ್ನಿಸಬೇಕು. ನಾನು ಸಾರ್ಕ್ ಕಾರ್ಯಕ್ರಮಕ್ಕೆ ಪಾಕಿಸ್ತಾನಕ್ಕೆ ಹೋದಾಗ ನನ್ನನ್ನು ಅಲ್ಲಿ ಅತ್ಯಂತ ಆದರದಿಂದ ನೋಡಿಕೊಂಡಿದ್ದಾರೆ. ಅದನ್ನು ನಾನು ಹೇಳಿದ್ದೇನೆ. ಆದರೆ ಇದರಲ್ಲಿ ಮಾಧ್ಯಮಗಳ ತಪ್ಪಿದೆ. ಕೆಲವು ಲೋಕಲ್ ಚಾನೆಲ್ ಗಳು ಅದನ್ನು ಬೇರೆಯೇ ರೂಪದಲ್ಲಿ ಶೀರ್ಷಿಕೆ ನೀಡಿ ಪ್ರಕಟಿಸಿದವು. ಈ ಬಗ್ಗೆ ನಾನು ಅವರಲ್ಲಿ ಕೇಳಿದಾಗ " ಮೇಡಂ, ಹೆಡ್ಡಿಂಗ್ ಮಾತ್ರ ಆ ತರ ಇದೆ, ಒಳಗೆ ನೀವು ಹೇಳಿದ್ದನ್ನು ಸರಿಯಾಗಿ ಬರೆದಿದ್ದೇವೆ " ಎಂದು ಹೇಳಿದ್ದಾರೆ. ಆದರೆ ಇವತ್ತು ಹೆಡ್ಡಿಂಗ್ ನಿಂದಲೇ ಜನರಲ್ಲಿ ಗೊಂದಲ ಉಂಟಾಗುತ್ತದೆ. ಈ ಬಗ್ಗೆ ಆ ಚಾನೆಲ್ ನವರು ಯೋಚಿಸಬೇಕಿತ್ತು. ಆದರೆ ಪಾಕಿಸ್ತಾನದಲ್ಲೂ ಒಳ್ಳೆಯವರಿದ್ದಾರೆ ಎಂಬ ನನ್ನ ಹೇಳಿಕೆಗೆ ನಾನು ಸಂಪೂರ್ಣ ಬದ್ಧಳಾಗಿದ್ದೇನೆ. ಈಗ ನಡೆಯುತ್ತಿರುವ ಪ್ರತಿಭಟನೆಗಳಿಗೆ ಐ ಡೋಂಟ್ ಕೇರ್ . ನಾನು ಮಂಗಳೂರಿನ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ನನಗೆ ಮಂಗಳೂರು ಇಷ್ಟ. ಮಂಗಳೂರು ಹೆವೆನ್ ( ಸ್ವರ್ಗ) . ಇದನ್ನು ಸ್ಪಷ್ಟವಾಗಿ ಹೇಳ್ತೇನೆ. ಹಾಗೆ ಬರೀರಿ. 

ವಾ. ಭಾ. : ನಿಮ್ಮ ಪಕ್ಕದ ಜಿಲ್ಲೆಯ ಬಿಜೆಪಿ ಸಂಸದರು ನಿಮ್ಮನ್ನು ಪಾರ್ಟ್ ಟೈಮ್ ಅಪ್ರಸ್ತುತ ರಾಜಕಾರಣಿಯ ಬೇಜವಾಬ್ದಾರಿ ಹೇಳಿಕೆ ಎಂದು ಹೇಳಿದ್ದಾರೆ !

ರಮ್ಯಾ : ಹೇಳ್ಳಿ ಬಿಡಿ. ನನ್ನ ಬಗ್ಗೆ ಹೀಗೆ ಟೀಕೆ , ಟಿಪ್ಪಣಿ ಇದೇ ಮೊದಲು ಬರುತ್ತಿಲ್ಲ. ಹಾಗಾಗಿ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು  ಹಾಗೆ ಹೇಳಿದವರ ಬಗ್ಗೆ ನಾನು ಕೆಟ್ಟದಾಗಿ ಮಾತನಾಡುವುದಿಲ್ಲ. 

ವಾ. ಭಾ. : ನಿಮಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾತ್ಯತೀತರು, ಯುವಜನತೆ ಸಾಕಷ್ಟು ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಿಮ್ಮ  ಪಕ್ಷದವರು ಮಾತ್ರ ನಿಮಗೆ ಸರಿಯಾಗಿ ಬೆಂಬಲ ನೀಡುತ್ತಿದ್ದ ಹಾಗೆ ಕಾಣುತ್ತಿಲ್ಲ. ಸಚಿವರಲ್ಲಿ ಯು.ಟಿ.ಖಾದರ್ ಮಾತ್ರ ನಿಮ್ಮನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. 

