ಪಾಕ್ ಕಲಾವಿದರು ದೇಶದ ಭದ್ರತೆಗೆ ಬೆದರಿಕೆ: ಚೌಹಾಣ್
Update: 2016-10-05 14:05 GMT
ಹೊಸದಿಲ್ಲಿ,ಅ.5: ಪಾಕಿಸ್ತಾನಿ ಕಲಾವಿದರನ್ನು ಭಾರತಕ್ಕೆ ಕರೆಸುವುದು ದೇಶದ ‘ಆರ್ಥಿಕತೆ ಮತ್ತು ಭದ್ರತೆ’ಗೆ ಬೆದರಿಕೆಯಾಗಿದೆ ಎಂದು ಹೇಳುವ ಮೂಲಕ ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(ಎಫ್ಟಿಐಐ)ಯ ಅಧ್ಯಕ್ಷ ಗಜೇಂದ್ರ ಚೌಹಾಣ್ ಅವರು ಪಾಕ್ ಕಲಾವಿದರನ್ನು ಭಾರತವು ನಿಷೇಧಿಸಬೇಕೆ ಎಂಬ ಕುರಿತು ನಡೆಯುತ್ತಿರುವ ಚರ್ಚೆಯ ಭಾಗವಾಗಿದ್ದಾರೆ.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಭಾರತದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಹೀಗಾಗಿ ಗಡಿಯಾಚೆಯ ಕಲಾವಿದರು ಮತ್ತು ಗಾಯಕರು ಭಾರತಕ್ಕೆ ಅಗತ್ಯವಿಲ್ಲ ಎಂದು ಹೇಳಿದರು.
ವಿದೇಶಿ ಕಲಾವಿದರನ್ನು ನೇಮಿಸಿಕೊಳ್ಳುವುದರಿಂದ ಪ್ರತಿಭಾವಂತ ಭಾರತೀಯ ಕಲಾವಿದರು ಕೆಲಸವಿಲ್ಲದೆ ಸೊರಗುವಂತಾಗುತ್ತದೆ ಎಂದರು.