ಉಳ್ಳಾಲ: ಮೀನುಗಾರಿಕಾ ಬೋಟ್ ಮುಳುಗಡೆ; ಓರ್ವ ನಾಪತ್ತೆ

Update: 2016-09-20 13:45 GMT

ಉಳ್ಳಾಲ, ಸೆ.20: ಉಳ್ಳಾಲ ಕೋಟೆಪುರ ಸಮೀಪದ ಅಳಿವೆಬಾಗಿಲಿನಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮೀನುಗಾರಿಕೆ ನಡೆಸಿ ಸೋಮವಾರ ರಾತ್ರಿ ಹಿಂದಿರುಗುವಾಗ ಬ್ರೇಕ್ ವಾಟರ್ ಕಾಮಗಾರಿಗೆಂದು ಹಾಕಲಾದ ಕಲ್ಲುಬಂಡೆಗಳಿಗೆ ಢಿಕ್ಕಿ ಹೊಡೆದು ಓರ್ವ ಸಮುದ್ರಪಾಲಾಗಿ, ಐವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಸಮುದ್ರ ಪಾಲಾದ ವ್ಯಕ್ತಿಯನ್ನು ದೋಣಿ ಚಾಲಕ ಕುಮಟಾ ತಾಲೂಕಿನ ಬರ್ಗಿ ಗ್ರಾಮದ ಹಸನ್ ಖ್ವಾಝಾ ಎಂಬವರ ಪುತ್ರ ಹಮೀದ್(40) ಎಂದು ಗುರುತಿಸಲಾಗಿದೆ. ಕುಮಟಾ ತಾಲೂಕಿನ ಕಾಗಲ್ ಗ್ರಾಮದ ಸಮೀರ್ ಇಸ್ಮಾಯಿಲ್ ವಡೇಕರ್(30)ಮತ್ತು ರಹೀಂ ಇಸಾಕ್ ವಡೇಕರ್(30)ಕುಮಟಾ ತಾಲೂಕು ಬರ್ಗಿ ಗ್ರಾಮದ ಅಬ್ದುಲ್ಲ ಇಸ್ಮಾಯಿಲ್(42)ಛತ್ತೀಸ್ ಘಡದ ಜಸ್‌ಪುರ್‌ನಗರ, ಪರದ್ ಬಾಹರ್ ಗ್ರಾಮದ ರಿಶಿಕುಮಾರ್(30)ಮತ್ತು ಭುವನ್ ಕುಮಾರ್(26)ರವರು ಈಜಿಕೊಂಡು ದಡ ಸೇರಿ ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಅಬ್ಬೂಬಕ್ಕರ್ ಅಶ್ರಫ್ ಮಾಲಕತ್ವದ ಫಾತಿಮಾ ಹೆಸರಿನ ದೋಣಿ(ಐಎನ್‌ಡಿ-ಕೆಎ-01-ಎವ್ಎವ್84)ಯು ಮಂಗಳೂರು ಕಸಬ ಬೆಂಗ್ರೆಯಿಂದ ಶುಕ್ರವಾರ ರಾತ್ರಿ ಆಳ ಸಮುದ್ರದ ಮೀನುಗಾರಿಕೆಗೆಂದು ತೆರಳಿತ್ತು. ಸೋಮವಾರ ರಾತ್ರಿ ಉಳ್ಳಾಲ ಕೋಟೆಪುರದ ಅಳಿವೆಬಾಗಿಲು ಮಾರ್ಗವಾಗಿ ಮಂಗಳೂರು ಧಕ್ಕೆಗೆ ಹಿಂತಿರುಗುತ್ತಿದ್ದ ವೇಳೆ ಬ್ರೇಕ್ ವಾಟರ್‌ಗೆ ಹಾಕಲಾದ ಕಲ್ಲುಬಂಡೆಗಳಿಗೆ ಢಿಕ್ಕಿ ಹೊಡೆದು ಕಲ್ಲುಗಳ ನಡುವೆ ಹಡಗು ಸಿಲುಕಿದನ್ನು ಕಂಡು ಗಾಬರಿಗೊಂಡ ಮೀನುಗಾರರು ಜೀವರಕ್ಷಣೆಗಾಗಿ ಸಮುದ್ರದ ನೀರಿಗೆ ಧುಮುಕಿದ್ದರು. ಈ ಸಂದರ್ಭದಲ್ಲಿ ಹಮೀದ್ ನೀರು ಪಾಲಾದರೆ,ಉಳಿದ ಐವರು ಮೀನುಗಾರರು ಸಮುದ್ರದಲ್ಲಿ ಈಜಿ ದಡ ಸೇರಿ ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ.

ದೋಣಿ ಅವಘಡದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ರವಾನಿಸಿದರೂ ಮಧ್ಯರಾತ್ರಿಯಾದರೂ ಯಾರೊಬ್ಬರೂ ಸ್ಥಳಕ್ಕೆ ಆಗಮಿಸದೆ ನೌಕಾ ಪಡೆಯ ಹಡಗಿನಿಂದಲೇ ಮೈಲುಗಟ್ಟಲೆ ದೂರದಿಂದ ಟಾರ್ಚ್ ಲೈಟ್ ಹೊಡೆಯುತ್ತಿರುವುದು ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ಸ್ಥಳೀಯ ಮೀನುಗಾರರ ಅಸಮಾಧಾನಕ್ಕೆ ಕಾರಣವಾಯಿತು.

ನಾಪತ್ತೆಯಾಗಿರುವ ಹಮೀದ್ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ದುರಂತಕ್ಕೀಡಾದ ಹಡಗು ಮಂಗಳವಾರ ಸಂಜೆ ವೇಳೆಗೆ ನೀರಿನಲ್ಲಿ ಮುಳುಗಿ ಹೋಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಳಿವೆಬಾಗಿಲಲ್ಲಿ ಅಪಾಯಕಾರಿ ಕಲ್ಲುಬಂಡೆಗಳು ಅಳಿವೆಬಾಗಿಲಿನ ಸಮುದ್ರದ ಮಧ್ಯೆ ಬ್ರೇಕ್ ವಾಟರ್ ಕಾಮಗಾರಿಗೆಂದು ಹಾಕಲಾದ ಬೃಹದಾಕಾರದ ಬಂಡೆಕಲ್ಲುಗಳನ್ನು ವರುಷಗಳ ಹಿಂದೆ ತೆರವುಗೊಳಿಸಲಾಗಿತ್ತು. ಆದರೆ ಗುತ್ತಿಗೆದಾರರು ಮಾತ್ರ ಸಂಪೂರ್ಣವಾಗಿ ತೆರವುಗೊಳಿಸದೆ ನೀರಿನ ಕೆಳಭಾಗದಲ್ಲಿ ಕೆಲ ಬಂಡೆಕಲ್ಲುಗಳನ್ನು ಹಾಗೇ ಉಳಿಸಿದ್ದು ಇದು ಮೀನುಗಾರಿಕಾ ದೋಣಿಗಳಿಗೆ ಗೋಚರಿಸದೆ ಅವಘಡಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಈ ಪ್ರದೇಶದಲ್ಲಿ ನಡೆದ ಮೂರನೆ ದೋಣಿ ದುರಂತ ಇದಾಗಿದ್ದು ಮೀನುಗಾರರಲ್ಲಿ ಆತಂಕ ಮನೆಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News