ಬಂಟ್ವಾಳ: ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾರ್ದನಿಸಿದ ತುಂಬೆ ನೂತನ ಡ್ಯಾಂ ಸಮಸ್ಯೆ
ಬಂಟ್ವಾಳ, ಅ. 4: ನೇತ್ರಾವತಿ ನದಿಗೆ ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಡ್ಯಾಂನಿಂದಾಗಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಎಷ್ಟು ಜಮೀನು ಮುಳುಗಡೆಯಾಗುತ್ತದೆ ಎಂದು ಮಂಗಳೂರು ಮಹಾ ನಗರ ಪಾಲಿಕೆಯಿಂದ ಮಾಹಿತಿ ಪಡೆದುಕೊಳ್ಳುವಂತೆ ಪುರಸಭೆ ಸದಸ್ಯರು ಒತ್ತಾಯಿಸಿದರು.
ಮಂಗಳವಾರ ಬೆಳಗ್ಗೆ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಸದಸ್ಯ ಸದಾಶಿವ ಶೆಟ್ಟಿ, ಮಂಗಳೂರು ನಗರಕ್ಕೆ ನೀರು ಪೂರೈಸಲು ನೇತ್ರಾವತಿ ನದಿಗೆ ತುಂಬೆಯಲ್ಲಿ 12 ಮೀಟರ್ ಎತ್ತರದ ಹೊಸ ಡ್ಯಾಂ ನಿರ್ಮಿಸಲಾಗುತ್ತಿದೆ. ಮುಂದಿನ ತಿಂಗಳಲ್ಲಿ ಈ ಡ್ಯಾಂನಲ್ಲಿ 7 ಮೀಟರ್ ನೀರು ಶೇಖರಣೆಗೆ ಮನಪಾ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ನೀರು ಶೇಖರಣೆಯಿಂದ ಪುರಸಭಾ ವ್ಯಾಪ್ತಿಯ ಬಿ.ಮೂಡ ಮತ್ತು ಪಾಣೆಮಂಗಳೂರು ಗ್ರಾಮದ ಕೆಲವು ಭಾಗಗಳು ಮುಳುಗಡೆಯಾಗಲಿದ್ದು ಜಮೀನು ಕಳೆದುಕೊಳ್ಳುವ ಸಂತ್ರಸ್ತರಲ್ಲಿ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ಎರಡು ಗ್ರಾಮದ ಎಷ್ಟು ಜಮೀನು ಮುಳುಗಡೆಯಾಗಲಿದೆ ಎಂದು ಮಾಹಿತಿ ಕೋರಿ ಮನಪಾಗೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಈ ಬಗ್ಗೆ ಯಾವುದೇ ಸಭೆಗಳಿಗೆ ನಮ್ಮನ್ನು ಕರೆದಿಲ್ಲ. ಹಾಗೆಯೇ ಯಾವುದೇ ಮಾಹಿತಿಯನ್ನು ಕೂಡಾ ನೀಡಿಲ್ಲ ಎಂದರು. ಈ ವೇಳೆ ಸದಸ್ಯೆ ಚಂಚಲಾಕ್ಷಿ ಪ್ರತಿಕ್ರಿಯಿಸಿ ಮುಳುಗಡೆ ಜಮೀನಿನ ಸರ್ವೇ ಸಂದರ್ಭದಲ್ಲಿ ಜಮೀನು ಮಾಲಕರಿಗೇ ಮಾಹಿತಿ ನೀಡುತ್ತಿಲ್ಲ. ಇನ್ನು ಪುರಸಭೆಗೆ ಮಾಹಿತಿ ನೀಡುತ್ತಾರೆಯೇ ಎಂದು ವ್ಯಂಗ್ಯವಾಡಿದರು. ಸದಸ್ಯರ ಸಲಹೆಯಂತೆ ಈ ವಿಚಾರದಲ್ಲಿ ಮಾಹಿತಿ ಕೇಳಿ ಮನಪಾಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪೈಪ್ಲೈನ್ನಿಂದ ಹದೆಗೆಟ್ಟ 91 ಕಿ.ಮೀ. ರಸ್ತೆ:
ವಿವಿಧ ಪೈಪ್ಲೈನ್ಗಳಿಂದಾಗಿ ಪುರಸಭಾ ವ್ಯಾಪ್ತಿಯ 91 ಕಿಲೋ ಮೀಟರ್ ರಸ್ತೆಯು ಹದಗೆಟ್ಟಿದ್ದು ಇದರ ದುರಸ್ತಿಗೆ ಕೆಯುಡಬ್ಲ್ಯೂಎಸ್ ಕೇವಲ 4 ಕೋಟಿ ರೂ. ಮಾತ್ರ ಠೇವಣಿ ಇಟ್ಟಿದೆ. ಈ ಅನುದಾನ ರಸ್ತೆ ದುರಸ್ತಿಗೆ ಏನೇನು ಸಾಲದು. 91 ಕಿ.ಮೀ. ರಸ್ತೆಯ ದುರಸ್ತಿಗೆ ಸುಮಾರು 16.30 ಕೋಟಿ ರೂ. ಬೇಕಾಗಬಹುದೆಂದು ಇಂಜಿನಿಯರ್ ಡೊಮೆನಿಕ್ ಡಿಮಲ್ಲೊ ಸಭೆಗೆ ಮಾಹಿತಿ ನೀಡಿದರು.
ಮುಂದಿನ ಡಿಸೆಂಬರ್ ಅಂತ್ಯದ ಒಳಗೆ ಬಂಟ್ವಾಳ ಪುರಸಭೆೆಯನ್ನು ಬಯಲು ಶೌಚ ಮುಕ್ತ ನಗರವೆಂದು ಘೋಷಿಸಲು ತೀರ್ಮಾನಿಸಲಾಯಿತು.
