ಉಳ್ಳಾಲದ ಯುವಕ ಬೆಂಗಳೂರಿನಲ್ಲಿ ಫ್ಲ್ಯಾಟ್ ನಿಂದ ಬಿದ್ದು ಮೃತ್ಯು: ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಿಕರು

Update: 2016-08-30 15:20 GMT

ಮಂಗಳೂರು, ಆ. 30: ಉಳ್ಳಾಲ ಸಮೀಪದ ಯುವಕನೋರ್ವ ಬೆಂಗಳೂರಿನಲ್ಲಿ ಫ್ಲಾಟ್‌ವೊಂದರ ಮೂರನೆ ಮಹಡಿಯಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಮೃತ ಯುವಕನ ಸಂಬಂಧಿಕರು ಇದೊಂದು ಕೊಲೆ ಕೃತ್ಯವಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

 ಮೃತಪಟ್ಟಿರುವ ಯುವಕನನ್ನು ಉಳ್ಳಾಲ ಅಕ್ಕರಕೆರೆಯ ನಿವಾಸಿ ಇಸ್ಮಾಯೀಲ್ ನಿಶಾಲ್ (21) ಎಂದು ಗುರುತಿಸಲಾಗಿದೆ.

ಮಂಗಳೂರಿನ ಪಿವಿಎಸ್‌ನಲ್ಲಿರುವ ಸಬ್‌ಡೀನ್ ಸಂಸ್ಥೆಯಲ್ಲಿ ಬಿಟೆಕ್ ಪದವಿ ಮುಗಿಸಿದ್ದ ನಶಾಲ್ ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಕಂಪೆನಿ ಒಂದಕ್ಕೆ ಉದ್ಯೋಗದ ಸಂದರ್ಶನಕ್ಕಾಗಿ ತೆರಳಿದ್ದರು. ಬೆಂಗಳೂರಿನ ಇಸ್ರೋ ಜಂಕ್ಷನ್‌ನ ಎಸ್.ಆರ್.ಲೇಔಟ್ ಫ್ಲಾಟ್‌ವೊಂದಲ್ಲಿ ಗೆಳೆಯರೊಂದಿಗೆ ವಾಸವಾಗಿದ್ದರು. ಸೋಮವಾರ ತಡರಾತ್ರಿ ನಿಶಾಲ್ ಮತ್ತು ತಂಡದ ನಡುವೆ ಬ್ಯಾನರ್ ವಿಷಯಕ್ಕೆ ಸಂಬಂಧಿಸಿ ಜಗಳವಾಗಿದೆ. ಜಗಳ ತಾರಕ್ಕೇರಿದ ಪರಿಣಾಮ ತಂಡದ ಕೆಲವರು ನಿಶಾಲ್‌ನನ್ನು ಓಡಿಸಿಕೊಂಡು ಬಂದಿದ್ದು, ಅವರಿಂದ ತಪ್ಪಿಸುವ ಕೊಳ್ಳುವ ಧಾವಂತದಲ್ಲಿ ಫ್ಲಾಟ್‌ನ ಮೂರನೆ ಮಹಡಿಯಿಂದ ಪೈಪ್‌ವೊಂದರ ಸಹಾಯದಿಂದ ನಿಶಾಲ್ ಕೆಳಗಿಳಿಯುತ್ತಿದ್ದ. ಈ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ನಿಶಾಲ್ ಜಾರಿ ಕೆಳಗೆ ಬಿದ್ದಿದ್ದಾರೆ ಎಂದು ಹಳೆ ಏರ್‌ಪೋರ್ಟ್ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹಳೆ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ನಿಶಾಲ್ ಅವರದ್ದು ಕೊಲೆಯೆಂಬ ಸಂಶಯವನ್ನು ಸಂಬಂಧಿಕರು ವ್ಯಕ್ತಪಡಿಸಿದ್ದಾರೆ.

ನಿಶಾಲ್‌ರ ಮೃತದೇಹವನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಮೃತದೇಹವನ್ನು ಮಂಗಳವಾರ ತಡರಾತ್ರಿ ಉಳ್ಳಾಲಕ್ಕೆ ತರಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News