×
Ad

ಬಯಲುಸೀಮೆ, ಕರಾವಳಿಯ ರೈತರು ಸೇರಿ ಎತ್ತಿನಹೊಳೆಯನ್ನು ವಿರೋಧಿಸಬೇಕು: ಆರ್.ಆಂಜನೇಯ ರೆಡ್ಡಿ

Update: 2016-09-15 23:34 IST

ಉಪ್ಪಿನಂಗಡಿ, ಸೆ.15: ಎತ್ತಿನ ಹೊಳೆ ಯೋಜನೆ ದೂರದೃಷ್ಠಿ, ಮುಂದಾಲೋಚನೆ ಇಲ್ಲದ ಯೋಜನೆ ಮತ್ತು ತಾಂತ್ರಿಕ ದೋಷಗಳಿಂದ ಕೂಡಿದ ಯೋಜನೆ ಆಗಿದ್ದು, ಮುಂದಿನ ದಿನಗಳಲ್ಲಿ ಇದರಿಂದಾಗಿ ಬಯಲು ಸೀಮೆ ಮತ್ತು ಕರಾವಳಿ ಭಾಗದ ಜನರ ಮಧ್ಯೆ ಸಂಘರ್ಷ ನಡೆದೀತು. ಕರಾವಳಿ ಜಿಲ್ಲೆಗಳನ್ನು ಬರಡುಗೊಳಿಸಿ ಕೊಡುವ ನೀರು ನಮಗೆ ಬೇಡ. ಎಲ್ಲರೂ ಒಗ್ಗೂಡಿ ಇಂತಹ ಅವೈಜ್ಞಾನಿಕ ಯೋಜನೆಯನ್ನು ವಿರೋಧಿಸುವ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಬಯಲು ಸೀಮೆ ಚಿಕ್ಕಬಳ್ಳಾಪುರದ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ತಿಳಿಸಿದ್ದಾರೆ.

ಅವರು ಸೆ.15ರಂದು ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ತಿರುವು ಯೋಜನೆಯ ವಿರೋಧಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ‘ನೇತ್ರಾವತಿ (ಎತ್ತಿನ ಹೊಳೆ) ನದಿ ತಿರುವು ಯೋಜನೆ-ಒಂದು ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 20 ವರ್ಷಗಳಿಂದ ಬಯಲುಸೀಮೆಯಲ್ಲಿ ಬರ ಇದೆ, ಕೃಷಿ ಇಲ್ಲದೆ ಕಷ್ಟ ಅನುಭವಿಸುವಂತಾಗಿದೆ. ಜಾನುವಾರುಗಳನ್ನು ಕಸಾಯಿಖಾನೆಗೆ ಅಟ್ಟುವಂತಾಗಿದೆ. 500 ಅಡಿ ಬೋರ್‌ವೆಲ್ ತೋಡಿದರೂ ನೀರು ಇಲ್ಲದಂತಾಗಿದೆ, ಯಾರ ಕಲ್ಪನೆಗೂ ನಿಲುಕದ ಕಷ್ಟಗಳು ಅಲ್ಲಿ ಇದೆ, ಅಲ್ಲಿಗೆ ನೀರು ಕೊಡುವ ಕೆಲಸವನ್ನು ಸರಕಾರ ಮಾಡಬೇಕು. ಆದರೆ ಅವೈಜ್ಞಾನಿಕವಾದ, ತಾಂತ್ರಿಕ ದೋಷಗಳಿಂದ ಕೂಡಿದ ಯೋಜನೆ ರೂಪಿಸಿ ನೀರು ಕೊಡಲು ಹೊರಟರೆ ಬಯಲುಸೀಮೆಗೂ ಅನುಕೂಲ ಆಗದೆ, ಇತ್ತ ಕರಾವಳಿ ಮಂದಿಗೂ ಅನ್ಯಾಯವಾದಂತಾಗುತ್ತದೆ ಎಂದರು.

