×
Ad

25 ವರ್ಷದ ಬಳಿಕ ವಿಟ್ಲದ ವ್ಯಕ್ತಿ ಪತ್ತೆ: ಸಂಬಂಧವನ್ನು ಪೋಣಿಸಿದ ಫೇಸ್‌ಬುಕ್

Update: 2016-09-22 00:22 IST



ವಿಟ್ಲ, ಸೆ.21: ಸುಮಾರು 25 ವರ್ಷದ ಹಿಂದೆ ವಿಟ್ಲ ಸಮೀಪದ ಬುಳೇರಿಕಟ್ಟೆಯಿಂದ ನಾಪತ್ತೆಯಾಗಿದ್ದ ಟೈಲರ್ ವೃತ್ತಿಯ ವ್ಯಕ್ತಿ ‘ಫೇಸ್‌ಬುಕ್’ನಿಂದಾಗಿ ಪತ್ತೆಯಾಗಿದ್ದಾರೆ. ವಿಪರ್ಯಾಸವೇನೆಂದರೆ, ಕುಟುಂಬಸ್ಥರು ಮೊದಲು ಕಂಡದ್ದು ಅವರ ಪ್ರಜ್ಞಾಹೀನತೆ, ಕ್ಷಣಾರ್ಧದಲ್ಲಿ ಅವರ ಮೃತದೇಹ!.
ಸೆ.16ರಂದು ‘ಬೆಂಗಳೂರು ಸಿಟಿ ಪೊಲೀಸ್’ ಎಂಬ ಫೇಸ್‌ಬುಕ್ ಪುಟದಲ್ಲಿ ಪಾನ್‌ಕಾರ್ಡ್ ಇಮೇಜ್‌ನೊಂದಿಗೆ ಒಂದು ಪೋಸ್ಟ್ ಹಾಕಲಾಗಿತ್ತು. ಈ ಚಿತ್ರದಲ್ಲಿ ಕಾಣುವ ವೈ. ಜಯರಾಮ ಭಟ್ ಎಂಬವರು ಪ್ರಜ್ಞೆ ತಪ್ಪಿರುವ ಸ್ಥಿತಿಯಲ್ಲಿ ಬೆಂಗಳೂರು ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ವಾರಸುದಾರರು ಇದ್ದಲ್ಲಿ ಸಂಪರ್ಕಿಸಲು ಮನವಿ ಮಾಡಲಾಗಿತ್ತು. ಇದು ವಾಟ್ಸಾಪ್‌ನಲ್ಲೂ ಹರಿದಾಡಿತು.
ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಗಣೇಶ್ ಕಂಬಾರ್ ಅವರ ಕಣ್ಣಿಗೂ ಈ ಚಿತ್ರ ಬಿತ್ತು. ‘ಇವರು ಹೌದೋ... ಅಲ್ಲವೋ’ ಎಂದು ಒಂದು ಕ್ಷಣ ಅನುಮಾನಗೊಂಡ ಗಣೇಶ್ ತಕ್ಷಣ ತನ್ನ ಸ್ನೇಹಿತನ ಜೊತೆ ಹನುಮಂತ ನಗರ ಪೊಲೀಸರನ್ನು ಸಂಪರ್ಕಿಸಿ, ಬಳಿಕ ಆಸ್ಪತ್ರೆಗೆ ಧಾವಿಸಿದಾಗ ಅಲ್ಲಿ ಪ್ರಜ್ಞಾಹೀನರಾಗಿ ಮಲಗಿದ್ದವರು ತನ್ನ ಹುಟ್ಟೂರಿನ ಟೈಲರ್ ವೃತ್ತಿಯ ವೈ. ಜಯರಾಮ ಭಟ್ ಎಂಬುದನ್ನು ಖಚಿತಪಡಿಸಿಕೊಂಡರು.

