ಹಾಜಿಗಳ ಕೊನೆಯ ತಂಡ ಆಗಮನ
ಮಂಗಳೂರು, ಸೆ. 21: ಕೇಂದ್ರ ಹಜ್ ಸಮಿತಿ ವತಿಯಿಂದ ಪವಿತ್ರ ಹಜ್ ಯಾತ್ರೆ ಕೈಗೊಂಡ ಯಾತ್ರಿಕರ ನಾಲ್ಕನೆ ಹಾಗೂ ಕೊನೆಯ ತಂಡ ಇಂದು ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
150 ಮಂದಿ ಹಾಜಿಗಳ ಕೊನೆಯ ತಂಡ ಇಂದು ಬೆಳಗ್ಗೆ 10:15ಕ್ಕೆ ಏರ್ ಇಂಡಿಯಾ ಮೂಲಕ ಬಜ್ಪೆಗೆ ಆಗಮಿಸಿದೆ. ಈ ಮೂಲಕ ಒಟ್ಟು ನಾಲ್ಕು ತಂಡಗಳಲ್ಲಿ 605 ಮಂದಿ ಹಾಜಿಗಳು ಆಗಮಿಸಿದಂತಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಬಜ್ಪೆ ವಿಮಾನ ನಿಲ್ದಾಣದಿಂದ 608 ಮಂದಿ ಹಜ್ ಯಾತ್ರೆ ಕೈಗೊಂಡಿದ್ದರು. ಈ ಪೈಕಿ ಆಗಸ್ಟ್ 4ರಂದು ಮಂಗಳೂರಿನಿಂದ ಹೊರಟ ಪ್ರಥಮ ತಂಡದ ಸುಳ್ಯ ಅರಂತೋಡು ನಿವಾಸಿ ಅಬೂಬಕರ್ ಎಂಬವರು ಅಸೌಖ್ಯದಿಂದ ನಿಧನ ಹೊಂದಿದ್ದರು. ಮತ್ತೊಂದು ದಂಪತಿ ಮುಡಿಪು ನಿವಾಸಿ ಅಬ್ದುಲ್ ಅಜೀಝ್ ಮತ್ತು ಗುಲ್ಝಾರ್ ಬೇಗಮ್ ಅನಾರೋಗ್ಯದಿಂದಾಗಿ ಮಕ್ಕಾದಲ್ಲಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನಷ್ಟೇ ಆಗಮಿಸಬೇಕಿದೆ ಎಂದು ರಾಜ್ಯ ಹಜ್ ಸಮಿತಿಯ ಅಧಿಕಾರಿ ಫೈರೋಝ್ ಪಾಶಾ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ, ರಾಜ್ಯ ಹಜ್ ಸಮಿತಿಯ ಅಧಿಕಾರಿ ಫೈರೋಝ್ ಪಾಶಾ, ಹಜ್ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಸಿ. ಮಹ್ಮೂದ್ ಹಾಜಿ, ಡಿಆರ್ಯುಸಿಸಿ ಸದಸ್ಯ ಎಂ.ಅಹ್ಮದ್ ಬಾವ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ವಕ್ಫ್ ಅಧಿಕಾರಿ ಅಬೂಬಕರ್, ಸುಲೈಮಾನ್ ಕರಾಯ, ಉಪಸ್ಥಿತರಿದ್ದರು.
ವೈಎಂಕೆ ಕೃತಜ್ಞತೆ
ಹಜ್ ಯಾತ್ರಿಕರ ಪ್ರಯಾಣಕ್ಕೆ ವ್ಯವಸ್ಥಿತವಾಗಿ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಏರ್ ಇಂಡಿಯಾದ ಸಿಬ್ಬಂದಿಗೆ ವೈ.ಮುಹಮ್ಮದ್ ಕುಂಞಿ ಕೃತಜ್ಞತೆ ಸಲ್ಲಿಸಿದ್ದಾರೆ.
ಹಜ್ ಯಾತ್ರಿಕರ ನಿರ್ಗಮನ ಹಾಗೂ ಆಗಮನದ ಸಂದರ್ಭಗಳಲ್ಲಿ ಯಾತ್ರಿಕರಿಗೆ ತೊಂದರೆಯಾಗದಂತೆ ಹೆಚ್ಚಿನ ಮುತುವರ್ಜಿ ವಹಿಸಿದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ರಾಧಾಕೃಷ್ಣ, ಏರ್ಇಂಡಿಯಾದ ಏರ್ಪೋರ್ಟ್ ಮ್ಯಾನೇಜರ್ ಸುಧೀರ್ ಭಟ್, ಸ್ಟೇಶನ್ ಮ್ಯಾನೇಜರ್ ನಾಗೇಶ್ ಎಸ್.ಶೆಟ್ಟಿ ಅವರಿಗೆ ಮುಹಮ್ಮದ್ ಕುಂಞಿ ಕೃತಜ್ಞತೆ ಸಲ್ಲಿಸಿದರು.