ಉರಿ ದಾಳಿಗೆ ಕಾಶ್ಮೀರದ ಪರಿಸ್ಥಿತಿ ಕಾರಣವಿರಬಹುದು: ಪಾಕ್ ಪ್ರಧಾನಿ ನವಾಝ್ ಶರೀಫ್
ಇಸ್ಲಾಮಾಬಾದ್, ಸೆ.24: ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ದಾಳಿಗೆ ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಯ ಪ್ರಚೋದನೆ ಕಾರಣವಾಗಿರಬಹುದು . ಆದರೆ ಭಾರತ ಯಾವುದೇ ಸಾಕ್ಷ್ಯಧಾರವಿಲ್ಲದೆ ಪಾಕಿಸ್ತಾನವನ್ನು ಇದಕ್ಕೆ ಹೊಣೆಗಾರನನ್ನಾಗಿ ಮಾಡಿರುವುದು ಸರಿಯಲ್ಲ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಝ್ ಶರೀಫ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಕಾಶ್ಮೀರದಲ್ಲಿ ನಡೆದಿರುವ ಹಿಂಸಾಚಾರದಿಂದ ಹಲವರು ಸಾವಿಗೀಡಾಗಿದ್ದಾರೆ.ತನ್ನ ಹತ್ತಿರದ ಬಂಧುಗಳನ್ನು ಕಳೆದುಕೊಂಡವರು ಪ್ರತಿಕಾರವಾಗಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿರಬಹುದು. ಆದರೆ ಭಾರತ ಈ ಬಗ್ಗೆ ಯಾವುದೇ ತನಿಖೆ ನಡೆಸದೆ ಪಾಕಿಸ್ತಾನವನ್ನು ದೂರುತ್ತಿದೆ ಎಂದು ನುಡಿದರು.
ವಿಶ್ವಸಂಸ್ಥೆಯ ಮಹಾ ಅಧಿವೇಶನಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದಾಗ ಲಂಡನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತ ಬೇಜವಾಬ್ದಾರಿಯಿಂದ ಪ್ರಕರಣದಲ್ಲಿ ಪಾಕಿಸ್ತಾನವನ್ನು ಸಿಲುಕಿಸಿದೆ ಎಂದರು.
ಜಮ್ಮು ಮತ್ತು ಕಾಶ್ಮೀರದ ವಿವಾದವನ್ನು ಬಗೆ ಹರಿಸದೆ ಕಣಿವೆ ರಾಜ್ಯದಲ್ಲಿ ಶಾಂತಿ ಅಸಾಧ್ಯ ಎಂದು ಶರೀಫ್ ಹೇಳಿದರು.