ಎರಡನೆ ಬಾರಿಗೆ ಮುಚ್ಚುವ ಭೀತಿಯಲ್ಲಿದೆ ಸಜಂಕಾಡಿ ಶಾಲೆ
ಪುತ್ತೂರು, ಸೆ.2: ಪುತ್ತೂರು ತಾಲೂಕಿನ ಗಡಿ ಗ್ರಾಮವಾದ ಪಡುವನ್ನೂರು ಗ್ರಾಮದ ಸಜಂಕಾಡಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುವ ಭೀತಿಯಲ್ಲಿದೆ. ಕಳೆದ 10 ವರ್ಷಗಳ ಹಿಂದೆ ಮಕ್ಕಳಿಲ್ಲದ ಕಾರಣ ಮುಚ್ಚಿದ್ದ ಶಾಲೆಯನ್ನು ಊರವರು ಶ್ರಮಪಟ್ಟು ಪುನರಾರಂಭಿಸಿದ್ದರು. ಇದೀಗ ಅದೇ ಶಾಲೆ ಮತ್ತೊಮ್ಮೆ ಶಾಶ್ವತವಾಗಿ ಮುಚ್ಚುವ ಭೀತಿಯಲ್ಲಿದೆ.
1965ರಲ್ಲಿ ನಿರ್ಮಾಣಗೊಂಡ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸಜಂಕಾಡಿ ಶಾಲೆಯಲ್ಲಿ ಪ್ರಾರಂಭದ ದಿನಗಳಲ್ಲಿ ಮಕ್ಕಳು ಗರಿಷ್ಟ ಸಂಖ್ಯೆಯಲ್ಲಿದ್ದರು. ಆದರೆ ಬಳಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಲೇ ಹೋಗಿ 2005ರಲ್ಲಿ ಶಾಲೆ ಸಂಪೂರ್ಣವಾಗಿ ಬಾಗಿಲು ಬಂದ್ ಮಾಡಿತ್ತು. ಶಾಲೆ ಮುಚ್ಚಿದ ಕಾರಣ ಸ್ಥಳೀಯ ಬಡವರ ಮಕ್ಕಳಿಗೆ ತೊಂದರೆಯಾಯಿತು ಎಂದು ಮನಗಂಡ ಪೋಷಕರು ಮತ್ತೆ ಮಕ್ಕಳನ್ನು ಶಾಲೆಗೆ ಸೇರಿಸಿ ಶಿಕ್ಷಕರನ್ನು ನೇಮಿಸುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಕಳೆದ 10 ವರ್ಷಗಳಿಂದ ಇಲ್ಲಿ ಒಬ್ಬರೇ ಶಿಕ್ಷಕರಿದ್ದು 1 ರಿಂದ 7 ನೇ ತರಗತಿಯವರೆಗೂ ಒಬ್ಬರೇ ಶಿಕ್ಷಕರು ಪಾಠ ಮಾಡುತ್ತಿದ್ದು ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಎಂದು ಪೋಷಕರು ತಮ್ಮ ಮಕ್ಕಳನ್ನು ಆ ಶಾಲೆಯಿಂದ ವರ್ಗಾಯಿಸಿ ಬೇರೆ ಶಾಲೆಗೆ ಸೇರಿಸತೊಡಗಿದ್ದು ಈ ಬಾರಿ ಕೇವಲ 23 ಮಕ್ಕಳು ಮಾತ್ರ ಉಳಿದುಕೊಂಡಿದ್ದಾರೆ.
ಇಷ್ಟಾದರೂ ಶಾಲೆಗೆ ಸಮರ್ಪಕವಾಗಿ ಶಿಕ್ಷಕರ ನೇಮಕವಾಗಿಲ್ಲ. ಇದ್ದ ಓರ್ವ ಶಿಕ್ಷಕಿ ಹೆರಿಗೆ ರಜೆ ಮೇಲೆ ತೆರಳಿದ್ದು, ಸಮೀಪದ ಬೆಟ್ಟಂಪಾಡಿಯಿಂದ ಸಿಆರ್ಪಿ ಅವರು ಶಾಲೆಗೆ ತೆರಳಿ ಪಾಠ ಮಾಡುತ್ತಿದ್ದಾರೆ. ಸಜಂಕಾಡಿ ಶಾಲೆಗೆ ತೆರಳಬೇಕಾದರೆ ಪುತ್ತೂರಿನಿಂದ ಸುಮಾರು 24 ಕಿ.ಮೀ. ದೂರ ಸಾಗಬೇಕು. ಹಳ್ಳಿಯ ಒಂದು ಮೂಲೆಯಲ್ಲಿರುವ ಈ ಶಾಲೆಗೆ ಖಾಸಗಿ ವಾಹನ ಇರುವ ಶಿಕ್ಷಕರೇ ತೆರಳಬೇಕಾಗಿದೆ. ವಾಹನ ಇಲ್ಲದವರು ನಡೆದುಕೊಂಡು ಸಾಗಬೇಕು. ಇಲ್ಲಿ ಮನೆಗಳ ಸಂಖ್ಯೆಯೂ ಕಡಿಮೆ. ಸುತ್ತಲೂ ಕಾಡುಗಳಿದ್ದು, ಇದರ ನಡುವೆ ಶಾಲೆ ಇದೆ.
