×
Ad

ಚಿಕ್ಕಪ್ಪನ ಪೆಟ್ರೋಲ್ ಪಂಪ್‌ಗೆ ಭೇಟಿ ನೀಡಿ ಮಾಪನ ಪರೀಕ್ಷಿಸಿದ ಆಹಾರ ಸಚಿವರು!

Update: 2016-10-08 21:20 IST

ವಿಟ್ಲ, ಅ.8: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ. ಖಾದರ್ ಅವರು ವಿಟ್ಲ ಸಮೀಪದ ಗ್ರಾಮೀಣ ಪ್ರದೇಶವಾದ ಪುಣಚ ಪರಿಯಾಲ್ತಡ್ಕದಲ್ಲಿರುವ ತಮ್ಮ ಚಿಕ್ಕಪ್ಪನ ಪೆಟ್ರೋಲ್ ಪಂಪ್‌ಗೆ ಭೇಟಿ ನೀಡಿ ಪೆಟ್ರೋಲಿಯಂ ಅಳತೆಯನ್ನು ಪರಿಶೀಲಿಸಿದರು.

ಆಹಾರ ಸಚಿವರ ತಂದೆ, ಮಾಜಿ ಶಾಸಕ ದಿವಂಗತ ಯು.ಟಿ. ಫರೀದ್ ಅವರ ಸ್ವಂತ ತಮ್ಮ ಯು.ಟಿ. ಮೂಸಕುಂಞಿ ಮತ್ತು ಅವರ ಮಕ್ಕಳಿಗೆ ಸೇರಿದ ಈ ಪಂಪ್‌ನ್ನು ಯು.ಟಿ. ಮೂಸಕುಂಞಿ ಅವರ ಪುತ್ರ ಯು.ಟಿ. ಇರ್ಶಾದ್ ಪಂಪನ್ನು ಮುನ್ನಡೆಸುತ್ತಿದ್ದಾರೆ.

ವಿಟ್ಲದ ಪುಣಚ ಸಮೀಪ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಯು.ಟಿ. ಖಾದರ್ ತನ್ನ ಸಂಬಂಧಿಕರಿಗೆ ಹಾಗೂ ಇತರ ಯಾರಿಗೂ ತಿಳಿಸದೆ ಪುಣಚ ಪರಿಯಾಲ್ತಡ್ಕ ಪೆಟ್ರೋಲ್ ಪಂಪಿಗೆ ಕಾರು ತಿರುಗಿಸುವಂತೆ ಚಾಲಕನ ಬಳಿ ಹೇಳಿದರು. ಪಂಪಿನ ಸಿಬ್ಬಂದಿಗೆ 5 ಲೀಟರ್ ಅಳತೆ ಮಾಪನ ಪಾತ್ರೆ ಗೆ ಡೀಸೆಲ್ ತುಂಬಿಸಲು ಸೂಚಿಸಿದರು. ಸಚಿವರ ಅನಿರೀಕ್ಷಿತ ಆದೇಶಕ್ಕೆ ವಿಚಲಿತರಾದ ಪಂಪ್ ಸಿಬ್ಬಂದಿ ಕ್ಯಾನ್‌ಗೆ ಡೀಸೆಲ್ ತುಂಬಿಸಿದರು. 5 ಲೀಟರ್ ತುಂಬಿದ ತಕ್ಷಣ ಅಳತೆಯನ್ನು ಪರಿಶೀಲಿಸಿದ ಸಚಿವರು ಅಳತೆ ಸರಿಯಾಗಿರುವುದನ್ನು ಮನಗಂಡು ತೃಪ್ತಿಪಟ್ಟರು ಮತ್ತು ಪಂಪಿನ ನ್ಯಾಯಯುತ ವ್ಯವಹಾರವನ್ನು ಶ್ಲಾಘಿಸಿದರು.

ಅಳತೆಯಲ್ಲಿ ನ್ಯಾಯ ಮತ್ತು ಮೌಲ್ಯದಲ್ಲಿ ಪಾರದರ್ಶಕತೆ, ವ್ಯಾಪಾರದಲ್ಲಿ ದಕ್ಷತೆ ಇದ್ದರೆ ಪೆಟ್ರೋಲ್ ಪಂಪನ್ನು ಸಾರ್ವಜನಿಕರು ಹುಡುಕಿಕೊಂಡು ಬರುತ್ತಾರೆ. ಸದಾ ಮೌಲ್ಯ ಮತ್ತು ನ್ಯಾಯಯುತವಾಗಿ ಕಾರ್ಯಾಚರಿಸಿ ಎಂದು ಪೆಟ್ರೋಲ್ ಪಂಪು ನಿರ್ವಾಹಕರಿಗೆ ಆಹಾರ ಸಚಿವರು ಮನವಿ ಮಾಡಿದರು. ಸಚಿವರ ಈ ದಿಢೀರ್ ಭೇಟಿ ಮತ್ತು ಪರಿಶೀಲನೆಯನ್ನರಿತ ಸಾರ್ವಜನಿಕರು ಪುಣಚ ಪರಿಯಾಲ್ತಡ್ಕದ ಪೆಟ್ರೋಲ್ ಪಂಪಿನಲ್ಲಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿ ಸಚಿವರ ಕಾರ್ಯವೈಖರಿಯನ್ನು ವೀಕ್ಷಿಸಿದರು.

ವರದಿ: ರಶೀದ್ ವಿಟ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News