×
Ad

ದಕ್ಷಿಣ ಕನ್ನಡ ಜಿಲ್ಲೆಯ ಹಿರಿಮೆಗೆ ಮತ್ತೊಂದು ಗರಿ

Update: 2016-10-01 21:35 IST

ಮಂಗಳೂರು ಅ.1: ಉನ್ನತ ಶಿಕ್ಷಣಕ್ಕೆ ದೇಶದಲ್ಲೇ ಖ್ಯಾತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಮೆಗೆ ಮತ್ತೊಂದು ಗರಿ ಮೂಡಲಿದೆ. ಅದು ಅ.3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ತೂರು ತಾಲೂಕಿನ ಕೊಯ್ಲದಲ್ಲಿ ನೂತನ ಪಶುವೈದ್ಯಕೀಯ ಕಾಲೇಜಿಗೆ ಪೂರ್ವಾಹ್ನ 11:30ಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸಾಕಷ್ಟು ವೈದ್ಯಕೀಯ, ಇಂಜಿನಿಯರಿಂಗ್, ಸ್ನಾತಕೋತ್ತರ ಶಿಕ್ಷಣ, ಮಂಗಳೂರು ವಿಶ್ವವಿದ್ಯಾನಿಲಯ, ಎನ್‌ಐಟಿಕೆ, ಮೀನುಗಾರಿಕಾ ಕಾಲೇಜು, ಕೃಷಿವಿಜ್ಞಾನ ಕಾಲೇಜು ಸೇರಿದಂತೆ ಶಿಕ್ಷಣದ ವಿವಿಧ ವಿಷಯಗಳಲ್ಲಿ ಹಲವರು ಕಾಲೇಜುಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗ್ರಾಮೀಣ ಸೊಗಡಿನ ಪಶುವೈದ್ಯಕೀಯ ಕಾಲೇಜು ಸ್ಥಾಪನೆಯಾಗಲಿದೆ. ಇದರಿಂದ ಕರಾವಳಿಯ ಹೈನುಗಾರಿಕೆ, ಜಾನುವಾರು ಸಾಕಣೆ, ಪಶು ಉತ್ಪನ್ನಗಳ ತಯಾರಿಕೆ, ಕುರಿ, ಮೇಕೆ, ಕೋಳಿ ಮತ್ತಿತರ ಕ್ಷೇತ್ರಗಳಲ್ಲಿ ಮಹತ್ತರ ಪ್ರಗತಿಗೆ ನಾಂದಿಯಾಗಲಿದೆ. ಕೈಗಾರಿಕಾ ಹಾಗೂ ಸೇವಾ ಕ್ಷೇತ್ರದತ್ತಲೇ ಒಲವು ತೋರುತ್ತಿರುವ ವಿದ್ಯಾರ್ಥಿಗಳು, ಪಾಲಕರನ್ನು ಕೃಷಿ ಕ್ಷೇತ್ರದತ್ತ ಆಕರ್ಷಿಸಲು ಪಶುವೈದ್ಯಕೀಯ ಕಾಲೇಜು ನೆರವಾಗಲಿದೆ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬೀದರ್ ಇದರ ಅಡಿಯಲ್ಲಿ ಪುತ್ತೂರು ತಾಲೂಕಿನ ಕೊಯ್ಲದಲ್ಲಿ 142 ಕೋಟಿ ರೂ. ವೆಚ್ಚದಲ್ಲಿ ನೂತನ ಪಶುವೈದ್ಯಕೀಯ ಮಹಾವಿದ್ಯಾನಿಲಯವನ್ನು ಸ್ಥಾಪಿಸಲು ಸರಕಾರದ ಆಡಳಿತಾತ್ಮಕ ಮಂಜೂರಾತಿ ನೀಡಿದೆ.

ಕೊಯ್ಲದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಒಟ್ಟು 247 ಎಕರೆ ಜಮೀನನ್ನು ಪಶುವೈದ್ಯಕೀಯ ಕಾಲೇಜು ಸ್ಥಾಪನೆಗೆ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬೀದರ್‌ಗೆ ವರ್ಗಾಯಿಸಲಾಗಿದೆ. ಈ ನಿಮಿತ್ತ ವಿಶ್ವವಿದ್ಯಾನಿಲಯವು ಪೂರ್ವಭಾವಿ ಸಿದ್ಧತೆಗಾಗಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಡಾ. ವಸಂತ ಶೆಟ್ಟಿ ಅವರನ್ನು ಈಗಾಗಲೇ ನೇಮಿಸಿದೆ.

