‘ಸರಕಾರಿ ಆಸ್ಪತ್ರೆಯನ್ನು ಖಾಸಗಿ ಒಡೆತನಕ್ಕೆ ನೀಡಲೇ ಕೂಡದು’ : ಉಡುಪಿ ನಾಗರಿಕರ ಒತ್ತಾಯ

Update: 2016-09-03 14:15 GMT

ಉಡುಪಿ, ಸೆ.3: ಕಳೆದ ಸುಮಾರು ಏಳು ದಶಕಗಳಿಂದ ಜಿಲ್ಲೆಯ ಬಡವರ ಜೀವನಾಡಿಯಂತಿದ್ದು, ಬಡ ಹೆಂಗಸರ ಹೆರಿಕೆ ಹಾಗೂ ಮಕ್ಕಳ ಆರೋಗ್ಯ ರಕ್ಷಣೆಯನ್ನು ಮಾಡುತ್ತಾ ಬಂದಿರುವ ಉಡುಪಿಯ ಸರಕಾರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ಒಡೆತನಕ್ಕೆ ಬಿಟ್ಟುಕೊಡಬಾರದು ಎಂದು ಉಡುಪಿ ನಾಗರಿಕರ ಪರವಾಗಿ ಚಿಂತಕ ಪ್ರೊ.ಕೆ. ಫಣಿರಾಜ್ ಹಾಗೂ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್‌ನಲ್ಲಿ ಆ.24ರಂದು ಕಾಣಿಸಿಕೊಂಡ ಮಾಹಿತಿ ಪ್ರಕಾರ ಈಗಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೆಡವಿ ಬಿ.ಆರ್.ವೆಂಚರ್ಸ್‌ ಎಂಬ ಖಾಸಗಿ ಸಂಸ್ಥೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ನೀಡುವುದಾಗಿ ತಿಳಿಸಿತ್ತು ಎಂದು ಪ್ರೊ.ಭಂಡಾರಿ ಹೇಳಿದರು.

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸಲಹೆಯಂತೆ ಈ ವ್ಯವಹಾರವು ಬೂಟ್ (ಬಿಓಓಟಿ-ಬಿಲ್ಡ್ ವೋನ್ ಆಪರೇಟ್ ಟ್ರಾನ್ಸ್‌ಫರ್) ವ್ಯವಸ್ಥೆಯ ಮೂಲಕ 30 ವರ್ಷಗಳ ಕಾಲ ಬಿ.ಆರ್.ವೆಂಚರ್ಸ್‌ಗೆ ನೀಡಲು ಹಾಗೂ ಪ್ರಸ್ತುತ ಆಸ್ಪತ್ರೆಯ ಒಟ್ಟು 3.75 ಎಕರೆ ನಿವೇಶನಗಳನ್ನು ಖಾಸಗಿ ನಿರ್ವಹಣೆಗೆ ಸಂಪೂರ್ಣ ಒಪ್ಪಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ ಎಂದು ಪ್ರೊ.ಫಣಿರಾಜ್ ತಿಳಿಸಿದರು.

ಈ ಎಲ್ಲಾ ಮಾಹಿತಿಗಳು ಸರಕಾರಿ ಆಸ್ಪತ್ರೆಯ ಸಂಪೂರ್ಣ ಖಾಸಗೀಕರಣವನ್ನು ನಿಚ್ಚಳವಾಗಿ ಜಾಹೀರು ಪಡಿಸುತ್ತವೆ. ಕರ್ನಾಟಕದಲ್ಲಿ ಈ ಹಿಂದೆ ರಾಯಚೂರು ಮತ್ತು ಕೋಲಾರಗಳ ಸರಕಾರಿ ಜಿಲ್ಲಾಸ್ಪತ್ರೆಗಳನ್ನು ಹಾಗೂ ಸುಮಾರು 70 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿ ನಿರ್ವಹಣೆಗೆ ಸಂಪೂರ್ಣವಾಗಿ ಒಪ್ಪಿಸಲಾಗಿದ್ದು, ಈ ವ್ಯವಸ್ಥೆ ಪೂರ್ಣ ವೈಫಲ್ಯ ಕಂಡಿರುವ ಉದಾಹರಣೆ ನಮ್ಮ ಮುಂದಿದೆ ಎಂದವರು ನುಡಿದರು.

 ಉಡುಪಿಯ ಆರ್‌ಟಿಐ ಕಾರ್ಯಕರ್ತ ಯು.ಯೋಗೀಶ್ ಶೇಟ್ ಅವರು ಮಾತನಾಡಿ, ಉಡುಪಿಯ ಕೆ.ಎಂ.ಮಾರ್ಗದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಒಟ್ಟು 3.75 ಎಕರೆ ಪ್ರದೇಶದ ಮೂರು ನಿವೇಶನಗಳಲ್ಲಿವೆ. ಇದರಲ್ಲಿ ಸ್ಪಲ್ವ ಜಾಗವನ್ನು ನಿತ್ಯಾನಂದ ಮಂದಿರದ ರಸ್ತೆಗೆ, ಇನ್ನು ಸ್ವಲ್ಪ ಜಾಗವನ್ನು ಕೆಎಂ ಮಾರ್ಗ ಅಗಲೀಕರಣಕ್ಕೆ ನೀಡಲಾಗಿದೆ. ಆದರೆ ಇವ್ಯಾವುದೂ ದಾಖಲೆಗಳಲ್ಲಿ ಕಂಡುಬರುವುದಿಲ್ಲ. ಈ ಇಡೀ ಜಾಗವನ್ನು ಹಾಜಿ ಅಬ್ದುಲ್ಲಾ ಅವರು ದಾನಪತ್ರದ ಮೂಲಕ ಸರಕಾರಕ್ಕೆ ನೀಡಿದ್ದಾರೆ. ಆದರೆ ಇದರ ದಾಖಲೆಯನ್ನು ಪಡೆಯಲು ನಮ್ಮ ಪ್ರಯತ್ನ ನಡೆದಿದೆ ಎಂದರು.

