ಹಿಂದಿ ಪ್ರಚಾರ ಸಮಿತಿಗೆ 70ರ ಸಂಭ್ರಮ: ವಿವಿಧ ಸ್ಪರ್ಧೆ
ಮಂಗಳೂರು, ಸೆ.7: ರಾಷ್ಟ್ರ ಭಾಷೆ ಹಿಂದಿಯನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಆರಂಭವಾದ ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ 70 ವರ್ಷಗಳನ್ನು ಪೂರೈಸುತ್ತಿದ್ದು, ಇದರ ಅಂಗವಾಗಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಸೆ. 10ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಮಿತಿಯ ಅಧ್ಯಕ್ಷ ಕೆ. ರಾಮಮೋಹನ ರಾವ್, ಲಾಲ್ಬಾಗ್ನಲ್ಲಿರುವ ಹಿಂದಿ ಪ್ರಚಾರ ಸಮಿತಿಯ ಕಟ್ಟಡದಲ್ಲಿ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಂಜೆ 3.30ಕ್ಕೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯುವುದು. ಕರ್ನಾಟಕ ಬ್ಯಾಂಕ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ ದೇಶಪಾಂಡೆ ಉದ್ಘಾಟನೆ ನೆರವೇರಿಸುವರು. ಹಿಂದಿ ಭಾಷಾ ಶಿಕ್ಷಕರಿಗಾಗಿ ರಾಷ್ಟ್ರ ಮಟ್ಟದ ವಿಚಾರಗೋಷ್ಠಿ ಸೆ. 25 ಮತ್ತು 26ರಂದು ಆಯೋಜಿಸಲಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಗೋಷ್ಠಿಯಲ್ಲಿ ಸೀತಾರಾಮ್, ಡಾ. ಮುರಳೀಧರ, ರಾಮಕೃಷ್ಣ, ಶ್ರೀಧರ ಭಟ್, ಜನಾರ್ದನ ಆಚಾರ್ ಉಪಸ್ಥಿತರಿದ್ದರು.