ಪುತ್ತೂರಿನಲ್ಲಿ ಪಶುವೈದ್ಯಕೀಯ ಕಾಲೇಜು ಘೋಷಣೆಯಾಗಿ ಸಾಕಷ್ಟು ಕಾಲವಾಗಿದ್ದರೂ, ಗಮನಾರ್ಹ ಪ್ರಗತಿಯಾಗಿರಲಿಲ್ಲ. ಒಂದು ಹಂತದಲ್ಲಿ ಈ ಕಾಲೇಜು, ತುಮಕೂರು ಜಿಲ್ಲೆಯ ಶಿರಾ ಎಂಬಲ್ಲಿಗೆ ವರ್ಗಾವಣೆಯಾಗಲಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಒತ್ತಡದ ಫಲವಾಗಿ ಪಶುವೈದ್ಯಕೀಯ ಕಾಲೇಜು ಇಲ್ಲಿಯೇ ಸ್ಥಾಪನೆಯಾಗುವಲ್ಲಿ ಯಶಸ್ವಿಯಾಗಿದೆ.

ಅಲ್ಲದೇ, ಕಾಲೇಜಿಗೆ ಜಮೀನು ಒದಗಿಸುವಲ್ಲಿಯೂ ಸಚಿವರು ಸಾಕಷ್ಟು ಮುತುವರ್ಜಿ ವಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಕೊಯ್ಲಕ್ಕೆ ಕರೆಸಿ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ.

ನೂತನ ಪಶುವೈದ್ಯಕೀಯ, ಮಹಾದ್ಯಾಲಯ ಕಟ್ಟಡ ನಿರ್ಮಿಸುವ ಯೋಜನೆಗೆ ಸಂಬಂಧಿಸಿದಂತೆ ಮೊದಲನೆಯ ಹಂತವಾಗಿ ಕಾಲೇಜು ಕಟ್ಟಡ, ವೈದ್ಯಕೀಯ ಕಟ್ಟಡ, ಹುಡುಗರ ವಸತಿ ನಿಲಯ, ಮಹಿಳೆಯರ ವಸತಿ ನಿಲಯ, ಗೆಸ್ಟ್ ಹೌಸ್ ಕಾಮಗಾರಿಗಳನ್ನು ಒಟ್ಟು 110.5 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ಕಾಮಗಾರಿಯ ನಿರ್ವಹಣೆಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ನಾಲ್ಕು ಪಶುವೈದ್ಯ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಸುತ್ತಿದ್ದು, ಒಟ್ಟು 290 ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪ್ರವೇಶಕ್ಕೆ ಅವಕಾಶ ಇದೆ. ಈ ಪೈಕಿ ಬೀದರ್-60, ಬೆಂಗಳೂರು-75, ಹಾಸನ-75 ಹಾಗೂ ಶಿವಮೊಗ್ಗ-80 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇದೆ. ಇದಲ್ಲದೇ ಗದಗ, ಅಥಣಿ ಹಾಗೂ ಪ್ರಸ್ತುತ ಪುತ್ತೂರಿನಲ್ಲಿ ಸ್ಥಾಪನಾ ಹಂತದಲ್ಲಿವೆ. ಪಶುಪಾಲನಾ ಇಲಾಖೆಯಲ್ಲಿ ಗ್ರಾಮೀಣ ರೈತರಿಗೆ ಸೇವೆ ಒದಗಿಸಲು 692 ಪಶುವೈದ್ಯಾಧಿಕಾರಿ ಮತ್ತು ಅಂದಾಜು 300 ಜನ ಸಹಾಯಕ ನಿರ್ದೇಶಕರ ಹುದ್ದೆ ಖಾಲಿ ಇದ್ದು, ಈ ಹುದ್ದೆಗಳ ಭರ್ತಿಗೆ ಪದವೀಧರ ಪಶುವೈದ್ಯರ ಕೊರತೆ ಇದೆ. ಈ ಹಿನ್ನಲೆಯಲ್ಲಿ ನಾಲ್ಕು ಪಶುವೈದ್ಯ ಕಾಲೇಜುಗಳ ಜೊತೆಗೆ ಪುತ್ತೂರು ಪಶುವೈದ್ಯಕೀಯ ಕಾಲೇಜು ಸೇರಿದಂತೆ ಇನ್ನು 3 ಕಾಲೇಜು ಮಂಜೂರಾಗಿದ್ದು, ಕಾರ್ಯಾರಂಭ ಮಾಡಬೇಕಿದೆ. ಪುತ್ತೂರು ಕಾಲೇಜು ಮೂಲಸೌಕರ್ಯ ಪೂರ್ಣಗೊಂಡು ಕಾರ್ಯಾರಂಭ ಮಾಡಿದಲ್ಲಿ ಪ್ರತಿ ವರ್ಷ 60 ವಿದ್ಯಾರ್ಥಿಗಳಿಗೆ ಪಶುವೈದ್ಯ ಪದವಿಗೆ ಪ್ರವೇಶಾವಕಾಶ ಕಲ್ಪಿಸಬಹುದಾಗಿದೆ.

