ಕಾಸರಗೋಡು: ಪ್ರೇಯಸಿಯ ಸಾವಿನ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಯುವಕ

Update: 2016-09-19 09:56 GMT

ಕಾಸರಗೋಡು, ಸೆ.19: ವಿಷ ಸೇವಿಸಿ ತನ್ನ ಪ್ರೇಯಸಿ ಮೃತಪಟ್ಟ ಸುದ್ದಿ ತಿಳಿದು ಆಕೆಯ  ಪ್ರಿಯಕರ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪರಪ್ಪದಲ್ಲಿ  ನಡೆದಿದೆ.

ಆತ್ಮಹತ್ಯೆಗೆ ಶರಣಾದವರನ್ನು ಪರಪ್ಪನೆಲ್ಲಿಯರ ಕಾಲನಿಯ ನಂದ ಕುಮಾರ್ (19) ಮತ್ತು  ರಾಧಿಕಾ ( 15) ಎಂದು ಗುರುತಿಸಲಾಗಿದೆ. ನಂದಕುಮಾರ್  ಕೂಲಿ ಕಾರ್ಮಿಕನಾಗಿದ್ದು, ರಾಧಿಕಾ 10ನೆ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.

ಇವರಿಬ್ಬರು ಕಳೆದ ಕೆಲ ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಒಂದು ವಾರದ ಹಿಂದೆ ಇವರಿಬ್ಬರೂ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ  ಮನೆಯ ಸಮೀಪದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದರು. ಸ್ಥಳೀಯರು ಗಮನಿಸಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ರಾಧಿಕಾ ಳನ್ನು  ಪರಿಯಾರಂ  ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ನಂದಕುಮಾರ್ ನನ್ನು  ಕಾಞ೦ಗಾಡ್  ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಎರಡು ದಿನದ ಚಿಕಿತ್ಸೆ  ಬಳಿಕ  ಗುಣಮುಖನಾಗಿ ನಂದಕುಮಾರ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ.  ಆದರೆ ರಾಧಿಕಾಳ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಈ ನಡುವೆ ಚಿಕಿತ್ಸೆಗೆ ಸ್ಪಂದಿಸದೆ  ರವಿವಾರ ರಾತ್ರಿ  ರಾಧಿಕಾ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ರಾಧಿಕಾಳ ಸಾವಿನ ಸುದ್ದಿ ತಿಳಿಯುತ್ತಲೇ  ಮನೆಯಿಂದ ತೆರಳಿದ್ದ ನಂದ ಕುಮಾರ್ ಮನೆಯಿಂದ  ನಾಪತ್ತೆಯಾಗಿದ್ದ. ಈ ನಡುವೆ ಮನೆಯವರು ಶೋಧ ನಡೆಸಿದಾಗ  ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಇಬ್ಬರು ಕೆಲ ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ಏನೆಂಬುದು ಸ್ಪಷ್ಟಗೊಂಡಿಲ್ಲ. ವೆಳ್ಳರಿಕುಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News