×
Ad

ಸಾಮಾಜಿಕ ಬದಲಾವಣೆಯ ಮಹಾಸಂತ ನಾರಾಯಣಗುರು: ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್

Update: 2016-09-16 22:06 IST

 ಶಿವಮೊಗ್ಗ, ಸೆ.16: ಧಾರ್ಮಿಕ ಮತ್ತು ಸಾಮಾಜಿಕ ಬದಲಾವಣೆಯ ಮಹಾಸಂತ ಬ್ರಹ್ಮಶ್ರೀ ನಾರಾಯಣ ಗುರು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ತೀವ್ರ ಅಸಮಾನತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಹಿಂದುಳಿದ ಸಮುದಾಯದ ಜನರು ಸ್ವಾಭಿಮಾನದಿಂದ ಬದುಕಬೇಕು ಎಂದು ಹೇಳುವ ಮೂಲಕ ಸಾಮಾಜಿಕ ಸಮಾನತೆ ಕ್ರಾಂತಿ ಮಾಡಿದ ಮಹಾಸಂತ ನಾರಾಯಣಗುರು ಎಂದು ಹೇಳಿದರು.

ಕೇವಲ ಧಾರ್ಮಿಕವಾಗಿ ಅಲ್ಲದೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ಶೋಷಿತ ಸಮಾಜ ಮುಂದೆ ಬರಲು ಸಾಧ್ಯ ಎಂದು ಪ್ರತಿಪಾದಿಸಿ ಮಾರ್ಗದರ್ಶನ ನೀಡಿದ ದಾರ್ಶನಿಕರನ್ನು ಕೇವಲ ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಇವರನ್ನು ಇಡೀ ಸಮಾಜದ ಆಸ್ತಿಯಾಗಿಸಬೇಕು ಎಂದರು.

ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾರಾಯಣ ಗುರುಗಳನ್ನು ಸಮಾಜಕ್ಕೆ ಹೆಚ್ಚು ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಪ್ರಾಥಮಿಕ ಶಿಕ್ಷಣದ ಪಠ್ಯದಲ್ಲಿ ಅಳವಡಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು, ಅಲ್ಲದೆ, ನಾರಾಯಣಗುರುಗಳ ವಿಚಾರಧಾರೆಗಳನ್ನು ಪುಸ್ತಕ ರೂಪದಲ್ಲಿ ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ಸಮಾಜ ಸುಧಾರಣೆಯ ಹರಿಕಾರ ನಾರಾಯಣಗುರು ಅವರ ಜಯಂತಿಯನ್ನು ಸರಕಾರದ ವತಿಯಿಂದಲೇ ಆಚರಿಸುವ ನಿರ್ಧಾರ ತೆಗೆದುಕೊಂಡು ಕರ್ನಾಟಕ ಸರಕಾರದ ತೀರ್ಮಾನ ಶ್ಲಾಘನೀಯ ಎಂದರು.

ವಿಶೇಷ ಉಪನ್ಯಾಸ ನೀಡಿದ ನೆಕಿದಪುನಿ ಗೋಪಾಲಕೃಷ್ಣ, ಜಗತ್ತಿನ ಕ್ಲಿಷ್ಟಕರ ಸಂಕಷ್ಟಗಳಿಗೆ ನಾರಾಯಣ ಗುರುಗಳ ವಿಚಾರಧಾರೆಗಳು ಪರಿಹಾರ ಸೂಚಿಸುತ್ತವೆ. ಆದ್ದರಿಂದ ನಾರಾಯಣ ಗುರುಗಳನ್ನು ಒಂದು ಸಮುದಾಯದ ಚೌಕಟ್ಟಿನಲ್ಲೇ ಬಂಧಿಸುವುದು ಸೂಕ್ತವಲ್ಲ ಎಂದರು.

ಮಂಗಳೂರು ವಿವಿಯಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪಿಸಲಾಗಿದೆ. ಅಂತೆಯೇ ಶಿವಮೊಗ್ಗದ ಕುವೆಂಪು ವಿವಿಯಲ್ಲೂ ಅಧ್ಯಯನ ಪೀಠ ಸ್ಥಾಪಿಸಿ ಸಮಾನತೆಯನ್ನು ಸಾರಿದ ಗುರುಗಳ ವಿಚಾರಧಾರೆಗಳ ಬಗ್ಗೆ ಹೆಚ್ಚು ಜನರ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಬೇಕೆಂದರು.

ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಜಿಪಂ ಸದಸ್ಯರಾದ ಆರ್.ಸಿ.ಮಂಜುನಾಥ್, ಎಂ.ಸಿ.ನಾಗರಾಜ್, ರಾಜಶೇಖರ್, ವೀರಭದ್ರಪ್ಪ ಪೂಜಾರ್, ಮಾಜಿ ಶಾಸಕ ಜೆ.ಡಿ.ನಾರಾಯಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ವೆ.ನಾಯಕ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News