ರಾಜ್ಯ ಸರಕಾರವು 530 ಖಾಲಿ ಇರುವ ಪಶುವೈದ್ಯರ ಹುದ್ದೆ ಭರ್ತಿ ಮಾಡಲು ನೇರ ನೇಮಕಾತಿಗಾಗಿ ಕ್ರಮ ವಹಿಸಿದೆ. ಪಶು ವೈದ್ಯಕೀಯ ಪದವೀಧರರಿಗೆ ಸರಕಾರಿ ಕ್ಷೇತ್ರವಲ್ಲದೆ, ಹೈನುಗಾರಿಕೆ, ಡೈರಿ, ಸಹಕಾರಿ ಕ್ಷೇತ್ರವಲ್ಲದೆ, ಖಾಸಗಿಯಾಗಿಯೂ ಉನ್ನತವಾದ ಬೇಡಿಕೆ ಇದೆ.

ಪ್ರಗತಿಯತ್ತ ಪಶುಸಂಗೋಪನೆ, ಹೈನುಗಾರಿಕೆ: ರಾಜ್ಯದಲ್ಲಿ ಪಶುಸಂಗೋಪನೆಯು ಗ್ರಾಮೀಣ ಪ್ರದೇಶದಲ್ಲಿ ಬಹುಮುಖ್ಯ ಕಸುಬಾಗಿದ್ದು, ಹಾಲು ಉತ್ಪಾದನೆಯಲ್ಲಿ 9ನೆ ಸ್ಥಾನದಲ್ಲಿ ಮುಂಚೂಣಿಯಲ್ಲಿದೆ. ಕುರಿ, ಮೇಕೆ ಸಾಕಣೆಯಲ್ಲಿ 4ನೆ ಸ್ಥಾನದಲ್ಲಿದೆ. ಮೊಟ್ಟೆ ಉತ್ಪಾದನೆಯಲ್ಲಿ ರಾಜ್ಯವು 3ನೆ ಸ್ಥಾನದಲ್ಲಿದೆ. ಮಾಂಸ ಉತ್ಪಾದನೆಯಲ್ಲಿ 7ನೆ ಸ್ಥಾನದಲ್ಲಿದೆ. ಆದ್ದರಿಂದ ರಾಜ್ಯ ಸರಕಾರವು ಜಾನುವಾರು ಉತ್ಪನ್ನಗಳಾದ ಹಾಲು, ಮೊಟ್ಟೆ, ಮಾಂಸ ಹೆಚ್ಚಳ ಮಾಡಲು ಗ್ರಾಮೀಣ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ಇವುಗಳಲ್ಲಿ ಅತೀ ಮುಖ್ಯವಾದ ಕ್ಷೀರಭಾಗ್ಯ, ಪಶುಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದೆ.

ವರ್ಷಕ್ಕೆ 2 ಬಾರಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಸೇರಿದಂತೆ ಎಲ್ಲಾ ರೋಗಗಳಿಗೆ ಲಸಿಕೆ ಹಾಕುವುದರ ಮುಖಾಂತರ ಜಾನುವಾರುಗಳ ರೋಗ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಲಾಗುತ್ತಿದೆ. ಆಕಸ್ಮಿಕವಾಗಿ ಕುರಿ, ಮೇಕೆಗಳು ಮರಣ ಹೊಂದಿದ್ದಲ್ಲಿ ಕುರಿಗಾರರಿಗೆ ಪ್ರತೀ ಕುರಿಗೆ 5,000 ರೂ. ನೆರವು ನೀಡುವ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ. ಈ ಎಲ್ಲಾ ಯೋಜನೆಗಳು ರಾಜ್ಯದಲ್ಲಿ ಪಶುಸಂಗೋಪನೆ ಕ್ಷೇತ್ರವನ್ನು ಸಾಕಷ್ಟು ಆಕರ್ಷಿಸಿ, ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News