ಮಂಗಳೂರು ವಿವಿಯಲ್ಲಿ ಶಿಕ್ಷಕರ ದಿನಾಚರಣೆ
ಕೊಣಾಜೆ, ಸೆ.20: ಕೃಷಿಯಲ್ಲಿ ಚೀನಾ, ಭಾರತ, ಬ್ರೆಜಿಲ್ನದ್ದು ಉತ್ತಮ ಸಾಧನೆ ಕಾಣಬಹುದು. ಆದರೂ ಭಾರತಕ್ಕೆ ಹೋಲಿಸಿದರೆ ಚೀನಾ ಕಡಿಮೆ ಹೆಕ್ಟೇರ್ನಲ್ಲಿ ಹೆಚ್ಚಿನ ಬೆಳೆ ಉತ್ಪತ್ತಿ ಮಾಡುತ್ತಿದೆ. ಇದಕ್ಕೆ ಕೃಷಿಯಲ್ಲಿ ನಡೆಯುತ್ತಿರುವ ಸಂಶೋಧನೆ ಹಾಗೂ ಉನ್ನತ ತಂತ್ರಜ್ಞಾನದ ಬಳಕೆಯೇ ಮುಖ್ಯ ಕಾರಣವಾಗಿದೆ. ಒಟ್ಟಿನಲ್ಲಿ ದೇಶದ ಅಭಿವೃದ್ಧಿಯಲ್ಲಿ ಕೃಷಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಪದ್ಮಭೂಷಣ ಪ್ರೊ. ಎಂ. ಮಹದೇವಪ್ಪಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಮಂಗಳವಾರ ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ರೈತರ ಜ್ಞಾನದ ಮುಂದೆ ಯಾವುದೇ ವಿಜ್ಞ್ಞಾನಿ ಸಮನಾಗಿಲ್ಲ. ಸುಮಾರು 10 ಲಕ್ಷಕ್ಕೂ ಅಧಿಕ ಉತ್ಪನ್ನಗಳನ್ನು ಕಂಡುಹಿಡಿದವರು ರೈತರು. ಭಾರತದಲ್ಲಿಯೇ 1 ಲಕ್ಷ ವಿವಿಧ ಬಗೆಯ ಉತ್ಪತ್ತಿಗೆ ಕಾರಣರಾಗಿದ್ದಾರೆ. ಆದ್ದರಿಂದ ಭಾರತದಲ್ಲಿ ಕೃಷಿ ಕ್ಷೇತ್ರದ ಸಾಧನೆ ಮಹತ್ತರವಾಗಿದ್ದು, ನೂತನ ತಂತ್ರಜ್ಞಾನದೊಂದಿಗೆ ಇನ್ನಷ್ಟು ಅಭಿವೃದ್ಧಿ ಈ ಕ್ಷೇತ್ರದಲ್ಲಿ ನಡೆಯಬೇಕು ಎಂದು ಪ್ರೊ. ಮಹದೇವಪ್ಪಹೇಳಿದರು. ದೇಶದ ಹಸಿರು ಕ್ರಾಂತಿಗೆ ನಾಂದಿ ಹಾಡಿದ್ದು ದಕ್ಷಿಣ ಕನ್ನಡ ಜಿಲ್ಲೆ. ಕಾಟನ್ ಉತ್ಪತ್ತಿಯಲ್ಲಿ ಭಾರತ 2002ರಲ್ಲಿ ಐದನೆ ಸ್ಥಾನದಲ್ಲಿತ್ತು. ಈಗ ಎರಡನೆ ಸ್ಥಾನಕ್ಕೆ ಬಂದು ನಿಂತಿದೆ. ಇದು ನಿಜಕ್ಕೂ ಶ್ಲಾಘನೀಯ ಎಂದು ನುಡಿದರು. ಮಂಗಳೂರು ವಿವಿ ಕುಲಪತಿ ಪ್ರೊ. ಕೆ. ಭೈರಪ್ಪಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲ ಯದ ವಿಶ್ರಾಂತ ಕುಲಪತಿ ಪ್ರೊ. ಎನ್. ಆರ್.ಶೆಟ್ಟಿ ಹಾಗೂಬೆಂಗಳೂರಿನ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ನ ರಾಷ್ಟ್ರೀಯ ಪ್ರಾಧ್ಯಾಪಕ, ಬೆಂಗಳೂರು ಕೃಷಿವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪಿ.ಜಿ.ಚೆಂಗಪ್ಪಅವರನ್ನು ಸನ್ಮಾನಿಸಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ: ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರತೀವರ್ಷ ಮಂಗಳೂರು ವಿವಿ ವತಿಯಿಂದ ನೀಡಲ್ಪಡುವ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಈ ಬಾರಿ ಸಾಗರ ಭೂ ವಿಜ್ಞಾನ ಅಧ್ಯಯನ ವಿಭಾಗದ ಡಾ. ಬಿ.ಆರ್. ಮಂಜುನಾಥ್, ಅರ್ಥಶಾಸ್ತ್ರ ವಿಭಾಗದ ಡಾ. ವಿಶ್ವನಾಥ್ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸಿ.ಕೆ. ಕಿಶೋರ್ ಕುಮಾರ್ರಿಗೆ ನೀಡಿ ಗೌರವಿಸಲಾಯಿತು.
ಪರೀಕ್ಷಾಂಗ ಕುಲಸಚಿವ ಡಾ.ಎ.ಎಂ. ಖಾನ್, ಹಣಕಾಸು ಅಧಿಕಾರಿ ಪ್ರೆೊ. ಶ್ರೀಪತಿ ಕಲ್ಲೂರಾಯ ಉಪಸ್ಥಿತರಿದ್ದರು. ಮಂಗಳೂರು ವಿವಿ ಕುಲಸಚಿವ ಪ್ರೊ. ಕೆ.ಎಂ. ಲೋಕೇಶ್ ಸ್ವಾಗತಿಸಿದರು. ಪ್ರೊ. ಬಿ. ಶಿವರಾಮ ಶೆಟ್ಟಿ ಹಾಗೂ ಪ್ರೊ. ಬಿ. ಸೋಮಣ್ಣ ಸನ್ಮಾನ ಪತ್ರ ವಾಚಿಸಿದರು. ವಿವಿಯ ಆಂಗ್ಲಭಾಷಾ ವಿಭಾಗ ಪ್ರಾಧ್ಯಾಪಕ ಪ್ರೊ.ರವಿಶಂಕರ್ ರಾವ್ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.