×
Ad

ವಿಶ್ವವಿದ್ಯಾನಿಲಯಗಳ ಕಾಯ್ದೆಗೆ ತಿದ್ದುಪಡಿ ಅಗತ್ಯ: ಐವನ್ ಡಿಸೋಜ

Update: 2016-10-05 21:25 IST

ಮಂಗಳೂರು, ಅ.5: ವಿಶ್ವವಿದ್ಯಾನಿಲಯಗಳ ಕಾಯ್ದೆಗೆ ಸಕಾಲದಲ್ಲಿ ತಿದ್ದುಪಡಿ ಅಗತ್ಯವಿದೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ಅವರು ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನ ನೂತನ ಕೋರ್ಸ್‌ಗಳ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡುತ್ತಿದ್ದರು.

2000ನೆ ಇಸವಿಯ ನಂತರ ವಿಶ್ವ ವಿದ್ಯಾನಿಲಯ ಕಾಯ್ದೆಗೆ ತಿದ್ದುಪಡಿಯಾಗಿಲ್ಲ. ಪರಿಣಾಮವಾಗಿ ಬಹಳ ಹಿಂದಿನ ನಿಯಮಗಳನ್ನು ವಿಶ್ವವಿದ್ಯಾನಿಲಯಗಳು ಅನುಸರಿಸಿಕೊಂಡು ಬರುತ್ತಿವೆ. ಪ್ರಸಕ್ತ ಕಾಲ ಘಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸದೆ ವಿಶ್ವವಿದ್ಯಾನಿಲಯಗಳು ಹಿಂದಿನ ಕ್ರಮದಲ್ಲಿ ಮುಂದುವರಿಯುತ್ತಿರುವ ಕಾರಣ ಹಲವು ವಿಷಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ಸವಾಲುಗಳನ್ನು ಎದುರಿಸಲು ಪೂರಕವಾದ ವಾತವರಣವನ್ನು ವಿಶ್ವ ವಿದ್ಯಾನಿಲಯಗಳು ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳ ಕಾಯ್ದೆಯನ್ನು ಪ್ರತಿ ಆರು ತಿಂಗಳಿಗೊಮ್ಮೆಯಾದರೂ ತಿದ್ದುಪಡಿಯಾಗಬೇಕಾದ ಅಗತ್ಯವಿದೆ ಎಂದು ಐವನ್ ಡಿಸೋಜ ತಿಳಿಸಿದರು.

ಕ್ರೀಡಾ ಚಟುವಟಿಕೆ ಕುಂಠಿತ

ವಿಶ್ವ ವಿದ್ಯಾನಿಲಯಗಳ ಸೆಮಿಸ್ಟರ್ ಪದ್ಧತಿಯ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ದೂರಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡುವ ಪದ್ಧತಿ ಜಾರಿಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸಮಗ್ರ ಕ್ರೀಡಾ ನೀತಿ ಜಾರಿಯಾಗಬೇಕಾಗಿದೆ ಎಂದು ಐವನ್ ತಿಳಿಸಿದರು.

ಸಂಧ್ಯಾ ಕಾಲೇಜಿನ ಆರಂಭದಿಂದ ವಿದ್ಯಾರ್ಥಿಗಳು ಗಳಿಕೆಯೊಂದಿಗೆ ಕಲಿಕೆಯನ್ನು ಮುಂದುವರಿಸಬಹುದಾಗಿದೆ. ಪ್ರಸಕ್ತ ಉನ್ನತ ಶಿಕ್ಷಣ ಮುಂದುವರಿಸುವವರ ಸಂಖ್ಯೆ ಕಡಿಮೆ ಇದೆ. ಇದು ಉತ್ತಮ ಗೊಳ್ಳಲು ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಸಂಧ್ಯಾ ಕಾಲೇಜು ಪೂರಕ ಎಂದರು.

