ಅ.17ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ: ಜಿಲ್ಲಾಧಿಕಾರಿ
ಉಡುಪಿ, ಸೆ.24: ರೈತರ ಹಿತವನ್ನು ಗಮನದಲ್ಲಿರಿಸಿ ಭತ್ತಕ್ಕೆ ಬೆಂಬಲ ಬೆಲೆ ನೀಡಲು ಅ.17ರಿಂದ ಮೂರು ತಾಲೂಕಿನ ಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ 2016-17ನೇ ಸಾಲಿನಲ್ಲಿ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿರುವ ಆಧಾರದ ಮೇಲೆ ಭತ್ತ ಖರೀದಿ ಕೇಂದ್ರ ಸ್ಥಾಪನೆ ಸಂಬಂಧ ಪೂರ್ವಸಿದ್ದತೆ ಮಾಡಿಕೊಳ್ಳಲು ಕರೆಯಲಾದ ಜಿಲ್ಲಾ ಕಾರ್ಯಪಡೆ ಸಮಿತಿಯ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ರೈತರು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಯೋಗೇಶ್ವರ್ ಗೋಡೌನ್ಗಳನ್ನು ಒದಗಿಸಲು ಕೃಷಿ ಮಾರುಕಟ್ಟೆ ಮಂಡಳಿಗೆ ಸೂಚಿಸಿದರು.
ಕೃಷಿ ಇಲಾಖೆಯವರು ಖರೀದಿ ಕೇಂದ್ರಗಳಲ್ಲಿ ತಮ್ಮ ಅಧಿಕಾರಿಗಳನ್ನು ನಿಯೋಜಿಸುವಂತೆಯೂ ಯೋಗೇಶ್ವರ್ ಸೂಚಿಸಿದರು. ರೈತರು ಭತ್ತವನ್ನು ತರುವ ವೇಳೆ ತೇವಾಂಶ ಶೇ.17ಕ್ಕಿಂತ ಕಡಿಮೆ ಇರಬೇಕು. ಗುಣಮಟ್ಟದಲ್ಲಿ ಕಲ್ಮಶಗಳು ಗರಿಷ್ಠ ಒಂದು ಶೇಕಡ ಇರಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು. ಜೊಳ್ಳು ಪ್ರಮಾಣ ಗರಿಷ್ಟ ಶೇ.4 ಇರಬಹುದು ಎಂದರು.
ಹಾಪ್ಕಾಮ್ಸ್ನ ವ್ಯವಸ್ಥಾಪಕ ಪ್ರದೀಪ್ ಡಿ ಸೋಜಾ ಮಾತನಾಡಿ, ತೆಂಗಿನ ಬೆಂಬಲ ಬೆಲೆ ಖರೀದಿಯಡಿ 232 ಕ್ವಿಂಟಾಲ್ ತೆಂಗಿನಕಾಯಿಗಳನ್ನು ರೈತರಿಂದ ಖರೀದಿಸಲಾಗಿದೆ ಎಂದರು. ಕೆಎಸ್ಎಫ್ಸಿ ಉಪನಿರ್ದೇಶಕ ಜಯಪ್ಪ ಮಾತನಾಡಿ, ತೇವಾಂಶ ಅಳೆಯುವ ಮೀಟರ್ಗಳನ್ನು ಎಲ್ಲಾ ಕೇಂದ್ರಗಳಲ್ಲಿ ಒದಗಿಸುವುದಾಗಿ ತಿಳಿಸಿದರು. ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳೂ ಸಭೆಯಲ್ಲಿ ಉಪಸ್ಥಿತರಿದ್ದರು.