ಡಿಕೆಎಸ್ಸಿ 20ನೆ ವಾರ್ಷಿಕೋತ್ಸವದ ಉದ್ಘಾಟನೆ
ಮಂಗಳೂರು, ಸೆ. 22: ಮಾನವನೊಬ್ಬ ಧಾರ್ಮಿಕ ಶಿಕ್ಷಣದ ಜತೆ ಲೌಕಿಕ ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದಲ್ಲಿ ನೈಜ ಮಾನವನಾಗಲು ಸಾಧ್ಯ ಎಂದು ಉಡುಪಿ ಖಾಝಿ ಬೇಕಲ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಹೇಳಿದ್ದಾರೆ.
ನಗರದ ಪುರಭವನದಲ್ಲಿ ಇಂದು ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿಕೆಎಸ್ಸಿ) 20ನೆ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಮುಸ್ಲಿಂ ಸಮುದಾಯವು ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂಬ ನೆಲೆಯಲ್ಲಿ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ನೇತೃತ್ವದಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಗಳು ಕಳೆದ 20 ವರ್ಷಗಳಲ್ಲಿ ತನ್ನ ಉದ್ದೇಶವನ್ನು ಈಡೇರಿಸುವಲ್ಲಿ ಸಫಲತೆಯ ಹೆಜ್ಜೆಯನ್ನಿರಿಸಿದೆ ಎಂದು ಅವರು ಹೇಳಿದರು.
ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ, ಸತ್ಕರ್ಮಗಳ ಪ್ರತಿಫಲ ಉತ್ತಮವಾಗಿರುತ್ತವೆ. ಈ ನಿಟ್ಟಿನಲ್ಲಿ ಡಿಕೆಎಸ್ಸಿ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.
ಸಮಾಜದ ಮುಂದೆ ಬಲವಾದ ಸವಾಲುಗಳಿವೆ. ಅದನ್ನು ಪ್ರವಾದಿಗಳ ‘ನಾವು ಬದುಕಿ ಇತರನ್ನು ಬದುಕಲು ಬಿಡಬೇಕು’ ಎಂಬ ಸಂದೇಶದ ಮೂಲಕ ಸಾಕಾರಗೊಳಿಸಬೇಕಿದೆ. ನಮ್ಮ ಆರೋಗ್ಯಕ್ಕೆ ಸಂಬಂಧಿಸಿ ಸ್ವಲ್ಪ ಬಿಪಿ, ಶುಗರ್ ಏರಿಕೆಯಾದಾಗಲೂ ಎಚ್ಚರಿಕೆ ವಹಿಸುವ ನಾವು ಸಮಾಜದಲ್ಲಿ ಹಗೆ, ದ್ವೇಷ ಹೆಚ್ಚಾಗದಂತೆ ಗಮನ ಹರಿಸಿ ಸೌಹಾರ್ದವನ್ನು ಕಾಪಾಡಬೇಕು ಎಂದು ಕರೆ ನೀಡಿದರು.
ಇನ್ನೋರ್ವ ಮುಖ್ಯ ಭಾಷಣಕಾರರಾಗಿ ಮರ್ಕಝುಲ್ ಹುದಾ ಕುಂಬ್ರದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಸಂದೇಶ ನೀಡಿದರು.
ಬಿ.ಎ. ಮೊಹಿದಿನ್ರಿಗೆ ‘ಜೀವಮಾನ ಸಾಧನಾ’ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ ಸ್ವೀಕರಿಸಿದ ಅಲ್ಹಾಜ್ ಬಿ.ಎ. ಮೊಹಿದಿನ್ರಿಗೆ ‘ಡಿಕೆಎಸ್ಸಿ ಜೀವಮಾನ ಸಾಧನಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದಕ್ಕಾಗಿ ಶ್ರಮಿಸುತ್ತಿರುವವರಿಗೆ ನೀಡಲಾದ ಡಿಕೆಎಸ್ಸಿ ಸದ್ಭಾವನಾ ಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ್ ಆಳ್ವರ ಪರವಾಗಿ ಅವರ ಪುತ್ರ ವಿವೇಕ್ ಆಳ್ವ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಮುಖ್ಯಸ್ಥ ಅಬ್ದುರ್ರವೂಫ್ ಪುತ್ತಿಗೆ ಹಾಗೂ ಯು.ಸಿ ಪೌಲೋಸ್ ಸ್ವೀಕರಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯದ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ 20 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಇದೇ ವೇಳೆ ಐದು ಮಂದಿಗೆ ತಳ್ಳು ಗಾಡಿ ವಿತರಣೆ ಕಾರ್ಯಕ್ರಮ ನಡೆಯಿತು. 20 ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ಒಂದೇ ಮಸೀದಿಯಲ್ಲಿ ಕನಿಷ್ಠ 20 ವರ್ಷ ನಿರಂತರ ಸೇವೆ ಸಲ್ಲಿಸುತ್ತಿರುವ 20 ಮಂದಿ ಉಲಮಾಗಳಿಗೆ ಸನ್ಮಾನ ನೆರವೇರಿಸಲಾಯಿತು.
ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆ ನೆರವೇರಿಸಿದರು. ಮರ್ಕಝ್ ತಅಲೀಮುಲ್ ಇಹ್ಸಾನ್ ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಿಕೆಎಸ್ಸಿಯ 20ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ಡಿ. 2ರಿಂದ 4ರವರೆಗೆ ಉಡುಪಿ ಜಿಲ್ಲೆಯ ಮೂಳೂರು ಅಲ್ ಇಹ್ಸಾನ್ ಕ್ಯಾಂಪಸ್ನಲ್ಲಿ ನಡೆಯಲಿದೆ. ಈ ಸಂದರ್ಭ 20 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದರು.
ಡಿಕೆಎಸ್ಸಿಯ ಅಧ್ಯಕ್ಷ ಅಸೈಯದ್ ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಅಲ್ ಮುಝೈನ್ ಗ್ರೂಪ್ನ ಝಕರಿಯಾ ಜೋಕಟ್ಟೆ, ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಅಲ್ಹಾಜ್ ಯೆನೆಪೊಯ ಮುಹಮ್ಮದ್ ಕುಂಞಿ, ದ.ಕ. ಹಾಗೂ ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ, ಡಿಕೆಎಸ್ಸಿ ಸ್ಥಾಪಕಾಧ್ಯಕ್ಷ ಹಸನುಲ್ ಫೈಝಿ, ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ನ ಅಧ್ಯಕ್ಷ ಸಅದ್ ಮುಸ್ಲಿಯಾರ್ ಆತೂರು, ಜಂ ಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ತೌಫೀಕ್ ನಾವುಂದ, ಡಿಕೆಎಸ್ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಯು.ಡಿ.ಅಬ್ದುಲ್ ಹಮೀದ್ ಉಳ್ಳಾಲ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಇಸ್ಮಾಯೀಲ್ ಹಾಜಿ ಕಿನ್ಯ, ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ನ ವ್ಯವಸ್ಥಾಪಕ ಯು.ಕೆ.ಮುಸ್ತಫಾ ಸಅದಿ, ಎಂ.ಇ. ಮೂಳೂರು, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಬಿ.ಎಚ್. ಖಾದರ್, ಇಕ್ಬಾಲ್ ಮರವಂತೆ ಕತಾರ್, ನಝೀರ್ ಹುಸೈನ್ ಅಲ್ ಫಲಾ ಜುಬೇಲ್, ಇಕ್ಬಾಲ್ ನಾವುಂದ ಕತಾರ್, ಮುಹಮ್ಮದ್ ಮುಬೀನ್ ಅಲ್ ಜುಬೇಲ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಮೊದಲು ಅಲ್ ಇಹ್ಸಾನ್ ಮೂಳೂರು ಸಂಸ್ಥೆಯ ಕುರಿತಂತೆ ಸಾಕ್ಷಚಿತ್ರ ಪ್ರದರ್ಶನಗೊಂಡಿತು.
ಸ್ವಾಗತ ಸಮಿತಿಯ ಅಧ್ಯಕ್ಷ ಮಮ್ತಾಝ್ ಅಲಿ ಸ್ವಾಗತಿಸಿದರು. ಹಿಪ್ಲುಲ್ ಕುರ್ಆನ್ ಕಾಲೇಜಿನ ವಿದ್ಯಾರ್ಥಿ ಸೈಯದ್ ಅನಸ್ ತಂಙಳ್ ಕಿರಾಅತ್ ಪಠಿಸಿದರು. ಡಿಕೆಎಸ್ಸಿಯ ಕಾರ್ಯಾಧ್ಯಕ್ಷ ಯು.ಡಿ. ಅಬ್ದುಲ್ ಹಮೀದ್ ವಂದಿಸಿದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.