ಬೆಂಗಳೂರು ಗ್ರಾಮಾಂತರ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಮಳ್ಳೂರು ಶಿವಣ್ಣ ಮಾತನಾಡಿ, ಕೆಪಿಟಿಸಿಎಲ್‌ನವರು ಗುಂಡ್ಯ ಜಲವಿದ್ಯುತ್ ಯೋಜನೆಗಾಗಿ ಮಾಡಿದ ಅಧ್ಯಯನ ವರದಿಯ ಯಥಾ ಪ್ರತಿಯನ್ನೇ ತೆಗೆದುಕೊಂಡು ಎತ್ತಿನಹೊಳೆ ಯೋಜನೆ ರೂಪಿಸಲಾಗಿದೆ. ಕರಾವಳಿ ಭಾಗದ ಜನರ ಭಾವನೆ, ಇಲ್ಲಿನ ಪರಿಸರಕ್ಕೆ ಧಕ್ಕೆ ಹಾಗೂ ಇಲ್ಲಿ ಸಾಮಾಜಿಕ ಏರುಪೇರು ಆಗದ ರೀತಿಯಲ್ಲಿ ಇಲ್ಲಿರುವ ಹೆಚ್ಚುವರಿ ನೀರನ್ನು ಕೊಡಿ ಎಂಬುದಷ್ಟೇ ಬಯಲುಸೀಮೆ ಜನರ ಆಗ್ರಹ. ಆದರೆ, ಈಗ ರೂಪಿಸಿರುವ ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಹಾನಿಯಾಗಲಿದ್ದು, ಕರಾವಳಿ ತೊಂದರೆಗೆ ಸಿಲುಕಲಿದೆ. ಅಲ್ಲದೇ, ಈ ಯೋಜನೆಯಿಂದ ಬಯಲು ಸೀಮೆಗೆ ನೀರು ತಲುಪಲು ಸಾಧ್ಯವೇ ಇಲ್ಲ. ಆದ್ದರಿಂದ ಇದನ್ನು ಎಲ್ಲರೂ ಒಟ್ಟಾಗಿ ವಿರೋಧಿಸಬೇಕು ಎಂದರು.

ಪಶ್ಚಿಮಘಟ್ಟ ಸಂರಕ್ಷಣಾ ಹೋರಾಟ ವೇದಿಕೆ ಬೆಂಗಳೂರು ಇದರ ಸಂಚಾಲಕ ಕೆ.ಎನ್. ಸೋಮಶೇಖರ ಮಾತನಾಡಿ, ಪಶ್ಚಿಮಘಟ್ಟದ ಜೀವ ವೈವಿಧ್ಯತೆಯನ್ನು ನಾವು ಉಳಿಸಿಕೊಳ್ಳದಿದ್ದರೆ ನಮ್ಮ ನದಿಗಳನ್ನು ನಾವೇ ಕತ್ತು ಹಿಸುಕಿ ಸಾಯಿಸಿದಂತಾಗುತ್ತದೆ. ಸರಕಾರ ತಿಳಿಸಿರುವಂತೆ ಎತ್ತಿಹೊಳೆಯಿಂದ 40ರಿಂದ 50 ಗಂಟೆಂುಲ್ಲಿ 24 ಟಿಎಂಸಿ ನೀರು ತೆಗೆಯಲು ಸಾಧ್ಯ ಇಲ್ಲ ಎಂದ ಅವರು ನೇತ್ರಾವತಿ ನದಿ ಪ್ರಾಧಿಕಾರ ಆಗಬೇಕು ಎಂದ ಅವರು ನೀರಿನ ಲ್ಯತೆ ಎಲ್ಲಿ ಇದೆ ಎಂದು ಸರ್ಕಾರಕ್ಕೆ ಗೊತ್ತಿದೆ, ಆದರೂ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ, ನೀರಾವರಿ ಯೋಜನೆ ಬಗ್ಗೆ ಕನಿಷ್ಠ ಮಾಹಿತಿ ಇಲ್ಲದ ನೀರಾವರಿ ಸಚಿವರಿಂದಾಗಿ ಈ ಯೋಜನೆಯಲ್ಲಿ ಈ ರೀತಿಯ ಗೊಂದಲ ಇರುವುದಾಗಿ ಅವರು ತಿಳಿಸಿದರು.