ಗಣೇಶ್ ಕಂಬಾರ್ ವಿಟ್ಲ ಸಮೀಪದ ಬಲ್ನಾಡು ಗ್ರಾಮದ ಬುಳೇರಿಕಟ್ಟೆ ನಿವಾಸಿ. ಅವರದೇ ಊರಿನ ಜನಾರ್ದನ ಭಟ್‌ರ ಪುತ್ರ ವೈ. ಜಯರಾಮ ಭಟ್ ಬುಳೇರಿಕಟ್ಟೆಯಲ್ಲಿ ಟೈಲರ್ ಆಗಿದ್ದರು. ಗಣೇಶ್ ಕಂಬಾರ್ 10ನೆ ತರಗತಿ ಮುಗಿಸಿ ಪಿಯುಸಿ ಪದಾರ್ಪಣೆ ಮಾಡುವುದರಲ್ಲಿದ್ದರು. ಚಡ್ಡಿಯ ಬದಲು ಪ್ರಥಮವಾಗಿ ಪ್ಯಾಂಟ್ ಹಾಕಬೇಕಿತ್ತು. ಗಣೇಶ್‌ಗೆ ಅದೇ ಮೊದಲ ಬಾರಿ ಹಾಕುವ ಪ್ಯಾಂಟನ್ನು ಹೊಲಿದುಕೊಟ್ಟವರು ಟೈಲರ್ ಜಯರಾಮ ಭಟ್. ಆವಾಗ ಬುಳೇರಿಕಟ್ಟೆ ಪ್ರದೇಶದಲ್ಲಿ ಅವರೊಬ್ಬರೇ ಟೈಲರ್. ಗಣೇಶ್‌ಗೆ ಇದೀಗ 45ರ ಹರೆಯವಾದರೆ, ಜಯರಾಮ ಭಟ್ ಗೆ 52 ವರ್ಷ. ಅಂದಹಾಗೆ, ಜಯರಾಮ ಭಟ್ ಮದುವೆಯಾದ ಬಳಿಕ ಬುಳೇರಿಕಟ್ಟೆಯ ಮನೆಯಿಂದ ದಿಢೀರ್ ನಾಪತ್ತೆಯಾಗಿದ್ದರು. ಕಳೆದ 25 ವರ್ಷದಿಂದ ಅವರ ಮತ್ತು ಕುಟುಂಬದ ಕೊಂಡಿ ಕಳಚಿತ್ತು. ಜಯರಾಮ ಭಟ್‌ರ ತಂದೆ ಮತ್ತು ಹಿರಿಯ ಸಹೋದರ ನಿಧನರಾಗಿದ್ದಾರೆ. ಜಯರಾಮ ಭಟ್ ಆಸ್ಪತ್ರೆಯಲ್ಲಿರುವುದನ್ನು ಕಿರಿಯ ಸಹೋದರ ಚಂದ್ರಶೇಖರ ಭಟ್‌ರಿಗೆ ಗಣೇಶ್ ಕಂಬಾರ್ ಫೋನ್ ಮೂಲಕ ತಿಳಿಸಿದ್ದು, ಅದರಂತೆ ಕಳೆದ ಶನಿವಾರ ಬೆಂಗಳೂರಿಗೆ ತೆರಳಿದ ಚಂದ್ರಶೇಖರ ಭಟ್ 28 ವರ್ಷಗಳ ಹಿಂದೆ ಕಾಣೆಯಾಗಿದ್ದ ತನ್ನ ಸಹೋದರ ಜಯರಾಮ ಭಟ್‌ರನ್ನು ಆಸ್ಪತ್ರೆಯಲ್ಲಿ ಕಂಡರೂ ಮಾತನಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಜಯರಾಮ ಭಟ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕುಟುಂಬದ ಸದಸ್ಯ ಕಾಣಲು ಸಿಕ್ಕಿದರೂ ಆ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ಅಂದರೆ, ಜಯರಾಮ ಭಟ್ ಇಹಲೋಕ ತ್ಯಜಿಸಿದ್ದರು. ಒಟ್ಟಿನಲ್ಲಿ ಯುವಕನಾಗಿದ್ದಾಗ ಮನೆಬಿಟ್ಟು ಹೋಗಿದ್ದ ಜಯರಾಮ ಭಟ್ 25 ವರ್ಷಗಳ ನಂತರ ಮನೆಯವರಿಗೆ ಕಾಣಲು ಸಿಕ್ಕರೂ ಆ ಸಂಭ್ರಮ ವಿಷಾದದಲ್ಲಿ ಅಂತ್ಯ ಕಂಡಿತು.

ಹನುಮಂತ ನಗರದ 50 ಫೀಟ್ ರಸ್ತೆಯಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದಾರೆಂದು ಸೆ.15ರ ಸಂಜೆ 4:30ಕ್ಕೆ ಠಾಣೆಗೆ ಕರೆಬಂತು. ತಕ್ಷಣ ನಾವಲ್ಲಿಗೆ ತೆರಳಿ ಆ ವ್ಯಕ್ತಿಯನ್ನು ಬನ್ನೇರುಘಟ್ಟ ಆರ್.ವಿ.ಎಂ. ಆಸ್ಪತ್ರೆಗೆ ದಾಖಲಿಸಿದೆವು. ವ್ಯಕ್ತಿಯ ಕಿಸೆಯಲ್ಲಿ ಪಾನ್‌ಕಾರ್ಡ್ ಬಿಟ್ಟು ಬೇರೇನೂ ಇರಲಿಲ್ಲ. ಅದನ್ನು ‘ಬೆಂಗಳೂರು ಸಿಟಿ ಪೊಲೀಸ್’ನ ‘ಫೇಸ್‌ಬುಕ್’ ಪುಟದಲ್ಲಿ ಹಾಕಲಾಗಿತ್ತು. ಸೆ.16ರಂದು ಇಬ್ಬರು ಪರಿಚಯಸ್ಥರೆಂದು ಹೇಳಿ ಠಾಣೆಗೆ ಬಂದಿದ್ದರು. ನಂತರ ಮನೆಯವರು ಸೆ.17ರಂದು ಬಂದರು. 2 ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು’ ಎಂದು ಹನುಮಂತನಗರ ಪೊಲೀಸ್ ಇನ್‌ಸ್ಪೆಕ್ಟರ್ ದಿಲೀಪ್ ಕುಮಾರ್ ಕೆ.ಎಚ್. ತಿಳಿಸಿದ್ದಾರೆ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News