ತಣ್ಣೀರುಪಂತ ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆ

Update: 2016-09-02 13:17 GMT

ಉಪ್ಪಿನಂಗಡಿ, ಸೆ.2: ಕರಾಯ ಗ್ರಾಮದ ತುರ್ಕಳಿಕೆಯಲ್ಲಿರುವ ಒಂದು ಎಕರೆ ಸರಕಾರಿ ಜಮೀನಿನಲ್ಲಿ ನಿವೇಶನರಹಿತ 28 ಮಂದಿಗೆ ನಿವೇಶನ ಹಂಚಲು ತಣ್ಣೀರುಪಂತ ಗ್ರಾಮ ಪಂಚಾಯತ್ ನಿರ್ಣಯ ಕೈಗೊಂಡಿದೆ.

ತಣ್ಣೀರುಪಂಥ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಅಳಕೆಯಲ್ಲಿರುವ 13 ಎಕ್ರೆ ಸರಕಾರಿ ಭೂಮಿಯಲ್ಲಿ ಮೂರು ಎಕರೆಯನ್ನು ನಿವೇಶನ ರಹಿತರಿಗಾಗಿ ಕಾಯ್ದಿರಿಸಲಾಗಿದ್ದು, ಕಂದಾಯ ಇಲಾಖೆ ಶೀಘ್ರವೇ ಸರ್ವೇ ನಡೆಸಿ ಮೂರು ಎಕರೆ ಸ್ಥಳವನ್ನು ವಿಭಾಗಿಸಿ ನೀಡುವಂತೆ ಒತ್ತಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈಗಾಗಲೇ 200ರಷ್ಟು ನಿವೇಶನರಹಿತರ ಅರ್ಜಿಗಳು ಪಂಚಾಯತ್‌ಗೆ ಬಂದಿದ್ದು, ನಿವೇಶನ ಹಂಚಿಕೆ ಸಂದರ್ಭ ಎಲ್ಲಾ ವಾರ್ಡ್‌ಗಳ ನಿವೇಶನ ರಹಿತರನ್ನು ಪರಿಗಣಿಸಿ, ಆದ್ಯತೆ ಮೇರೆಗೆ ಸಮವಾಗಿ ಹಂಚುವಂತೆ ಸದಸ್ಯರು ಈ ಸಂದರ್ಭ ಒತ್ತಾಯಿಸಿದರು.

ತಣ್ಣೀರುಪಂಥ ಗ್ರಾಮಕ್ಕೆ ಮಂಜೂರಾದ ಅಂಬೇಡ್ಕರ್ ಭವನವನ್ನು ಸಮುದಾಯ ಭವನಗಳಿಲ್ಲದ ಪಾಲೇದುವಿನಲ್ಲಿ ನಿರ್ಮಿಸುವಂತೆ ಸದಸ್ಯರಿಂದ ಒತ್ತಾಯ ಕೇಳಿ ಬಂದಾಗ, ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಪಾಲೇದುವಿನಲ್ಲಿರುವ ಸರಕಾರಿ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಇಲಾಖೆಗಳ ಒಪ್ಪಿಗೆ ಸಿಕ್ಕಿದರೆ ಅಲ್ಲಿಯೇ ಅಂಬೇಡ್ಕರ್ ಭವನ ನಿರ್ಮಿಸುವ ಕುರಿತು ನಿರ್ಧರಿಸಲಾಯಿತು.

ಕೆರೆ ಹೂಳೆತ್ತಲು ಈ ಬಾರಿಯೂ ಸರಕಾರ ಸುತ್ತೋಲೆ ಕಳುಹಿಸಿದ್ದು, ಕೆರೆಗಳ ಪಟ್ಟಿ ನೀಡುವಂತೆ ಕೇಳಿರುವ ವಿಷಯವಾಗಿ ಸಭೆಯಲ್ಲಿ ಚರ್ಚೆ ನಡೆದು, ಈ ಹಿಂದೆಯೇ ಕೆರೆಗಳ ಹೂಳೆತ್ತಲು ಗ್ರಾಮ ವ್ಯಾಪ್ತಿಯಲ್ಲಿರುವ ಕೆರೆಗಳ ಪಟ್ಟಿ ಕಳುಹಿಸಲಾಗಿದೆ. ಆದರೆ ಅನುದಾನ ಮಾತ್ರ ಬಂದಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಈ ಬಾರಿಯೂ ಕೆರೆಗಳ ಪಟ್ಟಿ ಕಳುಹಿಸಲು ನಿರ್ಧರಿಸಿದರಲ್ಲದೆ, ಈ ಪಟ್ಟಿಗೆ ಶೀಘ್ರವೇ ಮಾನ್ಯತೆ ನೀಡಿ ಅನುದಾನ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಪಂಚಾಯತ್‌ಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯ ಕೈಗೊಂಡು, ಕರಾಯದಲ್ಲಿ ಒತ್ತುವರಿಯಾಗಿರುವ ಖಾಸಗಿ ಕೆರೆಯನ್ನು ತೆರವುಗೊಳಿಸಿ ಕೊಡುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ್ ತನ್ನ ಪ್ರತಿ ತಿಂಗಳ ಗೌರವ ಧನವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡವರಿಗೆ ನೀಡಲು ತಿಳಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಗೌರವಧನವನ್ನು ಅನಾರೋಗ್ಯದಿಂದಿರುವ ವಿಧವೆ ಪುಷ್ಪಾರಿಗೆ ನೀಡಲಾಯಿತು.

ಸಭೆಯಲ್ಲಿ ತಣ್ಣೀರುಪಂಥ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಕೇಶವ ನಾಯ್ಕ, ಸದಸ್ಯರಾದ ಶಾಲೆಟ್ ವಾಸ್, ಅಯೂಬ್ ಡಿ.ಕೆ., ಆದಂ, ಸೂರಪ್ಪ ಬಂಗೇರ, ಅಬ್ದುರ್ರಹ್ಮಾನ್, ನವೀನ್ ಕುಮಾರ್, ಗೀತಾ, ಮೈಮೂನಾ, ಮಮತಾ, ಸದಾನಂದ ಶೆಟ್ಟಿ, ಗೀತಾ ಕೆ. ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಅರ್ಜಿ ವಿಲೇಗೊಳಿಸಿದರು. ಕಾರ್ಯದರ್ಶಿ ಮೋರ್ಲಿನ್ ಕ್ರಿಸ್ಟಿನ್ ಡಿಸೋಜ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News