ಬಾಲವನದ ಕಾರ್ಯಕ್ರಮಗಳು ಸರ್ಕಾರಕ್ಕೆ ಸೀಮಿತವಾಗದಿರಲಿ: ರಮಾನಾಥ ರೈ
ಪುತ್ತೂರು,ಅ.11: ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಡಾ. ಶಿವರಾಮ ಕಾರಂತರು ಕೇವಲ ರಾಜ್ಯಕ್ಕೆ ಮಾತ್ರವಲ್ಲದೆ ರಾಷ್ಟ್ರದ ಸೊತ್ತಾಗಿದ್ದಾರೆ. ಅವರ ಕರ್ಮಭೂಮಿಯಾದ ಬಾಲವನದಲ್ಲಿ ನಡೆಯುವ ಕಾರ್ಯಕ್ರಮಗಳು ಕೇವಲ ಸರ್ಕಾರದ ಕಾರ್ಯಕ್ರಮವಾಗಿರದೆ ಜನರ ಕಾರ್ಯಕ್ರಮವಾಗಬೇಕು. ಈ ನಿಟ್ಟಿದಲ್ಲಿ ಇಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಜನರ ಆಸಕ್ತಿ ಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಸೋಮವಾರ ಪುತ್ತೂರಿನ ಪರ್ಲಡ್ಕದಲ್ಲಿರುವ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ನಡೆದ ಕಾರಂತರ ಜನ್ಮದಿನಾಚರಣೆ ಮತ್ತು ಕಾರಂತರ ಸಾಹಿತ್ಯ ಲೋಕ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಬಾಲವನ ಚಟುವಟಿಕೆಯ ಕೇಂದ್ರವಾಗಿರಬೇಕು ಹೊರತು ಗೃಹಪ್ರವೇಶ ನಡೆಯದ ಮನೆಯಂತೆ ಖಾಲಿಯಾಗಿರಬಾರದು ಎಂದ ಸಚಿವರು ಡಾ. ಕಾರಂತರಿಗೆ ಬದುಕಿನಲ್ಲಿ ಸಿಗಬೇಕಾಗಿರುವ ಎಲ್ಲಾ ಗೌರವಗಳು ಸಿಕ್ಕಿದೆ. ಮಂಗಳೂರಿನ ಪಿಲಿಕುಲ ನಿಸರ್ಗಧಾಮಕ್ಕೆ ಡಾ. ಕಾರಂತರ ಹೆಸರನ್ನು ಇಡಲಾಗಿದ್ದು, ಇದೀಗ ಈ ನಿಸರ್ಗಧಾಮ ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಹಂತದಲ್ಲಿದೆ. ಈ ಮೂಲಕ ಕಾರಂತರ ಹೆಸರನ್ನು ಚಿರಸ್ಥಾಯಿಗೊಳಿಸುವ ಕೆಲಸ ನಡೆದಿದೆ ಎಂದರು.
ಡಾ. ಕಾರಂತರ ಸಂಸ್ಮರಣೆ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕಿ ಪ್ರೊ. ಭುವನೇಶ್ವರಿ ಹೆಗ್ಡೆ ಅವರು ನಿಸರ್ಗದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕಾರಂತರ ಆಶಯದಂತೆ ಬಾಲವನದಲ್ಲಿ ಪರಿಸರವನ್ನು ಕಾಪಾಡಿಕೊಂಡು ಅಭಿವೃದ್ಧಿ ಕೆಲಸಗಳು ನಡೆಯಲಿ. ಮರಗಿಡಗಳನ್ನು ಉಳಿಸಿ ಕಾರಂತರನ್ನು ಗೌರವಿಸುವ ಕೆಲಸವಾಗಲಿ ಎಂದರು. ಜಾತಿ, ಮತ ಪಂಥ ಮೀರಿ ಬದುಕಿದ ಡಾ. ಕಾರಂತರು ತಾವು ನಾಸ್ತಿಕರಾಗಿದ್ದರೂ ಆಸ್ತಿಕರನ್ನು ಎಂದೂ ಗೇಲಿ ಮಾಡಿಲ್ಲ. ಅನ್ಯಾಯವನ್ನು ಎಂದೂ ಸಹಿಸಿಕೊಳ್ಳದ ಅವರು ಅನ್ಯಾಯ ಕಂಡಾಗ ಯಾರನ್ನೂ ಕಾಯದೆ ಎದ್ದು ನಿಂತು ವಿರೋಧಿಸುವ ಒಂಟಿ ಸಲಗವಾಗಿದ್ದರು. ಸೋಲನ್ನು ಸಹಜವಾಗಿ ಸ್ವೀಕರಿಸುತ್ತಿದ್ದ ಕಾರಂತರು ಚುನಾವಣೆಯಲ್ಲಿ ಸೋತರೂ ಬದುಕಿನಲ್ಲಿ ಸೋಲು ಕಾಣಲಿಲ್ಲ. ಸರ್ಕಾರದ ಪ್ರೊಟೋಕಾಲ್ ಬಿಟ್ಟು ಬಾಲವನದ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು. ಡಾ. ಕಾರಂತರ ಒಡನಾಡಿ ಮಂಚಿಯ ಹಿರಿಯ ಕೃಷಿಕ ಪಡಾರು ಮಹಾಬಲೇಶ್ವರ ಭಟ್ ಮಾತನಾಡಿ ನನ್ನ ಕೃಷಿಯನ್ನು ಕಂಡು ತನಗೆ ಉತ್ತಮ ಸರ್ಟಿಫಿಕೇಟ್ ನೀಡಿರುವ ಕಾರಂತರೊಂದಿಗೆ ಯಕ್ಷಗಾನದ ಗ್ರಂಥ ಹುಡುಕಾಟಕ್ಕಾಗಿ ತಾನು ಅವರೊಂದಿಗೆ ಉತ್ತರ ಕನ್ನಡದ ಮನೆ ಮನೆಗಳಿಗೆ ತೆರಳಿರುವುದನ್ನು ನೆನಪಿಸಿಕೊಂಡರು.
ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಸಹಾಯಕ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್ ಉಪಸ್ಥಿತರಿದ್ದರು. ಬಾಲವನ ಸಮಿತಿ ಅಧ್ಯಕ್ಷರಾದ ಸಹಾಯಕ ಆಯುಕ್ತ ಡಾ. ರಾಜೇಂದ್ರ ಕೆ.ವಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ವಂದಿಸಿರು. ಬಾಲವನ ಸಮಿತಿ ಸದಸ್ಯರಾದ ಪ್ರೊ. ಬಿ.ಜೆ.ಸುವರ್ಣ ಮತ್ತು ವಿದ್ಯಾಗೌರಿ ಕಾರ್ಯಕ್ರಮ ನಿರೂಪಿಸಿದರು.