ಕಾಂಗ್ರೆಸ್ ಮುಖಂಡ ಇಸ್ಮಾಯೀಲ್ ಹತ್ಯೆ ಪ್ರಕರಣ: ಆರೋಪಿಗಳು ಸೆರೆ?
ಸುಳ್ಯ, ಅ.3: ಇತ್ತೀಚೆಗೆ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಕರಾವಳಿ ವಿಭಾಗದ ಅಧ್ಯಕ್ಷ ಇಸ್ಮಾಯೀಲ್ ನೇಲ್ಯಮಜಲು(52) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ. ಈ ಪೈಕಿ ನಾಲ್ವರು ಹತ್ಯೆಗೆ ಸುಫಾರಿ ನೀಡಿದವರು ಹಾಗೂ ಮೂವರು ಕೊಲೆ ಆರೋಪಿಗಳು ಎಂದು ತಿಳಿದುಬಂದಿದೆ.
ಇಸ್ಮಾಯೀಲ್ರನ್ನು ಸೆಪ್ಟಂಬರ್ 23ರಂದು ಮಧ್ಯಾಹ್ನ ಸುಳ್ಯದ ಐವರ್ನಾಡಿನಲ್ಲಿ ಕೊಲೆಗೈಯ್ಯಲಾಗಿತ್ತು. ಇಸ್ಮಾಯೀಲ್ ಅಂದು ಸುಳ್ಯ ನ್ಯಾಯಾಲಯಕ್ಕೆ ಪ್ರಕ ರಣ ವೊಂದರ ವಿಚಾರಣೆಗೆ ಸಂಬಂಧಿಸಿ ಬಂದಿದ್ದರು. ಅಲ್ಲಿಂದ ಮಧ್ಯಾಹ್ನ ಮತ್ತೆ ಬೆಳ್ಳಾರೆ ಕಡೆ ಹೊರಟವರು ದಾರಿಮಧ್ಯೆ ನಮಾಝ್ಗಾಗಿ ಐವರ್ನಾಡಿನಲ್ಲಿ ಅಂಗಡಿಯೊಂದರ ಬಳಿ ತನ್ನ ಇನೋವಾ ಕಾರನ್ನು ನಿಲ್ಲಿಸಿ ಸಮೀಪದ ಮಸೀದಿಗೆ ತೆರಳಿದ್ದರು. ನಮಾಝ್ ನಿರ್ವಹಿಸಿ 1:45ರ ವೇಳೆಗೆ ವಾಪಸ್ ತನ್ನ ಕಾರಿನ ಬಳಿ ಬರುತ್ತಿದ್ದಂತೆ ದುಷ್ಕರ್ಮಿಗಳ ತಂಡವೊಂದು ಅವರ ಮೇಲೆ ಏಕಾಏಕಿ ತಲವಾರಿನಿಂದ ದಾಳಿ ನಡೆಸಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.