ಸಿದ್ಧಕಟ್ಟೆಯಲ್ಲಿ ಜುಗಾರಿ ಅಡ್ಡೆಗೆ ದಾಳಿ: ನಾಲ್ವರ ಬಂಧನ
Update: 2016-09-06 18:40 IST
ಬಂಟ್ವಾಳ, ಸೆ.6: ತಾಲೂಕಿನ ಸಿದ್ಧಕಟ್ಟೆಯ ಕರ್ಪೆ ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಡಿಸಿಐಬಿ ಪೊಲೀಸರು ಜುಗಾರಿಯಲ್ಲಿ ತೊಡಗಿದ್ದ 4 ಮಂದಿಯನ್ನು ಬಂಧಿಸಿ ನಗದು, ಮೊಬೈಲ್ ಫೋನ್, ವಾಹನಗಳನ್ನು ವಶಪಡಿಸಿಕೊಂಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ.
ಕರ್ಪೆಯಲ್ಲಿ ಜುಗಾರಿ ಆಟ ನಡೆಯುತ್ತಿದ್ದ ಬಗ್ಗೆ ಖಚಿತ ವರ್ತಮಾನ ಲಭಿಸಿದ ಮೇರೆಗೆ ದಾಳಿ ನಡೆಸಿ ಪೊಲೀಸರು ಜುಗಾರಿಯಲ್ಲಿ ತೊಡಗಿದ್ದ 4 ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೆ 5 ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆಟಕ್ಕೆ ಬಳಸಿದ್ದ 6,600 ರೂಪಾಯಿ ನಗದು ಹಾಗೂ ಸ್ಥಳದಲ್ಲಿದ್ದ 1 ಕಾರು, 1 ಆಟೊ ರಿಕ್ಷಾ, 3 ಬೈಕ್, 4 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿಸಿಐಬಿ ಎಸ್ಸೈ ಅಮಾನುಲ್ಲಾ ಖಾನ್ ಮತ್ತು ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ಎ.ಕೆ.ರಕ್ಷಿತ್ ಗೌಡ ಹಾಗೂ ಅವರ ಸಿಬ್ಬಂದಿ ಬಾಗವಹಿಸಿದ್ದರು.