ಸತ್ತ ದನ ಎತ್ತಲು ನಿರಾಕರಿಸಿದ ದಲಿತ ಗರ್ಭಿಣಿ ಮೇಲೆ ಹಲ್ಲೆ
ಪಾಲನಪುರ,ಸೆ.25: ಸತ್ತ ದನ ಎತ್ತಲು ನಿರಾಕರಿಸಿದ ಐದು ತಿಂಗಳ ದಲಿತ ಗರ್ಭಿಣಿ ಹಾಗೂ ಆಕೆಯ ಪತಿ ಮೇಲೆ ಹಲ್ಲೆ ಮೇಲ್ಜಾತಿಯವರ ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ಬಾಣಸಕಾಂತ ಜಿಲ್ಲೆಯ ಅಮೀರ್ಗಢ ತಾಲೂಕು ಕಾರ್ಜಾ ಎಂದು ಗ್ರಾಮದಲ್ಲಿ ನಡೆದಿದೆ.
ಸಂಗೀತಾ ರಾಣವಾಸಿಯಾ (25) ಹಾಗೂ ಪತಿ ನೀಲೇಶ್ಸ್ ರಾಣವಾಸಿಯಾ (27) ಇದೀಗ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ದಲಿತ ಮಹಿಳೆಯರು ಸೇರಿದಂತೆ ಆರು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ದರ್ಬಾರ್ ಸಮುದಾಯಕ್ಕೆ ಸೇರಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಹಲ್ಲೆ, ದಾಳಿ, ದೊಂಬಿ ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಬತ್ವರ್ ಸಿಂಗ್ ಚವ್ಹಾಣ್, ಮಂಕುಸಿಂಗ್ ಚವ್ಹಾಣ್, ಯೋಗೀಶ್ ಚವ್ಹಾಣ್, ಬಾಬರ್ಸಿಂಗ್ ಚವ್ಹಾಣ್, ದಿಲ್ವರ್ಸಿಂಗ್ ಚವ್ಹಾಣ್ ಹಾಗೂ ನರೇಂದ್ರಸಿಂಗ್ ಚವ್ಹಾಣ್ ಎಂದು ಗುರುತಿಸಲಾಗಿದೆ.
ಹತ್ತು ಮಂದಿಯ ತಂಡ ಪತ್ನಿಯ ಹೊಟ್ಟೆ ಮೇಲೆ ಹೊಡೆದಿದೆ ಎಂದು ನೀಲೇಶ್ ಹೇಳಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದ ನೀಲೇಶ್ ಶನಿವಾರ ಸಂಜೆ ಬಿಡುಗಡೆಯಾಗಿದ್ದರೆ, ಮಹಿಳೆ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ತಕ್ಷಣವೇ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.