ಕಾಲೇಜಿಗೆ ಸೇರಬೇಕೆಂಬ ಕನಸು ನನಸಾಗಿದೆ

ಮಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ವೃತ್ತಿಯಲ್ಲಿ ತೊಡಗಿಕೊಂಡ ನನಗೆ ಮಂಗಳೂರು ಕಾಲೇಜಿನಲ್ಲಿ ಓದಬೇಕು, ಪತ್ರಕರ್ತನಾಗಬೇಕು ಎಂಬ ಕನಸಿತ್ತು. ಆದರೆ ಹಗಲು ಹೊತ್ತು ದುಡಿಮೆ ಅನಿವಾರ್ಯವಾಗಿತ್ತು. ಅದೇ ಸಂದರ್ಭದಲ್ಲಿ ಸಂಧ್ಯಾಕಾಲೇಜು ಆರಂಭಗೊಂಡ ಕಾರಣ ನನಗೆ ಕಾಲೇಜು ಸೇರುವ ಕನಸು ನನಸಾಗಿದೆ ಎಂದು ಸಂಧ್ಯಾಕಾಲೇಜು ಸೇರಿದ ಮುಹಮ್ಮದ್ ನಝೀರ್ ಅನಿಸಿಕೆ ವ್ಯಕ್ತಪಡಿಸಿದರು.

ಕಾಲೇಜಿನ ಆವರಣ ಸುರಕ್ಷಿತವಾಗಿದೆ

ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಪದವಿ ಮಾಡಬೇಕೆಂಬ ಆಸೆ ಇದ್ದರೂ ಆರ್ಥಿಕ ಸಂಕಷ್ಟದಿಂದ ಸಾಧ್ಯವಾಗಲಿಲ್ಲ. ಈಗ ಮದುವೆಯಾದ ಬಳಿಕ ಗಂಡನ ಪ್ರೋತ್ಸಾಹದಿಂದ ಬಿ.ಕಾಂ ಓದಲು ಅವಕಾಶವಾಗಿದೆ. ಸಂಜೆ ಕಾಲೇಜಿಗೆ ಹೋಗುವ ಭಯ ಇದ್ದರೂ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ಹೆಣ್ಣು ಮಕ್ಕಳಿಗೆ ಸುರಕ್ಷಿತ ಕಾಲೇಜು ಎಂಬ ಭಾವನೆ ಮೂಡಿಸಿದೆ ಎಂದು ಸಂಧ್ಯಾಕಾಲೇಜಿನ ವಿದ್ಯಾರ್ಥಿ ಆಶ್ವಿನಿ ಪ್ರಭು ತಿಳಿಸಿದ್ದಾರೆ.

ಸಮಾರಂಭದಲ್ಲಿ ಸಂಧ್ಯಾ ಕಾಲೇಜಿನ ಬಿ.ಎ, ಬಿ.ಕಾಂ, ಎಂ.ಎ(ಕೊಂಕಣಿ), ಫ್ರೆಂಚ್ ಮತ್ತು ಜರ್ಮಿನಿ ಡಿಪ್ಲೋಮಾ ಕೋರ್ಸ್‌ಗಳನ್ನು ಶಾಸಕ ಐವನ್ ಡಿ ಸೋಜ ಉದ್ಘಾಟಿಸಿದರು.

ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಪ್ರೊ.ಕೆ.ಎಂ. ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸಮಿತಿ ಸದಸ್ಯರಾದ ಜಯಪ್ರಕಾಶ್ ರಾವ್, ಮೋಹನ್ ಚಂದ್ರ ನಂಬಿಯಾರ್, ಹರೀಶ್ ಆಚಾರ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ, ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಾಂಶುಪಾಲ ಡಾ.ಉದಯ ಕುಮಾರ್, ಮಂಗಳೂರು ವಿಶ್ವ ವಿದ್ಯಾನಿಲಯ ಸಂಧ್ಯಾಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News