ರಮ್ಯಾ : ಇಲ್ಲ. ನನಗೆ ಪಕ್ಷದಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ. ರಾಜ್ಯ ಮಟ್ಟದಲ್ಲಿ ಮಾತ್ರವಲ್ಲ ರಾಷ್ಟ್ರ ಮಟ್ಟದ ನಾಯಕರೂ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಕೃಷ್ಣ ಬೈರೇಗೌಡ, ರಮಾನಾಥ ರೈ, ದಿಗ್ವಿಜಯ್ ಸಿಂಗ್, ರಣದೀಪ್ ಸುರ್ಜೆವಾಲಾ, ಸಂಜಯ್ ಝಾ ಹೇಳಿಕೆ ನೀಡಿದ್ದಾರೆ. 

ವಾ. ಭಾ. : ಹೀಗೆ ಯಾಕೆ ಹೇಳಲಿಕ್ಕೆ ಹೋಗಿದ್ದೀರಿ ಎಂದು ಪಕ್ಷದಿಂದ ಕೇಳಿದ್ದಾರಾ  ?

ರಮ್ಯಾ : ಇಲ್ಲ. ನನಗೆ ಎಲ್ಲ ನಾಯಕರೂ ಬೆಂಬಲ ಕೊಟ್ಟಿದ್ದಾರೆ. 

ವಾ. ಭಾ. : ನೀವು ಯುವ ನಾಯಕರು. ಈಗ ನಿಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರೂ ಯುವಜನತೆ. ಈ ಬಗ್ಗೆ ನಿಮಗೆ ಏನು ಅನಿಸುತ್ತೆ ? 

ರಮ್ಯಾ :  ಬೇಸರ ಆಗುತ್ತೆ. ಯುವಜನತೆ ಶಿಕ್ಷಣದ ಕಡೆ, ತಮ್ಮ ಭವಿಷ್ಯ ರೂಪಿಸುವ ಬಗ್ಗೆ ಗಮನ ನೀಡಬೇಕು. ಆದರೆ ಇಂತಹ ಚಟುವಟಿಕೆಯಲ್ಲಿ ಅವರನ್ನು ನೋಡುವಾಗ ನೋವಾಗುತ್ತೆ. ಆದರೆ ನಾನು ಅವರ ಬಗ್ಗೆ ಕೆಟ್ಟದ್ದನ್ನು ಹೇಳುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದೇ ಹಾರೈಸುತ್ತೇನೆ. ಇವತ್ತಲ್ಲ ನಾಳೆ ಎಲ್ಲರಿಗೂ ನನ್ನ ಹೇಳಿಕೆ ಸರಿ ಎಂದು ಗೊತ್ತಾಗುತ್ತೆ ಎಂದು ಆಶಿಸುತ್ತೇನೆ. 

ವಾ. ಭಾ. : ನಿಮ್ಮ ಮುಂದಿನ ರಾಜಕೀಯ ನಡೆ ಏನು ? ಮಂಡ್ಯದಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತೀರಾ ? ವಿಧಾನ ಪರಿಷತ್ ಸ್ಥಾನಕ್ಕೆ ಪ್ರಯತ್ನ ಮುಂದುವರಿಸುತ್ತೀರಾ ?

ರಮ್ಯಾ :  ನನಗೇನೋ ಗೊತ್ತಿಲ್ಲ. ಏಕೆಂದರೆ ನಾನು ಅಂತಹ ಯಾವುದೇ ಪ್ರಯತ್ನ ಮಾಡುವುದಿಲ್ಲ. ಅದು ನನ್ನ ಕೈಯಲ್ಲಿ ಇಲ್ಲ.  ಪಕ್ಷಕ್ಕೆ ನಾನು ಸ್ಪರ್ಧಿಸಬೇಕು ಎಂದು ಅನಿಸಿದರೆ ಅದು ಖಂಡಿತ ನನಗೆ ಅವಕಾಶ ಕೊಡುತ್ತದೆ. ಹಾಗಾಗಿ ನಾನು ಈಗ ಏನೂ ಹೇಳುವುದಿಲ್ಲ. 


 

Writer - ಸಂದರ್ಶನ : ರೂಮಿ

contributor

Editor - ಸಂದರ್ಶನ : ರೂಮಿ

contributor

Similar News