ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಮನಪಾ ಆಡಳಿತ ವಿಫಲ: ರೂಪಾ ಡಿ. ಬಂಗೇರ
ಮಂಗಳೂರು, ಸೆ.16: ತ್ಯಾಜ್ಯ ವಿಲೇವಾರಿ ಮಾಡುವ ವಿಚಾರದಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಆಡಳಿತ ವಿಫಲವಾಗಿದೆ. ಕಸ ವಿಲೇವಾರಿ ಮಾಡುವ ಆ್ಯಂಟನಿ ವೇಸ್ಟ್ ಕಂಪೆನಿ ಟೆಂಡರ್ ಪ್ರಕಾರ ಕಾರ್ಯನಿರ್ವಹಿಸುತ್ತಿಲ್ಲ. ಆಡಳಿತ ಗುತ್ತಿಗೆದಾರರ ಕೈಗೊಂಬೆಯಾಗಿದೆ ಎಂದು ಮಂಗಳೂರು ಮನಪಾ ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಆರೋಪಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರನ್ನು ಸ್ವಚ್ಛ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಂಗಳೂರು ಮನಪಾ ವಿಫಲವಾಗಿದೆ. ಮಂಗಳೂರು ನಗರವನ್ನು ಸ್ವಚ್ಛಗೊಳಿಸಲು ಯಾವುದೇ ಕಾರ್ಯ ಯೋಜನೆಯನ್ನು ರೂಪಿಸಿಲ್ಲ. ಮನಪಾ ಆಡಳಿತವು ಸ್ವಚ್ಛ ಮಂಗಳೂರು ಎಂಬ ಘೋಷಣೆ, ಸಭೆ ನಡೆಸುತ್ತಿದ್ದು ಯಾವುದೇ ಕಾರ್ಯ ಯೋಜನೆ ರೂಪಿಸಿಲ್ಲ. ಈಗ ಇರುವ ನಗರದ ಶೌಚಾಲಯಗಳನ್ನು ದುರಸ್ತಿಗೊಳಿಸಿಲ್ಲ. ಇದೀಗ ಹೊಸ 37 ಶೌಚಾಲಯ ನಿರ್ಮಾಣ ಮಾಡಲು ಹೊರಟಿದ್ದಾರೆ. ಹೊಸ ಶೌಚಾಲಯ ನಿರ್ಮಾಣದ ಬದಲು ಹಳೆಯ ಶೌಚಾಲಯಗಳನ್ನು ದುರಸಿಗೊಳಿಸಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬ್ರಿಜೇಶ್ ಚೌಟ, ವೇದವ್ಯಾಸ ಕಾಮತ್, ಪ್ರೇಮನಂದ ಶೆಟ್ಟಿ ಉಪಸ್ಥಿತರಿದ್ದರು.