ಸರಕಾರದ ಜನವಿರೋಧಿಯಾದ ಈ ನಡೆಯ ಕುರಿತು ಸಾರ್ವಜನಿಕರಲ್ಲಿ ಎಚ್ಚರಿಕೆ ಗಂಟೆ ಬಾರಿಸಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ನಾವು ಮಾಡುತಿದ್ದೇವೆ. ಈ ಕುರಿತು ಸಮಗ್ರ ಮಾಹಿತಿ ಪಡೆಯಲು ಪ್ರಯತ್ನ ನಡೆಸಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರಿಗೆ ಮನವಿ ಅರ್ಪಿಸಲಾಗುವುದು. ಈ ಬಗ್ಗೆ ಅವರನ್ನು ಭೇಟಿಯಾಗಿ ಚರ್ಚಿಸಲು ಸಹ ನಾವು ಸಿದ್ದರಿದ್ದೇವೆ ಎಂದು ಫಣಿರಾಜ್ ಹಾಗೂ ಡಾ.ಭಂಡಾರಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಶಶಿಧರ ಹೆಮ್ಮಾಡಿ, ಹುಸೇನ್ ಕೋಡಿಬೇಂಗ್ರೆ ಉಪಸ್ಥಿತರಿದ್ದರು.

ಉಡುಪಿಯ ನಾಗರಿಕರ ಕೆಲವು ಆಗ್ರಹಗಳು

 *ಉಡುಪಿಯ ನಾಗರಿಕರ ಕೆಲವು ಆಗ್ರಹಗಳು *ಯಾವುದೇ ಕಾರಣಕ್ಕೂ ಉಡುಪಿಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಯಾವುದೇ ವಿಧಾನದಲ್ಲೂ ಖಾಸಗಿ ಒಡೆತನಕ್ಕೆ ಬಿಟ್ಟು ಕೊಡಬಾರದು. ಕೆಲವು ಸರಕಾರಿ ಆಸ್ಪತ್ರೆಗಳಂತೆ ಖಾಸಗಿಯವರು ದಾನರೂಪ ದಲ್ಲಿ ವ್ಯವಸ್ಥೆಯನ್ನು ಒದಗಿಸಿಕೊಡಲು ಮುಂದಾದರೆ ಅದು ದಾನವಾಗಿರಬೇಕೇ ಹೊರತು ಒಡೆತನ ಮತ್ತು ಆಡಳಿತ ವ್ಯವಸ್ಥೆಯ ಹಸ್ತಾಂತರ ಅಥವಾ ಭಾಗೀದಾರಿಕೆಯ ವ್ಯವಹಾರವಾಗಿರಬಾರದು.

*ಈ ಆಸ್ಪತ್ರೆಯೂ ಸೇರಿದಂತೆ ಅಜ್ಜರಕಾಡಿನಲ್ಲಿ 9.26ಎಕರೆ ಪ್ರದೇಶದಲ್ಲಿ ರುವ ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸುವ್ಯವಸ್ಥಿತ ಸೇವೆ ದೊರಕುವಂತೆ ಮಾಡಿದ ಉದಾಹರಣೆಗಳಿವೆ. ಇಲ್ಲೂ ಸರಕಾರ ಈ ರೀತಿಯ ಕ್ರಮಗಳಿಗೆ ಮುಂದಾಗಬೇಕು.

*ಉಡುಪಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಗೊಳ್ಳ ಬೇಕೆಂಬುದು ಜನತೆಯ ಕನಸಾಗಿದೆ. ಅದು ಬಂದರೆ, ಈಗಿನ ಜಿಲ್ಲಾಸ್ಪತ್ರೆಯನ್ನು ಸುಸಜ್ಜಿತಗೊಳಿಸಲು ಅವಕಾಶಗಳಿವೆ. ಸರಕಾರ ಈ ಹೆಜ್ಜೆ ಇಡಬೇಕು. ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸುಭದ್ರವೂ, ಸುಸ್ಥಿರವೂ ಆಗಿರುವಂತೆ ನೋಡಿ ಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ. ಸರಕಾರ ಈ ಜವಾಬ್ದಾರಿಯನ್ನು ನಿರ್ವಹಿಸಬೇಕು ಹಾಗೂ ಖಾಸಗಿಕರಣದ ನಡೆಯನ್ನು ನಿಲ್ಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News