ಬಳಿಕ ಸಂವಾದ ಕಾರ್ಯಕ್ರಮ ನಡೆದು, ಎತ್ತಿನಹೊಳೆ ಯೋಜನೆಯ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದು. ಕರಾವಳಿ ಭಾಗ ಹಾಗೂ ಬಯಲುಸೀಮೆ ಭಾಗದ ಜನತೆ ಒಟ್ಟು ಸೇರಿ ಈ ಯೋಜನೆಯ ವಿರುದ್ಧ ಐಕ್ಯತೆಯ ಹೋರಾಟ ನಡೆಸುವುದು. ಜಾತಿ, ಧರ್ಮ, ಪ್ರಾಂತ್ಯ, ಪಕ್ಷ ಬೇಧಗಳನ್ನು ಮೀರಿ ಕರಾವಳಿ ಹಾಗೂ ಬಯಲುಸೀಮೆ ಬಾಗದ ಸರ್ವಧರ್ಮ ಧಾರ್ಮಿಕ ಗುರುಗಳು, ಎಲ್ಲಾ ಸಂಘಟನೆಗಳು, ಜನರು ಒಗ್ಗೂಡಿ ಸಂವಾದ ನಡೆಸಿ, ಈ ಯೋಜನೆಯ ಬಗ್ಗೆ ಇರುವ ಗೊಂದಲ ನಿವಾರಣೆಗೊಳಿಸುವುದು. ಬಯಲು ಸೀಮೆಯ ಜನರಿಗೆ ಕುಡಿಯಲು ಹಾಗೂ ಕೃಷಿಗಾಗಿ ಕರ್ನಾಟಕ ಯಾವುದೇ ಬಾಗದ ಹೆಚ್ಚುವರಿ ನೀರನ್ನು ವೈಜ್ಞಾನಿಕ ಯೋಜನೆ ರೂಪಿಸಿ ಬಯಲು ಸೀಮೆಗೆ ನೀಡುವ ಯೋಜನೆ ಸರಕಾರ ರೂಪಿಸಿದರೆ ಅದನ್ನು ಕರಾವಳಿ ಬಾಗದ ಜನತೆ ಬೆಂಬಲಿಸುವುದು ಸೇರಿದಂತೆ ಕೆಲವು ಮಹತ್ವದನಿರ್ಣಯಗಳನ್ನು ಕೈಗೊಳ್ಳಲಾಯಿತು ಸೇರಿದಂತೆ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್, ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಡಾ. ನಿರಂಜನ್ ರೈ ಉಪಸ್ಥಿತರಿದ್ದರು. ಒಡಿಂುೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ವಂ.ಪಾ.ರೋನಾಲ್ಡ್ ಪಿಂಟೋ, ಧರ್ಮಗುರು ಮುಹಮ್ಮದ್ ಹನೀಪ್ ದಾರಿಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮೀನುಗಾರರ ಮುಖಂಡ ರಾಮಚಂದ್ರ ಬೈಕಂಪಾಡಿ, ನೇತ್ರಾವತಿ ರಕ್ಷಣಾ ಸಮಿತಿಯ ಸಂಚಾಲಕ ದಿನಕರ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜೆಪ್ಪು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಧರ್ನಪ್ಪ ಮೂಲ್ಯ, ಶೇಖರ ಜಿ., ಪ್ರಮುಖರಾದ ನಝೀರ್ ಮಠ, ಸುರೇಶ್ ಅತ್ರಮಜಲು, ಯು.ಜಿ.ರಾಧಾ, ಕೈಲಾರ್ ರಾಜ್‌ಗೋಪಾಲ್ , ಪ್ರಶಾಂತ್ ಡಿಕೋಸ್ಟ, ಇರ್ಷಾದ್ ಯು.ಟಿ., ಸುನೀಲ್ ದಡ್ಡು, ಅನೂಪ್ ಸಿಂಗ್, ಆನಂದ ರಾಮಕುಂಜ, ಜಯಂತ ಪೊರೋಳಿ, ಧನ್ಯಕುಮಾರ್ ರೈ, ಕಂಗ್ವೆ ವಿಶ್ವನಾಥ ಶೆಟ್ಟಿ, ವಿಜಯಕುಮಾರ್ ಕಲ್ಲಳಿಕೆ, ಶ್ರೀಶಕುಮಾರ್, ಅಜೀರ್ ಬಸ್ತಿಕಾರ್, ಡಾ.ರಾಜಾರಾವ್ ಕೆ.ಬಿ., ಮನೋಹರ ರೈ, ಝಕಾರಿಯ ಕೊಡಿಪ್ಪಾಡಿ, ಜಿತೇಂದ್ರ, ಅಝೀರ್ ನಿನ್ನಿಕಲ್ಲು, ವಿನ್ಸೆಂಟ್ ಪೆರ್ನಾಂಡೀಸ್, ಜಯಪ್ರಕಾಶ್ ಶೆಟ್ಟಿ, ರವೀಂದ್ರ ಕೊಲ, ಮುನೀರ್ ದಾವೂದ್ ಮತ್ತಿತರರು ಉಪಸ್ಥಿತರಿದ್ದು, ಸಂವಾದದಲ್ಲಿ ಭಾಗವಹಿಸಿದರು.

ಡಾ. ನಿರಂಜನ್ ರೈ ಸ್ವಾಗತಿಸಿದರು. ಲೊಕೇಶ್ ಬೆತ್ತೋಡಿ ವಂದಿಸಿದರು. ಅಬ್ದುರ್ರಹ್ಮಾನ್ ಯುನಿಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News