ಉಜಿರೆ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ
ಬೆಳ್ತಂಗಡಿ, ಸೆ.28: ಯೋಗ ಶಿಕ್ಷಕರಿಗೆ ಇಂದು ಜಗತ್ತಿನಾದ್ಯಂತ ಬೇಡಿಕೆ ಇದೆ. ಹೀಗಾಗಿ ಕೇಂದ್ರ ಸರಕಾರ ಅವರಿಗೆ ವಿಶೇಷ ಪ್ರಮಾಣ ಪತ್ರ ನೀಡಲಿದೆ ಎಂದು ಕೇಂದ್ರ ಆಯುಷ್ ಮಂತ್ರಾಲಯದ ಕಾರ್ಯದರ್ಶಿ ಅಜಿತ್ ಎಂ. ಶರಣ್ ಹೇಳಿದರು.
ಅವರು ಬುಧವಾರ ಉಜಿರೆ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ 23 ನೇ ಪದವಿ ಪ್ರದಾನ ಸಮಾರಂಭದಲ್ಲಿ 10 ಸ್ನಾತಕೋತ್ತರ, 71 ಪದವಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರದಾನಿಸಿ ಮಾತನಾಡಿದರು.
ಆಯುಷ್ ಸಚಿವಾಲಯ ಪ್ರಕೃತಿ ಹಾಗೂ ಯೋಗ ವಿಜ್ಞಾನದ ಬೆಳವಣಿಗೆಗೆ ಎಲ್ಲಾ ರೀತಿಯಲ್ಲಿ ಕ್ರಮಕೈಗೊಳ್ಳಲು ಸಕಲ ರೂಪುರೇಷೆಗಳನ್ನು ಸಿದ್ದಗೊಳಿಸಿ ಕಾರ್ಯರೂಪಕ್ಕಿಳಿದಿದೆ. ಈ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗೋಸ್ಕರ ಈಗಾಗಲೇ ರಾಜ್ಯದ ನಾಗಮಂಗಲದಲ್ಲಿ ಕೇಂದ್ರೀಯ ಸಂಶೋಧನಾ ಕೇಂದ್ರವನ್ನು ಆರಂಭಿಸಿದ್ದು ಮೊದಲ ಹಂತದ ಕಾರ್ಯ ಮುಗಿದಿದೆ. ಸಂಶೋಧಕರಿಗೆ ಫೆಲೋಶಿಪ್ ನೀಡಲಾಗುತ್ತದೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಯನ್ನು ನೀಡುವ ಆಸ್ಪತ್ರೆಗಳಿಗೆ ಎಕ್ರಿಡಿಯೇಶನ್ ನೀಡಲಾಗುತ್ತದೆ. ಸಚಿವಾಲಯವು ಈ ಕ್ಷೇತ್ರದಲ್ಲಿರುವ ವೈದ್ಯರುಗಳ ಪಟ್ಟಿಯನ್ನು ಸಿದ್ದಮಾಡಲಿದೆ. ಮಧುಮೇಹ ಹಾಗೂ ಕ್ಯಾನ್ಸರ್ಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪರಿಣಾಮಕಾರಿಯಾಗುವಂತೆ ಸಂಶೋಧನೆ ಅಗತ್ಯವಿದೆ ಎಂದ ಅವರು ಯೋಗ ಶಿಕ್ಷಕರನ್ನು ಗುರುತಿಸುವ ಉದ್ದೇಶದಿಂದ ಅವರಿಗೆ ಪ್ರಮಾಣ ಪತ್ರ ನೀಡುವ ಯೋಜನೆ ಸಿದ್ದಗೊಂಡಿದೆ. ಈ ಪ್ರಮಾಣ ಪತ್ರ ಅಂತರಾಷ್ಟ್ರೀಯ ಮಟ್ಟದಲ್ಲೂ ಉಪಯೋಗಕರವಾಗಲಿದೆ ಎಂದರು.
ಕಲಿಯುವಿಕೆ ಎಂಬುದು ನಿರಂತರ ಪ್ರಕ್ರಿಯೆ. ಜೀವನದ ಪ್ರತಿಯೊಂದು ಕ್ಷಣದಲ್ಲೂ ಕಲಿಕೆಯ ಅಂಶಗಳಿರುತ್ತವೆ. ಇದಕ್ಕಾಗಿ ನಮ್ಮ ಕಣ್ಣುಗಳನ್ನು ತೆರೆದಿಡಬೇಕು ಮತ್ತು ಸದಾ ಕುತೂಹಲಿಗರಾಗಿರಬೇಕು. ಇದರಿಂದ ಸ್ವಂತಕ್ಕೆ ಮತ್ತು ನಾವು ಕೈಗೊಳ್ಳುವ ಕಾರ್ಯಕ್ಕೆ ಲಾಭವಾಗುತ್ತದೆ. ಪದವಿ ಪಡೆದ ನಂತರ ನಿಮ್ಮ ಪಯಣ ಮುಗಿಯುವುದಿಲ್ಲ. ಇಲ್ಲಿಂದ ಅದು ಆರಂಭವಾಗುತ್ತದೆ. ನಿಮ್ಮದೇ ಆದ ಪ್ರಭಾವಲಯವನ್ನು ನಿರ್ಮಿಸಿಕೊಳ್ಳಬೇಕು. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ವಿಚಾರದಲ್ಲಿ ದೇಶದಲ್ಲೇ ಮೊದಲು ಆರಂಭವಾದ ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ನೀವು ಪುಣ್ಯವಂತರು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಶ್ಲಾಘಿಸಿದರು.
ಆಯುಷ್ ಮಂತ್ರಾಲಯದ ಜಂಟಿ ಸಲಹೆಗಾರ ಡಾ.ಈಶ್ವರ್ ಎನ್. ಆಚಾರ್ಯ, ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಪ್ರಭಾಕರ್, ಕಾರ್ಯದರ್ಶಿ ಡಾ.ಬಿ.ಯಶೋವರ್ಮ ವೇದಿಕೆಯಲ್ಲಿದ್ದರು.
ವಿವಿಧ ಸಂಸ್ಥೆಗಳಿಂದ ಕೊಡಮಾಡುವ ವಿದ್ಯಾರ್ಥಿ ವೇತನಗಳನ್ನು ವಿತರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಡಾ. ರಾಜೇಶ್ ಕೆ.ಸಿಂಗ್ ಸಂಪಾದಿಸಿದ ಕೃತಿಯೊಂದನ್ನು ಬಿಡುಗಡೆ ಮಾಡಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಯೋಗ ವಿಭಾಗದ ಡೀನ್ ಡಾ.ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಡಾ.ಚಂದ್ರಕಾಂತ್ ಕೆ.ಕೆ.ಮತ್ತು ಜ್ಯೋತ್ಸ್ನಾ ಕಾರ್ಯಕ್ರಮ ನಿರೂಪಿಸಿದರು.