ಚುಟುಕು ಸುದ್ದಿಗಳು

Update: 2016-08-28 18:39 GMT

ಕಾರು-ಆಟೊ ಢಿಕ್ಕಿ: ಮೂವರಿಗೆ ಗಾಯ
ಉಪ್ಪಿನಂಗಡಿ, ಆ.28: ಇಲ್ಲಿನ ಸುಬ್ರಹ್ಮಣ್ಯ ಕ್ರಾಸ್ ಬಳಿ ಆಲ್ಟೊ ಕಾರು ಹಾಗೂ ಆಟೊ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ನಡೆದಿದೆ. ಗಾಯಾಳುಗಳನ್ನು ಕಾಂಚನ ನಿವಾಸಿ ಗಳಾದ ಅರುಣ್, ವಲೇರಿಯನ್ ಮತ್ತು ರಿಕ್ಷಾ ಚಾಲಕ ಯೋಗೀಶ್ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿಯಿಂದ ಕಾಂಚನದತ್ತ ಸಂಚರಿಸುತ್ತಿದ್ದ ರಿಕ್ಷಾಕ್ಕೆ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಆಲ್ಟೊ ಕಾರು ಢಿಕ್ಕಿ ಹೊಡೆದಿದೆ. ಪುತ್ತೂರು ಟ್ರಾಫಿಕ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಲಾರಿ ಪಲ್ಟಿ: ಮೂರು ಜಾನುವಾರು ಸಾವು
ಬಂಟ್ವಾಳ, ಆ.28: ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಕಲ್ಲಡ್ಕ ಅಮ್ಟೂರು ಚರ್ಚ್ ಬಳಿ ಪಲ್ಟಿಯಾದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ. ಹಾಸನದಿಂದ ಕೇರಳಕ್ಕೆ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿದ್ದ 407 ಲಾರಿ ಚಾಲಕನ ನಿಯಂತ್ರಣ ತಪ್ಪಿರಸ್ತೆ ಬದಿಗೆ ಉರುಳಿ ಬಿದ್ದಿದೆ. ಲಾರಿಯಲ್ಲಿ ಒಟ್ಟು 11 ಜಾನುವಾರುಗಳಿದ್ದು, ಅವುಗಳ ಪೈಕಿ 3 ಜಾನುವಾರು ಮೃತಪಟ್ಟಿದೆ. ಉಳಿದ ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಬಳಿಕ ಚಾಲಕ ಹಾಗೂ ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ನಗರ ಠಾಣೆಯ ಎಸ್ಸೈ ನಂದಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News