ಪಾಣೆಮಂಗಳೂರು: ಹೆಂಚು ತೆಗೆದು ಮನೆಯೊಳಗೆ ನುಗ್ಗಿ 46 ಪವನ್ ಚಿನ್ನ, 40 ಸಾವಿರ ರೂ. ದೋಚಿದ ಕಳ್ಳರು

Update: 2016-09-04 13:56 GMT

ಬಂಟ್ವಾಳ, ಆ. 4: ಪಾಣೆಮಂಗಳೂರಿನ ಗುಡ್ಡೆಯಂಗಡಿ ಎಂಬಲ್ಲಿ ಮನೆಯೊಂದರ ಹಿಂಭಾಗದ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಗದನ್ನು ದೋಚಿ ಪರಾರಿಯಾಗಿರುವ ಘಟನೆ ರವಿವಾರ ಸಂಜೆ ಬೆಳಕಿಗೆ ಬಂದಿದೆ.

ಇಲ್ಲಿನ ನಿವಾಸಿ ಬೀಡಿ ಉದ್ಯಮಿ ಇಸ್ಮಾಯೀಲ್ ಎಂಬವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ. ಮನೆ ಮಂದಿ ಶನಿವಾರ ಮನೆಗೆ ಬೀಗ ಹಾಕಿ ತೌಡುಗೋಳಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ರವಿವಾರ ಸಂಜೆ ಮನೆಗೆ ವಾಪಸ್ ಬಂದಾಗ ಈ ಕಳವು ಪ್ರಕರಣ ಬಯಲಿಗೆ ಬಂದಿದೆ.

ಸಂಬಂಧಿಕರ ಮನೆಗೆ ತೆರಳಿದ ಸಂದರ್ಭದಲ್ಲಿ ಕಪಾಟಿನ ಬೀಗವನ್ನು ಬೆಡ್‌ನ ಅಡಿ ಭಾಗದಲ್ಲಿ ಇರಿಸಿದ್ದರು. ಕಳ್ಳರು ಮನೆ ಹಿಂಭಾಗದಲ್ಲಿ ಹೆಂಚನ್ನು ತೆಗೆದು ಒಳ ನುಗ್ಗಿ ಕಪಾಟಿನ ಬೀಗವನ್ನು ಬೆಡ್ಡಿನಡಿಯಿಂದ ತೆಗೆದು ಕಪಾಟಿನಿಂದ ನಗ-ನಗದನ್ನು ದೋಚಿದ್ದಾರೆ. ಇದರಲ್ಲಿಟ್ಟಿದ್ದ ಸುಮಾರು 46 ಪವನ್ ಚಿನ್ನಾಭರಣ ಹಾಗೂ 40 ಸಾವಿರ ರೂಪಾಯಿ ನಗದನ್ನು ಕಳವುಗೈದು ಪರಾರಿಯಾಗಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ಇಸ್ಮಾಯೀಲ್ ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಪರಾಧ ವಿಭಾಗದ ಎಸ್ಸೈ ಗಂಗಾಧರಯ್ಯ ಮತ್ತವರ ತಂಡ ಪರಿಶೀಲನೆ ನಡೆಸಿತು. ಡಿವೈಎಸ್ಪಿ ರವೀಶ್ ಸಿ.ಆರ್., ಸಿಐ ಮಂಜಯ್ಯ ಬಿ.ಕೆ. ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಯಿತು. ಸ್ಥಳೀಯರು ಈ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News