ಶಿಷ್ಟಾಚಾರ ಉಲ್ಲಂಘನೆ:
ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ನಿರ್ಮಾಣಗೊಂಡಿರುವ ಉದ್ಯಾನವನಕ್ಕೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸದೆ ಏಕಾಏಕಿ ಶಿಷ್ಟಾಚಾರ ಉಲ್ಲಂಘಿಸಿ ’ಜೋಡುಮಾರ್ಗ ಉದ್ಯಾನವನ’ ಎಂದು ನಾಮಕರಣಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು ಪುರಸಭೆಯ ವತಿಯಿಂದ ಉದ್ಯಾನವನದ ಸುತ್ತ ಮಣ್ಣು ಸಮತಟ್ಟು ಮಾಡಿ ಇಂಟರ್ಲಾಕ್ ಹಾಕಲು ಮುಂದಾಗಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದರು. 1.40 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಿರುವ ಗುತ್ತಿಗೆದಾರನಿಗೆ ಅದೇ ಯೋಜನೆಯ ಅನುದಾನದಲ್ಲಿ ಇಂಟರ್ಲಾಕ್ ಅಳವಡಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಸದಸ್ಯ ಗೋವಿಂದ ಪ್ರಭು ಪುರಸಭೆಯಿಂದಲೂ ಇದಕ್ಕೆ ಅನುದಾನವನ್ನು ಬಳಸಲಾಗಿರುವುದರಿಂದ ಅದರ ಪೂರ್ತಿ ಖರ್ಚು ವೆಚ್ಚದ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡಿದ ಬಳಿಕವೇ ಉದ್ಯಾನವನದ ನಿರ್ವಹಣೆಯ ಕುರಿತು ತೀರ್ಮಾನಿಸುವ ಎಂದು ಚರ್ಚೆಗೆ ತೆರೆ ಎಳೆದರು.
ಅಧ್ಯಕ್ಷ ರಾಮಕೃಷ್ಣ ಆಳ್ವ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕಲಾಪ ನಡೆಸಿದರು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ವೇದಿಕೆಯಲ್ಲಿದ್ದರು. ಸದಸ್ಯರಾದ ವಾಸು ಪೂಜಾರಿ, ಗಂಗಾಧರ, ಪ್ರವೀಣ ಬಿ., ಜಗದೀಶ್ ಕುಂದರ್, ವಸಂತಿ, ಇಕ್ಬಾಲ್ ಗೂಡಿನಬಳಿ, ಮುನೀಶ್ ಅಲಿ, ಶರೀಫ್, ಮುಮ್ತಾಝ್, ಸುಗುಣಾ ಕಿಣಿ, ಭಾಸ್ಕರ್ ಟೈಲರ್ ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ ವಂದಿಸಿದರು.
ಮತ್ತೆ ಪ್ರತಿಧ್ವನಿಸಿದ ಘನತ್ಯಾಜ್ಯ ವಿಲೇವಾರಿ ಸಮಸ್ಯೆ
ಪುರಸಭಾ ವ್ಯಾಪ್ತಿಯಲ್ಲಿ ಅಸಮರ್ಪಕವಾಗಿ ನಡೆಯುತ್ತಿರುವ ಘನ ತ್ಯಾಜ ವಿಲೇವಾರಿ ವಿಚಾರ ಮಂಗಳವಾರ ನಡೆದ ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಮತ್ತೆ ಪ್ರತಿದ್ವನಿಸಿತ್ತಲ್ಲದೆ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರ ವಿರುದ್ಧ ಸರ್ವ ಸದಸ್ಯರು ಪಕ್ಷ ಬೇಧ ಮರೆತು ಮತ್ತೊಮ್ಮೆ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದರು.
ಅಜೆಂಡಾ ಮೇಲಿನ ಚರ್ಚೆಯ ವೇಳೆ ವಿರೋಧ ಪಕ್ಷದ ಸದಸ್ಯ ಗೋವಿಂದ ಪ್ರಭು ವಿಷಯ ಪ್ರಸ್ತಾಪಿಸಿ ಘನ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ. ಈ ವಿಚಾರದಲ್ಲಿ ಸಹಾಯಕ ಕಮೀಷನರ್ ಅವರ ಉಪಸ್ಥಿತಿಯಲ್ಲಿ ಸೇರಿದಂತೆ ಹಲವಾರು ಬಾರಿ ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆದಿದೆ ಹೊರತು ಕಸ ವಿಲೇವಾರಿ ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಕೂಡಾ ಧ್ವನಿ ಗೂಡಿಸಿ ಗುತ್ತಿಗೆದಾರರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಒಂದು ಹಂತದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಗುತ್ತಿಗೆದಾರ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಸರ್ವಾನುಮತದ ನಿರ್ಣಯ ಕೈಗೊಳ್ಳಬೇಕೆಂದು ಸದಸ್ಯ ದೇವದಾಸ ಶೆಟ್ಟಿ ಬೇಡಿಕೆಯನ್ನು ಮುಂದಿಟ್ಟರು. ಆದರೆ ಕಾಂಗ್ರೆಸ್ ಸದಸ್ಯರು ಮಧ್ಯ ಪ್ರವೇಶಿಸಿ ಈ ವಿಚಾರದಲ್ಲಿ ವಿಶೇಷ ಸಭೆ ಕರೆದು ನಿರ್ಣಯ ಕೈಗೊಳ್ಳುವ ಎಂದು ಸಲಹೆ ನೀಡಿದರು. ಈ ವೇಳೆ ಬಿಜೆಪಿ ಸದಸ್ಯರು ಇದೇ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಬೇಕೆಂದು ಪಟ್ಟು ಹಿಡಿದರು.