ಉಳ್ಳಾಲ: ಎರಡು ಪ್ರತ್ಯೇಕ ವಾಹನ ಅಪಘಾತ; ಇಬ್ಬರ ದಾರುಣ ಮೃತ್ಯು
ಉಳ್ಳಾಲ, ಸೆ.28: ಉಳ್ಳಾಲ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಕಾಪಿಕಾಡು ಮತ್ತು ಕೋಟೆಕಾರು ಬೀರಿಯಲ್ಲಿ ನಡೆದ ಎರಡು ಪ್ರತ್ಯೇಕ ವಾಹನ ಅಪಘಾತಗಳಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರು ದಾರುಣವಾಗಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಮೃತಪಟ್ಟವರನ್ನು ಕುಂಜತ್ತೂರಿನ ಕಣ್ವತೀರ್ಥ ನಿವಾಸಿ ಗಂಗಾಧರ್(47)ಮತ್ತು ಉಚ್ಚಿಲ ಪೆರಿಬೈಲ್ ನಿವಾಸಿ ಮುಹಮ್ಮದ್ ಅಫ್ತಾರ್(22) ಎಂದು ಗುರುತಿಸಲಾಗಿದೆ.
ಕೋಟೆಕಾರು ಸಮೀಪದ ಕಾಪಿಕಾಡ್ ಬಳಿ ಮಂಗಳವಾರ ರಾತ್ರಿ ಸುಮಾರು 10:30ರ ವೇಳೆಗೆ ತಲಪಾಡಿಯಿಂದ ತೊಕ್ಕೊಟ್ಟಿನ ಕಡೆ ಅತಿ ವೇಗದಿಂದ ಸಂಚರಿಸುತ್ತಿದ್ದ ಮಂಗಳೂರು ಸ್ವೀಟ್ಸ್ ಮಾಲಕರ ಕಾರು ಮುಂದುಗಡೆ ಚಲಿಸುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ನಡುವಿನ ವಿಭಜಕ ನೆಗೆದು ಪಕ್ಕದ ರಸ್ತೆಗೆ ಉರುಳಿ ಬಿದ್ದಿದೆ. ಅಲ್ಲದೆ ಕಾರು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ನ ಹಿಂಬದಿ ಸವಾರ ಗಂಗಾಧರ್ ರಸ್ತೆಗೆ ಉರುಳಿ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ ಸವಾರ ಕುಂಜತ್ತೂರು ಕಣ್ವತೀರ್ಥ ನಿವಾಸಿ ಮಂಜೇಶ್ವರ ಗ್ರಾ.ಪಂ ಸದಸ್ಯರಾದ ಭಗವಾನ್ ಅವರು ಗಂಭೀರ ಗಾಯಗೊಂಡಿದ್ದು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಜನ ಜಮಾಯಿಸಿ ಕಾರು ಚಾಲಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದು ಬಳಿಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಮೃತ ಗಂಗಾಧರ್ ಅವರು ಕುಂಜತ್ತೂರಿನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು ಪತ್ನಿ, ಪುತ್ರನನ್ನು ಅಗಲಿದ್ದಾರೆ.
ಸ್ಕೂಟರ್ಗೆ ಲಾರಿ ಢಿಕ್ಕಿ ಹೊಡೆದು ಯುವಕ ಮೃತ್ಯು
ಇನ್ನೊಂದು ಅಪಘಾತ ಪ್ರಕರಣದಲ್ಲಿ ಬುಧವಾರ ಬೆಳಗ್ಗೆ ರಾ.ಹೆ.66ರ ಕೋಟೆಕಾರು, ಬೀರಿ ಬಳಿ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತಪಟ್ಟ ಯುವಕನನ್ನು ಉಚ್ಚಿಲ ಪೆರಿಬೈಲ್ನ ದಿ.ಹುಸೇನಬ್ಬರ ಪುತ್ರ ಮುಹಮ್ಮದ್ ಅಫ್ತಾರ್(22) ಎಂದು ಗುರುತಿಸಲಾಗಿದೆ. ಅಫ್ತಾರ್ ಮಾಡೂರಿನಿಂದ ಹೆದ್ದಾರಿಗೆ ಆಕ್ಟಿವಾ ಸ್ಕೂಟರನ್ನು ಚಲಾಯಿಸಿ ತೊಕ್ಕೊಟ್ಟಿನ ಕಡೆಗೆ ತಿರುವು ಪಡೆಯುತ್ತಿದ್ದಾಗ ಕೇರಳದಿಂದ ವೇಗದಿಂದ ಬರುತ್ತಿದ್ದ ಸರಕು ಲಾರಿಯೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಅಫ್ತಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಫ್ತಾರ್ ಇಲೆಕ್ಟ್ರಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಬುಧವಾರ ಸಾಯಂಕಾಲ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸಿದ್ದು, ಬೆಳಗ್ಗೆ ಕೋಟೆಕಾರು ಮಾಡೂರಿನ ಸ್ನೇಹಿತನ ಮನೆಗೆ ತೆರಳಿ ಹಿಂದಿರುಗುವ ಸಂದರ್ಭ ಅಪಘಾತ ಸಂಭವಿಸಿದೆ.
ಅಪಘಾತ ಪ್ರಕರಣಕ್ಕೆ ಸಂಬಧಿಸಿದ ವಾಹನಗಳನ್ನು ವಶಪಡಿಸಿಕೊಂಡ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ಪೊಲೀಸರು ಕೋಟೆಕಾರ್ ಬೀರಿಯಲ್ಲಿ ಹೆಚ್ಚು ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ.