ಪೂಜೆಯ ನೆಪದಲ್ಲಿ ಮಧ್ಯರಾತ್ರಿ ದಾಖಲೆ ನಾಶ: ಸಂಘಟನೆಗಳ ಆರೋಪ
ಪುತ್ತೂರು, ಆ.26: ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ನಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಈಗಾಗಲೇ ಹಲವಾರು ದೂರು ನೀಡಿದರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಆದರೆ ಆರೋಪಿ ವ್ಯಕ್ತಿ ಹಾಗೂ ಆತನ ಹಿಂಬಾಲಕರು ಆಗಸ್ಟ್ 21ರಂದು ಮಧ್ಯರಾತ್ರಿ ಗ್ರಾ.ಪಂ. ಕಚೇರಿಯಲ್ಲಿ ಪೂಜೆಯ ನೆಪ ಮಾಡಿಕೊಂಡು ದಾಖಲೆ ನಾಶ ಮಾಡಿದ್ದಾರೆ ಎಂದು ಕಡಬ ಮಾನವ ಹಕ್ಕು ಸಂರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ, ಪುತ್ತೂರು ಎಐಟಿಯುಸಿ ಹಾಗೂ ಐತ್ತೂರು ನಾಗರಿಕ ಹೋರಾಟ ಸಮಿತಿ ಆರೋಪಿಸಿದೆ.
ಪುತ್ತೂರಿನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ಹಲವಾರು ಭ್ರಷ್ಟಾಚಾರದ ಆರೋಪಗಳನ್ನು ಹೊತ್ತುಕೊಂಡಿರುವ ಐತ್ತೂರು ಗ್ರಾ.ಪಂ ಅಧ್ಯಕ್ಷರಾದ ಸತೀಶ್ ಕೆ ಇವರು ಜನತೆಗೆ ಮೋಸ ಮಾಡಿ ಸರಕಾರದಿಂದ ಅಭಿವೃದ್ಧಿ ಅನುದಾನವನ್ನು ಕಬಳಿಸಿದ್ದಾರೆ. ಈ ಬಗ್ಗೆ ಸಾಕ್ಷಿ ಸಮೇತ ದೂರು ನೀಡಿದರೂ ಇವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದರು.
ಗ್ರಾಮಪಂಚಾಯತ್ಗೆ ಮಧ್ಯರಾತ್ರಿ ಅಕ್ರಮಪ್ರವೇಶ ಮಾಡಿ ದಾಖಲೆಗಳನ್ನು ನಾಶ ಮಾಡುವ ಇವರ ಹುನ್ನಾರ ಜನತೆಗೆ ಗೊತ್ತಾದ ತಕ್ಷಣ ನಾವು ಕಚೇರಿಯಲ್ಲಿ ಗಣಹೋಮ ಮಾಡಿರುವುದಾಗಿ ಹೇಳುತ್ತಾರೆ. ಸರಕಾರಿ ಕಚೇರಿಯೊಂದರಲ್ಲಿ ಪ್ರಾಣಿ ಬಲಿ ಮಾಡಿದ್ದಾರೆ. ಕೋಳಿಯ ರಕ್ತವನ್ನು ಕಚೇರಿಯೊಳಗೆ ಸಿಂಪಡಿಸಿದ್ದಾರೆ. ಗಣಹೋಮಕ್ಕಾಗಿ ಮಧ್ಯರಾತ್ರಿ ಕಚೇರಿಯೊಳಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಗಣ ಹೋಮ ಮಾಡುವುದು ಮುಂಜಾನೆ. ರಾತ್ರಿಹೊತ್ತು ಕಚೇರಿಯ ಸಿಬ್ಬಂದಿಯನ್ನು ಬಲಾತ್ಕಾರವಾಗಿ ಕರೆಸಿಕೊಳ್ಳಲಾಗಿದೆ ಎಂದವರು ಆರೋಪಿಸಿದರು.
ಐತ್ತೂರು ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿನ ಸುಂಕದಕಟ್ಟೆ ಮೂಜೂರು ಎಂಬಲ್ಲಿ 2000 ನೆ ಇಸವಿಯಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿತ್ತು. ಇದರ ಪಂಪು ಹಾಳಾಗಿದ್ದು, ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ 2013ರಲ್ಲಿ ಇದನ್ನು ಹೊರತೆಗೆಯಲಾಗಿತ್ತು. ಆದರೆ ಈ ಪಂಪು ಈಗಲೂ ದುರಸ್ಥಿಯಾಗಿಲ್ಲ. ಇದರಿಂದ ಈ ಬಾಗದ ಜನತೆಗೆ ಕುಡಿಯಲು ನೀರಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಪಂಪು ಹಾಗೂ ಇತರ ಹಲವಾರು ಪಂಪುಗಳನ್ನು ಮತ್ತು ಲಕ್ಷಾಂತರ ಬೆಲೆಯ ಪೈಪುಗಳನ್ನು ಅಧ್ಯಕ್ಷ ಸತೀಶ್ ಕೆ. ಮಾರಾಟ ಮಾಡಿ ಜನತೆಗೆ ವಂಚನೆ ಮಾಡಿದ್ದಾರೆ ಎಂದವರು ಆರೋಪಿಸಿದರು.
ಈಗಾಗಲೇ ಪಂಚಾಯತ್ ಹಣವನ್ನು ದುರುಪಯೋಗ ಮಾಡಿಕೊಂಡ ಅಧ್ಯಕ್ಷ ಸತೀಶ್ ಹಲವಾರು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ. ಇವರ ಕೆಲಸಕ್ಕೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ಇದುವರೆಗೆ 7 ಮಂದಿ ಅಭಿವೃದ್ಧಿ ಅಧಿಕಾರಿಗಳು, ಇಬ್ಬರು ಕಾರ್ಯದರ್ಶಿಗಳನ್ನು ಎತ್ತಂಗಡಿ ಮಾಡಿಸಿದ್ದಲ್ಲದೆ, ಒಬ್ಬರು ಸಿಬ್ಬಂದಿಯನ್ನು ವಜಾಗೊಳಿಸಿದ್ದಾರೆ. ನ್ಯಾಯಾಲಯದಲ್ಲಿ ಇವರ ಭ್ರಷ್ಟಾಚಾರ ರುಜುವಾತುಗೊಂಡಿದ್ದರೂ ಪಂಚಾಯತ್ ಇಲಾಖೆ ಅಧಿಕಾರಿಗಳು ಮಾತ್ರ ವೌನಕ್ಕೆ ಶರಣಾಗುವ ಜೊತೆಗೆ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಾರೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಅಧ್ಯಕ್ಷ ಅಫ್ನಾನ್ ಎ., ದಲಿತ ಸಂಘರ್ಷ ಸಮಿತಿಯ ಸಂಚಾಲಕ ಆನಂದ ಮಿತ್ತಬೈಲು, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ರಾಮಣ್ಣ ರೈ, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಸೇಸಪ್ಪ ಗೌಡ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯದರ್ಶಿ ರಾಜರತ್ನಂ ಓಟೆಕಜೆ ಉಪಸ್ಥಿತರಿದ್ದರು.