ಶಿಕ್ಷಕರೇ ಒಪ್ಪುತ್ತಿಲ್ಲ
ಸಜಂಕಾಡಿ ಶಾಲೆಯ ಶಿಕ್ಷಕಿ ಹೆರಿಗೆ ರಜೆಯ ಮೇಲೆ ತೆರಳಿರುವ ಕಾರಣ ಬದಲಿ ಶಿಕ್ಷಕರನ್ನು ಕಳುಹಿಸಲು ಶಿಕ್ಷಣ ಇಲಾಖೆಗೆ ಆಸಕ್ತಿ ಇದ್ದರೂ ಯಾವ ಶಿಕ್ಷಕರೂ ಅಲ್ಲಿಗೆ ತೆರಳಲು ಒಪ್ಪುತ್ತಿಲ್ಲ. ಕೌನ್ಸಿಲಿಂಗ್ನಲ್ಲಿ ಈ ಬಾರಿ ಸಜಂಕಾಡಿ ಶಾಲೆಯ ಖಾಲಿ ಹುದ್ದೆಯನ್ನು ತಿಳಿಸಲಾಗಿತ್ತು. ಆದರೆ ಯಾರೊಬ್ಬರೂ ಅಲ್ಲಿಗೆ ತೆರಳಲು ಮುಂದಾಗಿರಲಿಲ್ಲ. ಇದರಿಂದ ಅಲ್ಲಿ ಶಿಕ್ಷಕರ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳು.
ಒಂದನೆ ತರಗತಿಗೆ ಒಂದು ಮಗು
ಈ ಬಾರಿ ಒಂದನೇ ತರಗತಿಗೆ ಒಂದು ಮಗು ಮಾತ್ರ ದಾಖಲಾತಿ ಪಡೆದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಮಕ್ಕಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಒಂದನೆ ತರಗತಿಗೆ ದಾಖಲಾತಿ ನಡೆಯದೇ ಇದ್ದರೆ ಶಾಲೆ ಮುಚ್ಚುವುದಲ್ಲಿ ಯಾವುದೇ ಅನುಮಾನವಿಲ್ಲ. ಈ ಶಾಲೆ ಚೆನ್ನಾಗಿದೆ, ಆಟದ ಮೈದಾನವೂ ಇದೆ. ಮಧ್ಯಾಹ್ನ ಬಿಸಿಯೂಟವೂ ಇದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೆಕಾದ ಎಲ್ಲಾ ವ್ಯವಸ್ಥೆಗಳೂ ಇದೆ ಆದರೆ ಶಾಲೆಯಲ್ಲಿ ಶಿಕ್ಷಕರೇ ಇಲ್ಲದಿದ್ದರೆ ಎಲ್ಲವೂ ಇದ್ದು ಏನು ಪ್ರಯೋಜನ ಎಂಬ ಪ್ರಶ್ನೆ ಶಾಲಾ ಪೋಷಕರದ್ದು.
ಶಾಲೆಗೆ ಇಲಾಖೆ ಖಾಯಂ ಶಿಕ್ಷಕರನ್ನು ನೇಮಕ ಮಾಡಿದಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಬಹುದು. ಕಳೆದ ನಾಲ್ಕು ವರ್ಷಗಳಿಂದ ಒಬ್ಬರೇ ಶಿಕ್ಷಕರು ಏಳನೆ ತರಗತಿಯವರೆಗೆ ಪಾಠ ಮಾಡುತ್ತಿದ್ದರು. ಈ ಬಾರಿ ಅವರು ರಜೆಯಲ್ಲಿದ್ದಾರೆ. ಬದಲಿಗೆ ಒಬ್ಬರು ಶಿಕ್ಷಕರು ಬರುತ್ತಿದ್ದಾರೆ. ಅವರು ಸಿಆರ್ಪಿಯಾಗಿರುವ ಕಾರಣ ಅವರು ಎಷ್ಟು ದಿನ ಬರುತ್ತಾರೋ ಎಂಬುದು ನಮಗೆ ಗೊತ್ತಿಲ್ಲ. ಶಿಕ್ಷಕರನ್ನು ನೇಮಕ ಮಾಡದೇ ಇದ್ದರೆ ನಾವು ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ.
ಸುಂದರ, ಎಸ್ಡಿಎಂಸಿ ಅಧ್ಯಕ್ಷರು
ಸಜಂಕಾಡಿಯಲ್ಲಿ ಖಾಯಂ ಶಿಕ್ಷಕರಿಲ್ಲ, ಅಲ್ಲಿಗೆ ತೆರಳಲು ಯಾವ ಶಿಕ್ಷಕರೂ ಒಪ್ಪುತ್ತಿಲ್ಲ, ಎಲ್ಲರಿಗೂ ಪೇಟೆಯಲ್ಲೇ ಇರಬೇಕು, ರಸ್ತೆಯ ಬದಿಯ ಶಾಲೆಗಳೇ ನಮಗೆ ಬೇಕು ಎಂದು ಎಲ್ಲರೂ ಹೇಳಿದರೆ ಕುಗ್ರಾಮದ ಶಾಲೆಗೆ ತೆರಳಿ ಪಾಠ ಮಾಡಬೇಕಾದವರು ಯಾರು? ಈ ಬಾರಿಯ ಕೌನ್ಸಿಲಿಂಗ್ನಲ್ಲಿಯೂ ನಾನು ಕೇಳಿಕೊಂಡಿದ್ದೆ. ಆದರೆ ಯಾರೂ ಮುಂದೆ ಬರುತ್ತಿಲ್ಲ. ಸದ್ಯಕ್ಕೆ ಬದಲಿ ಶಿಕ್ಷಕರನ್ನು ಕಳುಹಿಸಲಾಗುತ್ತದೆ.
ಶಶಿಧರ್ ಜಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು.